ಮುರುಡೇಶ್ವರ ಕಡಲತೀರದಲ್ಲಿ ಅಮಲಿನಲ್ಲಿ ಅಲೆದಾಡುತ್ತಿದ್ದ ಬೆಂಗಳೂರಿನ ವಿದ್ಯಾರ್ಥಿಗಳಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಬನಶಂಕರಿ ನಿವಾಸಿ ಸತೀಶ ಸೆಲ್ವರಾಜ್ (21) ಹಾಗೂ ಬೆಂಗಳೂರು ದಕ್ಷಿಣದ ಬೊಮ್ಮನಹಳ್ಳಿ ನಿವಾಸಿ ಮೋನಿಶ್ ಬಾಬು ಭಾಸ್ಕರರೆಡ್ಡಿ (18) ಅವರು ಫೆಬ್ರವರಿ 20ರಂದು ಮುರುಡೇಶ್ವರಕ್ಕೆ ಆಗಮಿಸಿದ್ದರು. ಮೋಜು ಮಸ್ತಿಯಲ್ಲಿ ತೊಡಗಿದ ಅವರು ಗಾಂಜಾ ಸೇವಿಸಿದ್ದರು. ಸಂಜೆ 6.30ರ ವೇಳೆಗೆ ಕಡಲತೀರದ ಬಳಿ ಅಲೆದಾಟ ಶುರು ಮಾಡಿದ್ದರು.
ಪಿಸೈ ಹನುಮಂತ ಬೀರಾದರ್ ಅವರು ಆ ವಿದ್ಯಾರ್ಥಿಗಳಿಬ್ಬರನ್ನು ತಡೆದು ಪ್ರಶ್ನಿಸಿದರು. ಅವರಿಬ್ಬರು ಮಾತನಾಡಲು ತಡವರಿಸಿದಾಗ ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದರು. ಆಗ, ವಿದ್ಯಾರ್ಥಿಗಳಿಬ್ಬರು ಅಡ್ಡದಾರಿ ಹಿಡಿದಿದ್ದು ಅರಿವಿಗೆ ಬಂದಿತು. ನಿಷೇಧಿತ ಗಾಂಜಾ ಬಳಕೆ ಮಾಡಿದ ಕಾರಣ ಪೊಲೀಸರು ಅವರಿಬ್ಬರನ್ನು ಬಂಧಿಸಿದರು. ಪ್ರಕರಣವನ್ನು ದಾಖಲಿಸಿದರು.