ದಾಂಡೇಲಿಯ ಪರಸಪ್ಪ ಮಹಾರಾಜವರ್ ಅವರು ನರೇಶ ಜೋಶಿ ಅವರ ಜೊತೆ ಸೇರಿ ಸರಾಯಿ ಅಂಗಡಿ ತೆರೆಯಲು ನಿರ್ಧರಿಸಿದ್ದು, ಈ ಯೋಜನೆಯ ಪಾಲುದಾರರಾಗಿದ್ದ ಗೋವಾದ ಲಕ್ಷೀನಾರಾಯಣ ದೋಂಡಾ ಅವರು ಹಣಪಡೆದು ಮೋಸ ಮಾಡಿದ್ದಾರೆ!
ದಾಂಡೇಲಿಯ ಸಾಯಿನಗರದಲ್ಲಿ ಪರಸಪ್ಪ ತಿಮ್ಮಪ್ಪ ಮಹಾರಾಜವರ್ (67) ಅವರು ವಾಸವಾಗಿದ್ದಾರೆ. ಸರ್ಕಾರಿ ನೌಕರರಾಗಿದ್ದ ಅವರು ನಿವೃತ್ತಿ ನಂತರ ಉದ್ದಿಮೆ ನಡೆಸಲು ನಿರ್ಧರಿಸಿದ್ದು, ಸದ್ಯ ಗೋವಾದಲ್ಲಿರುವ ಓಡಿಸ್ಸಾದ ಲಕ್ಷಿನಾರಾಯಣ ಡೋರಾ (ಆಕಾಶ ಬೀಮಸೇನ ಡೋರಾ) ಅವರು ಪರಿಚಿತರಾದರು. ಲಕ್ಷಿನಾರಾಯಣ ಡೋರಾ ಅವರು ಪರಸಪ್ಪ ಮಹಾರಾಜವರ್ ಅವರ ಮನೆಗೆ ಬಂದು ವ್ಯವಹಾರದ ಮಾತುಕಥೆ ಮಾಡಿದರು.
`ಸರಾಯಿ ಅಂಗಡಿ ತೆರೆದರೆ ಭಾರೀ ಪ್ರಮಾಣದ ಲಾಭವಿದೆ. ನಾವು ಬಾರ್ & ರೆಸ್ಟೋರೆಂಟ್ ವ್ಯವಹಾರ ಮಾಡೋಣ’ ಎಂದು ಲಕ್ಷಿನಾರಾಯಣ ಡೋರಾ ಅವರು ಪ್ರಸ್ತಾಪಿಸಿದರು. `3.59 ಲಕ್ಷ ರೂ ಹೂಡಿಕೆ ಮಾಡಿದರೆ ಪ್ರತಿ ತಿಂಗಳು 50 ಸಾವಿರ ರೂ ಲಾಭ ಕೊಡುವೆ’ ಎಂಬ ಆಮೀಷ ಒಡ್ಡಿದರು. `ಕುಟುಂಬದವರ ಜೊತೆ ಚರ್ಚಿಸುವೆ’ ಎಂದು ಪರಸಪ್ಪ ಮಹಾರಾಜವರ್ ಅವರು ಹೇಳಿದರು.
ಇದಾದ ನಂತರ ಪರಸಪ್ಪ ಮಹಾರಾಜವರ್ ಅವರು ತಮ್ಮ ಮಗನ ಸ್ನೇಹಿತ ನರೇಶ ಜೋಶಿ ಅವರಿಗೆ ಫೋನ್ ಮಾಡಿದರು. `ಒಳ್ಳೆ ಆದಾಯ ಕೊಡುವ ಉದ್ಯಮ ಒಂದಿದೆ. ಒಟ್ಟಿಗೆ ಹೂಡಿಕೆ ಮಾಡೋಣ’ ಎಂಬ ಆಮಂತ್ರಣ ನೀಡಿದರು. ನರೇಶ ಜೋಶಿ ಹಾಗೂ ಪರಸಪ್ಪ ಮಹಾರಾಜವರ್ ಸೇರಿ ಸರಾಯಿ ಅಂಗಡಿ ತೆರೆಯುವುದಕ್ಕಾಗಿ ಲಕ್ಷೀನಾರಾಯಣ ದೋಂಡಾ ಅವರ ಬ್ಯಾಂಕ್ ಖಾತೆಗೆ ಹಣ ಹಾಕಿದರು.
ಆದರೆ, ಆ ಹಣಪಡೆದ ಲಕ್ಷೀನಾರಾಯಣ ದೋಂಡಾ ಅವರು ಎಲ್ಲಿಯೂ ಬಾರ್ & ರೆಸ್ಟೊರೆಂಟ್ ತೆರೆಯಲಿಲ್ಲ. ಲಾಭದ ಹಣವನ್ನು ಕೊಡಲಿಲ್ಲ. ಕೊಟ್ಟ ಹೂಡಿಕೆಯನ್ನು ಹಿಂತಿರುಗಿಸಲಿಲ್ಲ. 2024ರಲ್ಲಿಯೇ ಈ ಎಲ್ಲಾ ವ್ಯವಹಾರ ನಡೆದಿದ್ದು, ಹಣ ಮರು ಪಾವತಿಸುವಂತೆ ಪರಸಪ್ಪ ಮಹಾರಾಜವರ್ ಹಾಗೂ ನರೇಶ ಜೋಶಿ ಸಾಕಷ್ಟು ಬಾರಿ ಕೇಳಿಕೊಂಡರು.
ಆದರೆ, ಈವರೆಗೂ ಹಣಕೊಡದ ಕಾರಣ ಸಿಟ್ಟಾದ ಪರಸಪ್ಪ ಮಹಾರಾಜವರ್ ಅವರು ಮೋಸ ಮಾಡಿದ ಲಕ್ಷಿನಾರಾಯಣ ಡೋರಾ ವಿರುದ್ಧ ಪೊಲೀಸ್ ದೂರು ನೀಡಿದರು. ಲಾಭದ ಆಸೆ ಕಾಣಿಸಿ ಹಣಪಡೆದು ವಂಚಿಸಿದವನ ವಿರುದ್ಧ ದಾಂಡೇಲಿ ಪೊಲೀಸರು ಪ್ರಕರಣ ದಾಖಲಿಸಿದರು.