`ಭೂಮಿ ಅಗೆಯುವಾಗ 2 ಕೆಜಿ ಚಿನ್ನ ಸಿಕ್ಕಿದೆ. 10 ಲಕ್ಷ ರೂಪಾಯಿಗೆ ಅದನ್ನು ಮಾರಾಟ ಮಾಡುವೆ’ ಎಂದು ನಂಬಿಸಿ ವ್ಯಕ್ತಿಯೊಬ್ಬರಿಗೆ ಮೋಸ ಮಾಡಲಾಗಿದೆ. ಈ ಮೋಸದ ವ್ಯವಹಾರ ಸಿದ್ದಾಪುರ ತಾಲೂಕಿನಲ್ಲಿ ನಡೆದಿದೆ.
ಸಿದ್ದಾಪುರ – ಸಾಗರ ರಸ್ತೆಯಲ್ಲಿರುವ ಹಿತ್ತಲಕೊಪ್ಪ ಕ್ರಾಸಿನ ಬಳಿ ಬೆಳಗಾವಿಯ ಕುರಿ ವ್ಯಾಪಾರಿ ಆಕಾಶ ಅಬುಬಕ್ಕರ್ ಕಲಾಲ್ ಅವರು ಮೋಸ ಹೋಗಿದ್ದಾರೆ. ಚಿಕ್ಕಮಗಳೂರಿನ ಹೊಸಳ್ಳಿಯ ರವಿ ಎಂಬಾತರು 10 ಲಕ್ಷ ರೂಪಡೆದು ನಕಲಿ ಬಂಗಾರ ನೀಡಿ ಯಾಮಾರಿಸಿದ್ದಾರೆ. ಕಳೆದ ತಿಂಗಳು ನಡೆದ ಸೌದತ್ತಿ ಯಲ್ಲಮ್ಮನ ಜಾತ್ರೆಯಲ್ಲಿ ಆಕಾಶ ಕಲಾಲ್ ಹಾಗೂ ಹೊಸಳ್ಳಿಯ ರವಿ ಪರಿಚಿತರಾಗಿದ್ದು, ರವಿ ಅವರು ಆ ಪರಿಚಯವನ್ನು ತಮ್ಮ ಮೋಸಕ್ಕೆ ಬಳಸಿಕೊಂಡಿದ್ದಾರೆ. `ತನ್ನ ಮನೆಯ ನೆಲ ಅಗೆಯುವಾಗ 2 ಕೆಜಿ ಬಂಗಾರ ಸಿಕ್ಕಿದೆ’ ಎಂದು ಆಕಾಶ ಅವರ ಮಾವನಿಗೆ ಫೋನ್ ಮಾಡಿ ನಂಬಿಸಿದ ರವಿ ಅವರು ಅದರ ಮಾರಾಟ ವ್ಯವಹಾರ ನಡೆಸಲು ಸಿದ್ದಾಪುರಕ್ಕೆ ಆಮಂತ್ರಿಸಿದ್ದಾರೆ. ಮೊದಲು ಅಸಲಿ ಚಿನ್ನದ ನಾಣ್ಯ ಕೊಟ್ಟು, ಹಣಪಡೆದ ನಂತರ ನಕಲಿ ನಾಣ್ಯ ನೀಡಿ ಪರಾರಿಯಾಗಿದ್ದಾರೆ.
10 ಲಕ್ಷ ರೂಪಾಯಿಗೆ 2 ಕೆಜಿ ಚಿನ್ನ ಸಿಗುತ್ತದೆ ಎಂಬ ಆಸೆಗೆ ಬಿದ್ದ ಆಕಾಶ ಅವರು ಫೆಬ್ರವರಿ 23ರಂದು 10 ಲಕ್ಷ ರೂ ಹಣವನ್ನು ಕೊಟ್ಟು ಕೈ ಸುಟ್ಟುಕೊಂಡಿದ್ದರೆ. ಮಾವ ಮತ್ತು ತಮ್ಮನ ಜೊತೆ ಬಾಡಿಗೆ ಕಾರಿನಲ್ಲಿ ಸಿದ್ದಾಪುರಕ್ಕೆ ಬಂದಿದ್ದ ಆಕಾಶ ಅವರನ್ನು ರವಿ ಅವರು ಎಲ್ಲಾ ಕಡೆ ಸುತ್ತಾಡಿಸಿ ಕೊನೆಗೆ ಸಿದ್ದಾಪುರ-ಸಾಗರ ರಸ್ತೆಯ ಕವಂಚೂರು ಗ್ರಾಮದ ಹಿತ್ತಲಕೊಪ್ಪ ಕ್ರಾಸಿನ ಬಳಿ ಕರೆದಿದ್ದಾರೆ. ರವಿ ಅವರ ಜೊತೆ ಮತ್ತೆ 5 ಜನ ಅಪರಿಚಿತರು ಇರುವುದನ್ನು ಮೋಸ ಹೋದವರು ಗಮನಿಸಿದ್ದಾರೆ. ಅವರೆಲ್ಲರೂ ಸೇರಿ ಬಿಳಿ ಬಟ್ಟೆಯಲ್ಲಿ ಸುತ್ತಿರುವ ಎರಡು ಗಂಟುಗಳನ್ನು ನೀಡಿ, `ಅದರಲ್ಲಿ ಚಿನ್ನದ ನಾಣ್ಯಗಳಿವೆ’ ಎಂದು ನಂಬಿಸಿ ಆಕಾಶ ಅವರಿಂದ ಹತ್ತು ಲಕ್ಷ ರೂ ಪಡೆದು ಪರಾರಿಯಾಗಿದ್ದಾರೆ. ಅದಾದ ನಂತರ ನಕಲಿ ನಾಣ್ಯಗಳ ಬಗ್ಗೆ ಅರಿತ ಆಕಾಶ ಅವರು ಸಿದ್ದಾಪುರ ಠಾಣೆಯಲ್ಲಿ ಪೊಲೀಸ್ ದೂರು ನೀಡಿದ್ದಾರೆ.
Advertisement. Scroll to continue reading.
`ಅತಿ ಆಸೆ ಗತಿಗೇಡು’