ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಫ್ರೆಂಚ್ ಪ್ರಜೆಯೊಬ್ಬರು 15 ವರ್ಷಗಳಿಂದ ಅನಧಿಕೃತವಾಗಿ ಹೊಟೇಲ್ ನಡೆಸುತ್ತಿದ್ದಾರೆ. 2010ರಿಂದ ಗೋಕರ್ಣದಲ್ಲಿ ಅನಧಿಕೃತ ರೆಸ್ಟೋರೆಂಟ್ ನಡೆಯುತ್ತಿದ್ದರೂ ಅದನ್ನು ಯಾರೂ ಗಂಭೀರವಾಗಿ ಪರಿಗಣಿಸಿಲ್ಲ. ಇದೀಗ ಈ ವಿಷಯ ನ್ಯಾಯಾಲಯದ ಮುಂದೆ ಬಂದಿದ್ದು, ಆ ಫ್ರೆಂಜ್ ಪ್ರಜೆ ದೇಶಬಿಟ್ಟು ಹೊರಡುವುದು ಸೂಕ್ತ ಎಂದು ನ್ಯಾಯಾಲಯ ಹೇಳಿದೆ.
ಪ್ರವಾಸಿ ವೀಸಾದ ಅಡಿ ಭಾರತಕ್ಕೆ ಬಂದ ಕ್ರಿಸ್ಟೋಫ್ ಸ್ಟೀಫನ್ ಮಾನ್ಸಿಯನ್ ಅವರು ಗೋಕರ್ಣ ಮುಖ್ಯ ಕಡಲತೀರದ ಬಳಿ ಉದ್ದಿಮೆ ಸ್ಥಾಪಿಸಿದರು. ಅದಕ್ಕೆ `ಫ್ರೆಂಚ್ ಕಫೆ’ ಎಂಬ ಹೆಸರಿಟ್ಟು ರೆಸ್ಟೋರೆಂಟ್ ಮಾದರಿಯಲ್ಲಿ ಅದನ್ನು ಶೃಂಗರಿಸಿದರು. ವಿದೇಶಿ ಬಗೆಯ ಆಹಾರಗಳ ಜೊತೆ ದೇಶಿಯ ಮದ್ಯವನ್ನು ಅವರು ಅಲ್ಲಿ ಮಾರಾಟ ಮಾಡುತ್ತಿದ್ದರು. ವಿದೇಶಿಗರ ಜೊತೆ ಭಾರತೀಯ ಐಟಿ ಉದ್ಯೋಗಿಗಳನ್ನು ಆಕರ್ಷಿಸಲು ಡಿಜೆ ಬಳಕೆ ಮಾಡಿದರು. ಮದ್ಯ-ಮಾಂಸದ ಜೊತೆ ಸಂಗೀತವನ್ನು ಉಣಬಡಿಸಿ ದುಬಾರಿ ಬೆಲೆಯ ಬಿಲ್ ಕೊಡುತ್ತಿದ್ದರು. ಅನೇಕರು ಫ್ರೆಂಚ್ ಕಫೆಗೆ ಮುತ್ತಿಗೆ ಹಾಕುತ್ತಿದ್ದು, ಅವರ ನೆರವಿನಿಂದಲೇ ಕ್ರಿಸ್ಟೋಫ್ ಸ್ಟೀಫನ್ ಬಹುಬೇಗ ಶ್ರೀಮಂತರಾದರು. ಕೋಟಿ ಲೆಕ್ಕಾಚಾರದಲ್ಲಿ ಕಾಸು ಮಾಡಿದರು.
ಪ್ರವಾಸಿ ವೀಸಾದ ಅಡಿ ಭಾರತಕ್ಕೆ ಬರುತ್ತಿದ್ದ ಕ್ರಿಸ್ಟೋಫ್ ಸ್ಟೀಫನ್ ಆಗಾಗ ಫ್ರೆಂಚ್ ದೇಶಕ್ಕೆ ಮರಳುತ್ತಿದ್ದು, ಮತ್ತೆ ಪ್ರವಾಸಿ ವೀಸಾಪಡೆದು ಗೋಕರ್ಣಕ್ಕೆ ಬರುತ್ತಿದ್ದರು. ತಮ್ಮ ಉದ್ದಿಮೆ ಚನ್ನಾಗಿ ನಡೆಯುತ್ತಿರುವ ಕಾರಣ ಭಾರತ ಬಿಟ್ಟು ಹೋಗಲು ಕ್ರಿಸ್ಟೋಫ್ ಸ್ಟೀಫನ್ ಮನಸ್ಸು ಮಾಡಿರಲಿಲ್ಲ. ಪ್ರವಾಸಿ ವೀಸಾದ ಅಡಿಯಲ್ಲಿಯೇ ಇಲ್ಲಿ ಶಾಶ್ವತವಾಗಿ ನೆಲೆಸಲು ಪ್ರಯತ್ನಿಸುತ್ತಿದ್ದರು. ಈ ಎಲ್ಲದರ ನಡುವೆ ಕ್ರಿಸ್ಟೋಫ್ ಸ್ಟೀಫನ್ ಅವರಿಗೆ `ಲೀವ್ ಇಂಡಿಯಾ’ ನೋಟಿಸ್ ಬಂದಿತು. ಭಾರತ ಬಿಟ್ಟು ಹೊರಡಿ ಎಂಬ ನೋಟಿಸ್ ನೋಡಿದ ಕ್ರಿಸ್ಟೋಫ್ ಸ್ಟೀಫನ್ ಅವರು ಇದನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋದರು. ವಿಚಾರಣೆ ವೇಳೆ ಕ್ರಿಸ್ಟೋಫ್ ಸ್ಟೀಫನ್ ಅವರು 15 ವರ್ಷದಿಂದ ನಿರಂತರವಾಗಿ ಭಾರತದಲ್ಲಿರುವ ಬಗ್ಗೆ ಗೊತ್ತಾಯಿತು. ಗೋಕರ್ಣದಲ್ಲಿ ಅವರು ಅನಧಿಕೃತವಾಗಿ ರೆಸ್ಟೋರೆಂಟ್ ನಡೆಸುತ್ತಿರುವ ವಿಷಯ ತಿಳಿದು ನ್ಯಾಯಾಧೀಶರು ಸಹ ಅಚ್ಚರಿವ್ಯಕ್ತಪಡಿಸಿದರು. ಜೊತೆ ಪ್ರವಾಸಿ ವೀಸಾದ ಅಡಿ ಆಗಮಿಸಿ ಇಲ್ಲಿಯೇ ರೆಸ್ಟೋರೆಂಟ್ ತೆರೆದ ಬಗ್ಗೆ ಆಕ್ಷೇಪಿಸಿದರು.
ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರು ಏಕ ಸದಸ್ಯ ಪೀಠದಲ್ಲಿ ವಿಚಾರಣೆ ನಡೆದಿದ್ದು, ಡೆಪ್ಯೂಟಿ ಸಾಲಿಸಿಟರ್ ಜನರಲ್ ಎಚ್. ಶಾಂತಿ ಭೂಷಣ್ ಅವರು ಕ್ರಿಸ್ಟೋಫ್ ಸ್ಟೀಫನ್ ಅವರ ಬಗ್ಗೆ ನ್ಯಾಯಾಲಯಕ್ಕೆ ಮಾಹಿತಿ ನೀಡಿದರು. `ಕ್ರಿಸ್ಟೋಫ್ ಸ್ಟೀಫನ್ ಅವರು ಆಗಾಗ ಫ್ರಾನ್ಸಿಗೆ ಹೋಗಿ ಮತ್ತೆ ಭಾರತಕ್ಕೆ ಬರುವ ತಂತ್ರ ಅನುಸರಿಸಿದ್ದಾರೆ. ಗೋಕರ್ಣದಲ್ಲಿ ರೆಸ್ಟೋರೆಂಟ್ ವ್ಯವಹಾರ ಮಾಡುತ್ತಿದ್ದಾರೆ’ ಎಂದು ಡೆಪ್ಯೂಟಿ ಸಾಲಿಸಿಟರ್ ಜನರಲ್ ಅವರು ವಾದಿಸಿದರು. ಟೂರಿಸ್ಟ್ ವೀಸಾದಲ್ಲಿ 15 ವರ್ಷಗಳಿಂದ ಭಾರತದಲ್ಲಿದ್ದು, ರೆಸ್ಟೋರೆಂಟ್ ನಡೆಸುತ್ತಿರುವ ಬಗ್ಗೆ ಅರಿತ ನ್ಯಾಯಾಲಯ `ಕ್ರಿಸ್ಟೋಫ್ ಸ್ಟೀಫನ್ ಅವರು ತಕ್ಷಣ ದೇಶ ಬಿಡುವುದೇ ಉತ್ತಮ’ ಎಂದು ಹೇಳಿದೆ. ಈ ವೇಳೆ ಕ್ರಿಸ್ಟೋಫ್ ಸ್ಟೀಫನ್ ತಮ್ಮ ಟೂರಿಸ್ಟ್ ವೀಸಾ ನಿಯಮ ಉಲ್ಲಂಗಿಸಿರುವುದು ಗೊತ್ತಾಗಿದೆ. `ಕ್ರಿಸ್ಟೋಫ್ ಸ್ಟೀಫನ್ ಅವರು ಭಾರತದಲ್ಲಿ ಒಂದು ದಿನವೂ ಉಳಿಯುವ ಅರ್ಹತೆ ಕಳೆದುಕೊಂಡಿದ್ದಾರೆ.’ ಎಂದು ನ್ಯಾಯಾಲಯ ಹೇಳಿದೆ. ಈ ಎಲ್ಲಾ ಹಿನ್ನಲೆ ಕ್ರಿಸ್ಟೋಫ್ ಸ್ಟೀಫನ್ ಅವರ ರೆಸ್ಟೋರೆಂಟ್ ಬಾಗಲು ಮುಚ್ಚಿದ್ದು, ಅವರು ಸದ್ಯ ಗೋಕರ್ಣದಿಂದ ಪರಾರಿಯಾಗಿದ್ದಾರೆ.