ಶಿರಸಿ ಸೋಂದಾ ಸ್ವರ್ಣವಲ್ಲಿಯಲ್ಲಿ ನಿತ್ಯವೂ 180ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಅನ್ನದಾಸೋಹ ನಡೆಯುತ್ತದೆ. ಜೊತೆಗೆ ಮಠಕ್ಕೆ ಬರುವ ಭಕ್ತರಿಗೂ ಪ್ರಸಾದ ಭೋಜನ ವಿತರಣೆ ನಡೆಯುತ್ತಿದ್ದು, ಹಬ್ಬ-ಹರಿದಿನಗಳ ಅವಧಿಯಲ್ಲಿ 2 ಸಾವಿರಕ್ಕೂ ಅಧಿಕ ಜನ ಇಲ್ಲಿ ಊಟ ಮಾಡುತ್ತಾರೆ. ಆದರೆ, ಎಂದಿಗೂ ಇಲ್ಲಿ ಅಡುಗೆಗೆ ಗ್ಯಾಸ್ ಕೊರತೆಯೇ ಆಗಿಲ್ಲ
ಸ್ವರ್ಣವಲ್ಲಿ ಮಹಾಸಂಸ್ಥಾನದ ಮಠವು ತನ್ನ ಆವರಣದಲ್ಲಿ ಗೋಶಾಲೆಹೊಂದಿದ್ದು, ಈ ಗೋಶಾಲೆಯಲ್ಲಿ 80ಕ್ಕೂ ಅಧಿಕ ಜಾನುವಾರುಗಳಿವೆ. ಆಕಳ ಸಗಣಿಯಿಂದ ತಯಾರಾಗುವ ಗೊಬ್ಬರ ಗ್ಯಾಸ್ ಬಳಸಿಯೇ ಇಲ್ಲಿ ಅಗ್ನಿ ಆಹ್ವಾಹನೆ ನಡೆಯುತ್ತದೆ. ಅದೇ ಅಗ್ನಿಯಿಂದ ನಿತ್ಯವೂ ಅನ್ನ ಬೇಯಿಸಿ ಊಟ ಬಡಿಸಲಾಗುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ಗೋವುಗಳಿರುವುದರಿಂದ ನಿತ್ಯ 400 ಕೆಜಿಗೂ ಅಧಿಕ ಸಗಣಿ ಸಂಗ್ರಹವಾಗುತ್ತಿದ್ದು, ಸ್ವಚ್ಛ ಭಾರತ್ ಮಿಷÀನ್ ಯೋಜನೆ ಅಡಿ ಇಲ್ಲಿ ಗೊಬ್ಬರ ಗ್ಯಾಸ್ ಘಟಕ ಸ್ಥಾಪಿಸಲಾಗಿದೆ. ಹೀಗಾಗಿ ಎಲ್ಲಾ ಕಡೆ ಸಿಲೆಂಡರ್ ಗ್ಯಾಸಿಗಾಗಿ ಹಾಹಾಕಾರ ನಡೆಯುತ್ತಿದ್ದರೂ, ಸೋಂದಾ ಸ್ವರ್ಣವಲ್ಲೀ ಸಂಸ್ಥಾನದಲ್ಲಿ ಅಡುಗೆ ಅನಿಲ ಕೊರತೆ ಆಗಿಲ್ಲ.
ಸ್ವರ್ಣವಲ್ಲಿಯಲ್ಲಿ 11 ಲಕ್ಷ ರೂ ವೆಚ್ಚ ಮಾಡಿ 40 ಕ್ಯೂಬಿಕ್ ಮೀಟರ್ ಸಾಮರ್ಥ್ಯದ ಗೋಬರ್ಧನ್ ಘಟಕವನ್ನು ನಿರ್ಮಿಸಲಾಗಿದೆ. 11 ಲಕ್ಷ ರೂಪಾಯಿಗಳಲ್ಲಿ 10.45 ಲಕ್ಷ ರೂಪಾಯಿಗಳನ್ನು ಸರ್ಕಾರ ನೀಡಿದೆ. ಉಳಿದ ಮೊತ್ತವನ್ನು ಮಠ ಭರಿಸಿದ್ದು, ಅಲ್ಲಿ ಉತ್ಪಾದನೆಯಾಗುವ 400 ಕೆಜಿ ಸಗಣಿಯಿಂದ ನಿತ್ಯ 18 ಕೆಜಿ ಗ್ಯಾಸ್ ಉತ್ಪಾದಿಸಲಾಗುತ್ತದೆ. ಮೊದಲು ಗ್ಯಾಸ್ ಸಿಲೆಂಡರಿಗೆ ಪ್ರತಿ ವರ್ಷ 2.50 ಲಕ್ಷ ರೂ ವೆಚ್ಚವಾಗುತ್ತಿದ್ದು, ಆ ಸಂಪೂರ್ಣ ಹಣ ಇದೀಗ ಮಠಕ್ಕೆ ಉಳಿದಿದೆ. ಜೊತೆಗೆ ಗ್ಯಾಸ್ ಘಟಕದಿಂದ ಹೊರ ಬರುವ ಗೊಬ್ಬರದಿಂದ ಸಾವಯವ ಗೊಬ್ಬರ ಸಿಗುತ್ತಿದ್ದು, ಅದನ್ನು ಇಲ್ಲಿನ ಗಿಡ-ಮರಗಳ ಆರೈಕೆಗೆ ಬಳಸಲಾಗುತ್ತಿದೆ.
ಸರ್ಕಾರವೂ ಸಮುದಾಯಗಳಿಗೆ ನೆರವಾಗುವ ಉದ್ದೇಶದಿಂದ ಜಾನುವಾರುಗಳ ಸಗಣಿ, ಹಸಿ ಕಸದಂತಹ ಜೈವಿಕ ತ್ಯಾಜ್ಯ ಹೆಚ್ಚು ಉತ್ಪಾದನೆಯಾಗುವ ಪ್ರದೇಶಗಳಲ್ಲಿ ಗೋಬರ್ಧನ್ ಘಟಕಗಳ ಸ್ಥಾಪನೆಗೆ ಯೊಜನೆಯಡಿ ಅನುವು ಮಾಡಿಕೊಟ್ಟಿದೆ. ಸ್ವರ್ಣವಲ್ಲಿ ಮಠದಲ್ಲಿ ಸ್ಥಾಪಿಸುವ ಮೂಲಕ ನವೀಕರಿಸಬಹುದಾದ ಇಂಧನದ ಉತ್ಪಾದನೆಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಮಠದ ಕಾರ್ಯ ಮಾದರಿಯಾಗಿದೆ. ಹಸಿ ತ್ಯಾಜ್ಯದಿಂದ ಕೇವಲ ಗೊಬ್ಬರವನ್ನಷ್ಟೇ ಅಲ್ಲದೆ ಮಿಥೇನ್ ಅನಿಲವನ್ನು ಕೂಡ ಉತ್ಪಾದನೆ ಮಾಡಬಹುದಾಗಿದ್ದು, ಈ ಅನಿಲವನ್ನು ಅಡುಗೆ ಮಾಡಲು ಹಾಗೂ ವಿದ್ಯುತ್ ಆಗಿಯೂ ಕೂಡ ಬಳಕೆ ಮಾಡಲಾಗುತ್ತದೆ. ಸಮುದಾಯ ಹಂತದಲ್ಲಿ ಮಾತ್ರವಲ್ಲದೇ ವೈಯುಕ್ತಿಕವಾಗಿ ಮನೆಗಳಲ್ಲೂ ಗೋಬರ್ ಧನ್ ಘಟಕವನ್ನು ನಿರ್ಮಿಸಲು ಸರ್ಕಾರ ಉತ್ತೇಜನ ನೀಡುತ್ತಿದೆ. ಮನೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಸಿ ತ್ಯಾಜ್ಯ ಉತ್ಪಾದನೆ ಆಗುತ್ತಿದ್ದರೆ ಅದರಿಂದಲೂ ಬಯೋಗ್ಯಾಸ್ ಉತ್ಪಾದಿಸಲು ಸಾಧ್ಯ.
ಮನೆಯಲ್ಲಿ ಪ್ರತಿದಿನ ಅಡುಗೆ ಮನೆಯಲ್ಲಿ ಉತ್ಪತ್ತಿಯಾಗುವ ಹಣ್ಣು, ತರಕಾರಿಗಳ ತ್ಯಾಜ್ಯ, ಉಳಿದ ಆಹಾರಗಳು ಜೊತೆಗೆ ಕೃಷಿ ತ್ಯಾಜ್ಯಗಳನ್ನು ಗೋಬರ್ ಧನ್ ಘಟಕಕ್ಕೆ ಬಳಸಬಹುದು. ಗೋಬರ್ ಧನ್ ಘಟಕದಿಂದ ಉತ್ಪತ್ತಿಯಾಗುವ ಸ್ಲರಿ ಕೂಡ ಕೃಷಿಗೆ ಅತ್ಯಂತ ಉಪಯುಕ್ತ ಗೊಬ್ಬರ. ಇದೇ ಸ್ಲರಿಯಿಂದ ಎರೆಹುಳ ಗೊಬ್ಬರ ತಯಾರಿಸಿ ಮಾರಾಟ ಮಾಡಿ ಆರ್ಥಿಕ ಲಾಭವೂ ಸಾಧ್ಯವಿದೆ. `ಮಠದ ಗೋಶಾಲೆಗೆ ಸರ್ಕಾರದಿಂದ ನೀಡಿರುವ ಸಮುದಾಯ ಹಂತದ ಗೋಬರ್ ಗ್ಯಾಸ್ ಘಟಕವು ಅತ್ಯಂತ ಉಪಯುಕ್ತವಾಗಿದೆ. ಇದರಿಂದಾಗಿ ಗೋ ಶಾಲೆಯ ಸಗಣೆ ಹಾಗೂ ಹಸಿ ತ್ಯಾಜ್ಯದ ಮೂಲಕ ಉತ್ಪಾದನೆಯಾಗುವ ಮಿಥೇನ್ ಗ್ಯಾಸ್ ಅನ್ನದಾಸೋಹದ ಅಡುಗೆಗೆ ಉಪಯುಕ್ತವಾಗಿದೆ. ಸಿಲಿಂಡರ್ ಕೊರತೆಯ ಸಂದರ್ಭದಲ್ಲಿ ಅತ್ಯಂತ ಉಪಯುಕ್ತವಾಗಿದೆ. ಪರಿಸರ ಸ್ನೇಹಿಯಾದ ಇಂತಹ ಯೋಜನೆಯನ್ನು ಅನ್ನದಾಸೋಹ ನಡೆಯುವ ಮಠ, ಸಂಸ್ಥೆಗಳಿಗೆ ನೀಡಿದರೆ ಅತ್ಯಂತ ಉಪಯುಕ್ತವಾಗುತ್ತದೆ’ ಎಂಬುದು ಗಂಗಾಧರೇoದ್ರ ಸರಸ್ವತೀ ಶ್ರೀಗಳ ನುಡಿ.