ಕುಮಟಾದ ಬರ್ಗಿ ಪ್ರೌಢಶಾಲೆಯ ಮೂವರು ಮಹಿಳಾ ಸಿಬ್ಬಂದಿ 328ರೂ ಮೌಲ್ಯದ 8 ಕೆಜಿ ಅಕ್ಕಿ ಕದ್ದಿದ್ದಾರೆ. ನಂತರ ತಮ್ಮ ತಪ್ಪಿನ ಅರಿವಾಗಿ ಆ ಅಕ್ಕಿಯನ್ನು ಮರಳಿಸಿದರೂ ಅವರೆಲ್ಲರೂ ಸೇವೆಯಿಂದ ಅಮಾನತಾಗಿದ್ದಾರೆ!
ಕುಮಟಾದ ಬರ್ಗಿ ಪ್ರೌಢಶಾಲೆಯ ಮುಖ್ಯ ಅಡುಗೆ ಸಹಾಯಕಿ ಸುಮನಾ ಕಮಲಾಕರ ನಾಯ್ಕ ಅವರ ಜೊತೆ ಅಡುಗೆ ಸಹಾಯಕಿಯರಾದ ವಾಸಂತಿ ಮಹಾಬಲೇಶ್ವರ ಗಾವಡಿ ಹಾಗೂ ರಾಜೇಶ್ವರಿ ಶ್ರೀಧರ ನಾಯ್ಕ ಸೇರಿ 8 ಕೆಜಿ 200 ಗ್ರಾಂ ಅಕ್ಕಿ ಕದ್ದಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ವಿಚಾರಣೆ ವೇಳೆ ಅಕ್ಕಿ ಕದ್ದಿರುವುದಾಗಿ ಆ ಮೂವರು ತಪ್ಪು ಒಪ್ಪಿಕೊಂಡಿದ್ದು, ಆ ಅಕ್ಕಿಯನ್ನು ಮರಳಿಸಿದ್ದಾರೆ. ಆದರೆ, ಬಿಸಿಯೂಟಕ್ಕೆ ಬಳಸಬೇಕಾದ ಅಕ್ಕಿಯನ್ನು ಕದ್ದು ಸಿಕ್ಕಿಬಿದ್ದಿರುವ ಕಾರಣ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ.
ಫೆಬ್ರವರಿ 27ರಂದು ಆ ಮೂವರು ಸೇರಿ ಶಾಲೆಯ ದಾಸ್ತಾನು ಕೊಠಡಿಯಲ್ಲಿರುವ ಅಕ್ಕಿ ಕದ್ದಿದ್ದಾರೆ. ಅಕ್ಷರ ದಾಸೋಹ ಯೀಜನೆ ಅಡಿ ಶಾಲೆಗೆ ಪೂರೈಸಿದ ಅಕ್ಕಿ ಕದ್ದಿರುವ ವಿಷಯ ಶಾಲಾ ಸಮಿತಿಯವರ ಗಮನಕ್ಕೆ ಬಂದಿದೆ. ಅದಾದ ನಂತರ ಎಸ್ ಡಿ ಎಂ ಸಿ ಸಭೆ ನಡೆದಿದ್ದು, ಅಲ್ಲಿಯೂ ಕಳ್ಳತನದ ವಿಷಯ ಚರ್ಚೆ ನಡೆದಿದೆ. ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿನಾಯಕ ವೈದ್ಯ ಭೇಟಿ ಪರಿಶೀಲನೆ ಮಾಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿ ಉದಯ ನಾಯ್ಕ ಅವರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಆದರೆ, ಅಕ್ಕಿ ಕದ್ದವರ ವಿರುದ್ಧ ಪೊಲೀಸ್ ದೂರು ನೀಡಲು ಶಾಲೆಯವರು ನಿರಾಕರಿಸಿದ್ದಾರೆ. ಅದಾಗಿಯೂ, ಬಿಸಿಯೂಟದ ಅಕ್ಕಿ ಕಾಣೆಯಾದವರ ವಿರುದ್ಧ ಕ್ರಮ ಅನವಾರ್ಯ ಎಂದು ಪ್ರತಿಪಾದಿಸಿದ್ದಾರೆ. ಹೀಗಾಗಿ ಶಾಲಾ ಎಸ್ ಡಿ ಎಂ ಸಿಯವರು ಸುಮನಾ ನಾಯ್ಕ, ವಾಸಂತಿ ಗಾವಡಿ ಹಾಗೂ ರಾಜೇಶ್ವರಿ ನಾಯ್ಕ ಅವರಿಗೆ ನೋಟಿಸ್ ನೀಡಿದ್ದಾರೆ. ನೋಟಿಸ್ ನೋಡಿದ ಆ ಮೂವರು ತಮ್ಮ ತಪ್ಪೊಪ್ಪಿಗೆ ಬರೆದುಕೊಟ್ಟಿದ್ದು, ಕ್ಷಮೆ ಯಾಚಿಸಿದ್ದಾರೆ. ಅದಾದ ನಂತರ ತಪ್ಪು ತಿದ್ದಿಕೊಳ್ಳಲು ಒಂದು ಅವಕಾಶಕ್ಕಾಗಿ ಅಂಗಲಾಚಿದ್ದಾರೆ.
ಆದರೆ, ಫೆ 26ರಂದು ಸಭೆ ನಡೆಸಿದ ಪಿ ಎಂ ಪೋಷಣ ಶಕ್ತಿ ನಿರ್ಮಾಣ ಯೋಜನೆಯ ಶಿಕ್ಷಣಾಧಿಕಾರಿಗಳು ತಪ್ಪು ಮಾಡಿದವರ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಿದ್ದಾರೆ. ಒಮ್ಮೆಗೆ ಮೂವರು ಸಿಬ್ಬಂದಿಯನ್ನು ಅಮಾನತು ಮಾಡಿದರೆ ಅಕ್ಷರ ದಾಸೋಹ ಯೋಜನೆಯ ನಿರಂತರತೆ ಕಾಪಾಡಿಕೊಳ್ಳುವುದು ಕಷ್ಟ ಎಂದು ಎಸ್ ಡಿ ಎಂ ಸಿಯವರು ಹೇಳಿದ್ದಾರೆ. ಮಕ್ಕಳ ಆಹಾರ ಪೂರೈಕೆಯಲ್ಲಿ ತಾತ್ಕಾಲಿಕ ಅಡೆತಡೆ ಉಂಟಾದರೂ ತಪ್ಪು ಮಾಡಿದವರನ್ನು ಬಿಡುವುದು ನೈತಿಕವಾಗಿ ಸಾಧುವಲ್ಲ ಎಂದು ನಿರ್ಣಯಿಸಿ ಆ ಸಿಬ್ಬಂದಿಯ ನೇಮಕಾತಿ ಪ್ರಾಧಿಕಾರಿಯಾದ ಬರ್ಗಿ ಗ್ರಾ ಪಂ ಪಿಡಿಓ ಕವಿತಾ ನಾಯಕ ಅವರು ನಿರ್ಣಯಿಸಿದ್ದಾರೆ. ಈ ಹಿನ್ನಲೆ ಆ ಮೂವರ ವಿರುದ್ಧ ವಿಚಾರಣೆ ಕಾಯ್ದಿರಿಸಿ ಅಮಾನತು ಆದೇಶ ಹೊರಡಿಸಿದ್ದಾರೆ.