14 ವರ್ಷದ ಹುಡುಗಿಗೆ 15 ವರ್ಷದ ಹುಡುಗನೊಬ್ಬ ಮೆಸೆಜ್ ಮಾಡಿದ್ದು, ಇದೇ ವಿಷಯ ಎರಡು ಕುಟುಂಬಗಳ ನಡುವಿನ ವೈಮನಸ್ಸಿಗೆ ಕಾರಣವಾಗಿದೆ. ಮೆಸೆಜ್ ಮಾಡಿದ ಹುಡುಗನಿಗೆ ಮತ್ತೊಬ್ಬ ವ್ಯಕ್ತಿ ಥಳಿಸಿದ್ದು, ನ್ಯಾಯಕ್ಕಾಗಿ ಹುಡುಗನ ತಾಯಿ ಪೊಲೀಸರ ಮೊರೆ ಹೋಗಿದ್ದಾರೆ.
ಭಟ್ಕಳ ಮೂಸಾ ನಗರದ ಈಶ್ರತ್ ಜಹಾ ಸಯ್ಯದ್ ಸಜ್ಜದ್ ಹುಸೇನ್ ಫಿರಜಾದೆ ಅವರ ಮಗ ಸಾಹೀದ್ ಅಬೀಮ್ (ಅಪ್ತಾಪ್ತನ ಹೆಸರು ಬದಲಿಸಿದೆ) ಅವರು ಹುಡುಗಿಯೊಬ್ಬರ ಬಳಿ ಮಾತನಾಡಿದ್ದಾರೆ. ಅದಾದ ನಂತರ ಆ ಹುಡುಗಿಗೆ ಮೆಸೆಜ್ ಮಾಡಿದ್ದಾರೆ. ಜಿನಾ ಅನಾನ್ (ಅಪ್ರಾಪ್ತೆಯ ಹೆಸರು ಬದಲಿಸಿದೆ) ಅವರಿಗೆ ಮೆಸೆಜ್ ಬಂದಿದ್ದನ್ನು ಅವರ ತಾಯಿ ಆಯಿಷಾ ಶಾಹೀನ್ ಸಿದ್ದಿಬಾಬಾ ಅವರು ನೋಡಿದ್ದಾರೆ. ಈ ವಿಷಯ ಹಸನ್ ಸಾಬೀರ್ ಸಿದ್ದಿಬಾಪಾ ಮಹ್ಮದ್ ನಾಸೀರ್ ಸಿದ್ದಿಬಾಪಾ ಅವರ ಗಮನಕ್ಕೆ ಬಂದಿದೆ.
ಮೆಸೆಜ್ ಮಾಡಿದ ಹುಡುಗ ಹಾಗೂ ಹುಡುಗಿ ಅಕ್ಕಪಕ್ಕದ ಮನೆಯವರಾಗಿದ್ದು, ಅವರಿಬ್ಬರು ಮಾತನಾಡಬಾರದು ಎಂದು ಹಸನ್ ಸಾಬೀರ್ ಸಿದ್ದಿಬಾಪಾ ಅವರು ತಾಕೀತು ಮಾಡಿದ್ದಾರೆ. ಅದಾಗಿಯೂ ಆ ಹುಡುಗ ಮಾತು ಹಾಗೂ ಮೆಸೆಜ್ ಮುಂದುವರೆಸಿದ ಕಾರಣ ಹಸನ್ ಸಾಬೀರ್ ಸಿದ್ದಿಬಾಪಾ ಅವರು ಸಿಟ್ಟಾಗಿದ್ದಾರೆ. ಮಾರ್ಚ 12ರಂದು ಬೆಳಗ್ಗೆ ಹಸನ್ ಸಾಬೀರ್ ಸಿದ್ದಿಬಾಪಾ ಅವರು ಆ ಹುಡುಗನನ್ನು ಜಾಲಿ ಕಡಲತೀರಕ್ಕೆ ಕರೆದೊಯ್ದು, ಅಲ್ಲಿ ಹಿಗ್ಗಾಮುಗ್ಗ ಥಳಿಸಿದ್ದಾರೆ.
ಹಸನ್ ಸಾಬೀರ್ ಸಿದ್ದಿಬಾಪಾ ಅವರು ಬಾಲಕ ಸಾಹೀದ್ ಅಬೀಮ್ ಅವರ ಕೆನ್ನೆಗೆ ಬಾರಿಸಿದ್ದಾರೆ. ಮೂರು ಏಟು ಕೊಡುವವವರೆಗೆ ಸಾಹೀದ್ ಅಬೀಮ್ ನೆಲಕ್ಕೆ ಬಿದ್ದಿದ್ದು, ಮೆಸೆಜ್ ಮಾಡಿದ ಮೊಬೈಲಿನ ಚಾರ್ಜರಿನಿಂದ ಬಾಸುಂಡೆ ಬರುವ ರೀತಿ ಬಾಲಕನಿಗೆ ಹೊಡೆದಿದ್ದಾರೆ. ಥಳಿತಕ್ಕೆ ಒಳಗಾದ ಬಾಲಕನ ಕಿವಿಯೊಳಗಿನ ತಮಟೆಗೆ ಸಮಸ್ಯೆಯಾಗಿದೆ. `ಹೊಡೆದ ವಿಷಯ ಯಾರಿಗಾದರೂ ಹೇಳಿದರೆ ಕೊಂದು ಸಮುದ್ರಕ್ಕೆ ಎಸೆಯುವೆ’ ಎಂದು
ಹಸನ್ ಸಾಬೀರ್ ಸಿದ್ದಿಬಾಪಾ ಅವರು ಬಾಲಕನಿಗೆ ಬೆದರಿಸಿದ್ದಾರೆ.
ಕಿವಿ ಸಮಸ್ಯೆಯಾದ ಬಗ್ಗೆ ಈಶ್ರತ್ ಜಹಾ ಸಯ್ಯದ್ ಸಜ್ಜದ್ ಹುಸೇನ್ ಫಿರಜಾದೆ ಅವರು ಮಗನಲ್ಲಿ ಪ್ರಶ್ನಿಸಿದಾಗ ಈ ಎಲ್ಲಾ ವಿಷಯ ಹೊರಬಿದ್ದಿದೆ. ಬಾಲಕನಿಗೆ ಥಳಿಸಿದ ಹಸನ್ ಸಾಬೀರ್ ಸಿದ್ದಿಬಾಪಾ ಮಹ್ಮದ್ ನಾಸೀರ್ ಸಿದ್ದಿಬಾಪಾ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.