ಕುಮಟಾ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ದುಡ್ಡು ಕೊಟ್ಟರೂ ಸಮಯಕ್ಕೆ ಸರಿಯಾಗಿ ಕೆಲಸ ಮಾತ್ರ ಆಗುತ್ತಿಲ್ಲ. ಹೀಗಾಗಿ ಹೊಟೇಲ್ ಪರವಾನಿಗೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದವರು ಸಮಸ್ಯೆ ಅನುಭವಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ನೂರಾರು ಹೊಟೇಲುಗಳಿವೆ. ಅನೇಕರು ಅಧಿಕೃತ ಪರವಾನಿಗೆಪಡೆದು ವ್ಯಾಪಾರ-ವಹಿವಾಟು ನಡೆಸುತ್ತಿದ್ದಾರೆ. ಹೀಗಿರುವಾಗ ಹೊಟೇಲ್ ಪರವಾನಿಗೆ ಮುಕ್ತಾಯವಾದ ಕಾರಣ ಕೆಲವರು ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ಸಲ್ಲಿಕೆ ನಂತರ ಶುಲ್ಕವನ್ನು ಪಾವತಿಸಿದ್ದಾರೆ. ಆದರೆ, ಎರಡು ವರ್ಷ ಕಳೆದರೂ ಹೊಟೇಲ್ ಪರವಾನಿಗೆಗೆ ಸಲ್ಲಿಸಿದ ಅರ್ಜಿ ಮುಂದೆ ಹೋಗಿಲ್ಲ. ಕುಮಟಾ ಉಪವಿಭಾಗಾಧಿಕಾರಿ ಕಚೇರಿ ಸಿಬ್ಬಂದಿ ಬೇಜವಬ್ದಾರಿಯಿಂದ ಕೆಲಸಗಳು ಸರಿಯಾಗಿ ಆಗುತ್ತಿಲ್ಲ ಎಂಬ ಆರೋಪವ್ಯಕ್ತವಾಗಿದೆ. ಇಲ್ಲಿನ ಸಿಬ್ಬಂದಿ ಸರ್ಕಾರಿ ಕೆಲಸ ಮಾಡಿಕೊಡಲು ಅನಗತ್ಯವಾಗಿ ಸತಾಯಿಸುತ್ತಿದ್ದಾರೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
ಕೆಲ ಹೊಟೇಲ್ ಮಾಲಕರು ತಮ್ಮಲ್ಲಿ ಮದ್ಯ ಮಾರಾಟವನ್ನು ಮಾಡುತ್ತಿದ್ದು, ಇದಕ್ಕೆ ಅವಕಾಶ ಕೋರಿ ಅಬಕಾರಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಅಬಕಾರಿ ಇಲಾಖೆಯಿಂದ ಬಹುಬೇಗ ಪರವಾನಿಗೆ ಹಾಗೂ ನವೀಕರಣ ಕೆಲಸ ನಡೆಯುತ್ತಿದೆ. ಆದರೆ, ಕುಮಟಾ ಉಪವಿಭಾಗಾಧಿಕಾರಿ ಕಚೇರಿ ಕಡತಗಳು ಮಾತ್ರ ಎರಡು ವರ್ಷ ಸಾಗಿದರೂ ಟೇಬಲ್ ದಾಟಿ ಮುಂದೆ ಹೋಗುತ್ತಿಲ್ಲ. ಇಲ್ಲಿನ ಅಧಿಕಾರಿಗಳಿಗೆ ಅಧೀನ ಸಿಬ್ಬಂದಿ ಮೇಲೆ ಹಿಡಿತವಿಲ್ಲ. ಅಧಿಕಾರಿಗಳು ಉತ್ತಮವಾಗಿದ್ದರೂ ಸಿಬ್ಬಂದಿ ಲೋಪದಿಂದ ಕೆಲಸ-ಕಾರ್ಯಗಳು ಸರಿಯಾಗಿ ಸಾಗುತ್ತಿಲ್ಲ ಎಂಬುದು ಹೊಟೇಲ್ ಮಾಲಕರ ದೂರು. ಪ್ರತಿಯೊಬ್ಬರು ಪ್ರತಿ ವರ್ಷವೂ ಹೊಟೇಲ್ ನವೀಕರಣ ಮಾಡಿಕೊಳ್ಳುವುದು ಕಡ್ಡಾಯವಾಗಿದ್ದು, ನವೀಕರಣ ಅರ್ಜಿ ಕೊಟ್ಟು ನವೀಕರಣ ಆಗಿ ಬರುವುದರೊಳಗೆ ಮತ್ತೆ ನವೀಕರಣಕ್ಕೆ ಅರ್ಜಿ ಕೊಡುವ ದಿನ ಬರುತ್ತದೆ. ಹೊಟೇಲ್ ಪರವಾನಿಗೆಪಡೆಯುವುದಕ್ಕೆ ಸಹ ಮಾಲಕರು ಅದೇ ಪ್ರಮಾಣದಲ್ಲಿ ಅಲೆದಾಡುವುದು ಅನಿವಾರ್ಯವಾಗಿದೆ ಎಂಬುದು ಉದ್ಯಮಿಗಳ ನೋವು.
ಅಧಿಕೃತ ಪರವಾನಿಗೆಪಡೆದು ಉದ್ದಿಮೆ ನಡೆಸುವವರಿಗೆ ನಾನಾ ಬಗೆಯ ನಿಯಮಗಳಿವೆ. ಆದರೆ, ಪರವಾನಿಗೆಪಡೆಯದೇ ಹೊಟೇಲು ನಡೆಸುವವರಿಗೆ ಇದ್ಯಾವ ತಲೆಬಿಸಿಯೂ ಇಲ್ಲ. ಅನಧಿಕೃತ ಹೊಟೇಲುಗಳ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸುವುದಿಲ್ಲ ಎಂಬುದು ಉದ್ಯಮಿ ನಾಗರಾಜ ಹಿತ್ತಲಮಕ್ಕಿ ಅವರ ದೂರು. `ಎರಡು ವರ್ಷದ ಹಿಂದೆ ಹೊಟೇಲ್ ಪರವಾನಿಗೆ ನವೀಕರಣಕ್ಕೆ ಶುಲ್ಕ ಪಾವತಿಸಿದ್ದು, ಈವರೆಗೂ ನವೀಕರಣ ನಡೆದಿಲ್ಲ’ ಎಂದವರು ರಸೀದಿ ತೋರಿಸಿದರು.