`ಪ್ರತಿಯೊಬ್ಬ ಮನುಷ್ಯನಿಗೂ ವಿದ್ಯಾರ್ಥಿ ಜೀವನ ಅತ್ಯುತ್ತಮ ಘಟ್ಟವಾಗಿದ್ದು, ಶಿಕ್ಷಣವೇ ಸಾಧನೆಯ ಅಸ್ತ್ರವಾಗಿದೆ’ ಎಂದು ಕಾರವಾರದ ಅಸ್ನೋಟಿ ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ಸಂಜಯ ಸಾಳುಂಕೆ ಅವರು ಹೇಳಿದ್ದಾರೆ. `ಉತ್ತಮ ಶಾಲೆ, ಉತ್ತಮ ಶಿಕ್ಷಕರ ಜೊತೆ ವಿದ್ಯಾರ್ಥಿಗಳ ಅಭ್ಯಾಸವೂ ಸಾಧನೆಗೆ ಮುಖ್ಯ’ ಎಂದವರು ವಿವರಿಸಿದ್ದಾರೆ.
ಅಸ್ನೋಟಿ ಶಿವಾಜಿ ವಿದ್ಯಾ ಮಂದಿರದಲ್ಲಿ ಶೈಕ್ಷಣಿಕ ವರ್ಷದ ಆರಂಭೋತ್ಸವ ಉದ್ಘಾಟಿಸಿದ ಅವರು `ವಿದ್ಯಾರ್ಥಿ ಜೀವನ ಕಷ್ಟಕರ ಸವಾಲುಗಳನ್ನು ಎದುರಿಸುವ ಸಮಯವಾಗಿದೆ. ಈ ಸಮಯವನ್ನು ಹಾಳು ಮಾಡಿಕೊಳ್ಳದಿದ್ದರೇ ಸಮಾಜಮುಖಿಯಾಗಿ ಬೆಳೆಯಲು ಸಾಧ್ಯ’ ಎಂದಿದ್ದಾರೆ. ಓ ಎಸ್ ಜಿ ಗ್ರೂಪ್ ಅಧ್ಯಕ್ಷ ಪವನ ಸಾವಂತ ಅವರು ಮಾತನಾಡಿ `ವಿದ್ಯಾರ್ಥಿಗಳು ಪ್ರಮಾಣಿಕತೆ ಮತ್ತು ಸಮಯಪಾಲನೆಗೆ ಮಹತ್ವ ನೀಡಬೇಕು’ ಎಂದು ಕರೆ ನೀಡಿದ್ದಾರೆ. ಸಂಸ್ಥೆಯ ಉಪಾಧ್ಯಕ್ಷರಾದ ಗಿರೀಶ ದೇಸಾಯಿ ಅವರು ಮಕ್ಕಳಿಗೆ ಶುಭ ಹಾರೈಸಿದ್ದಾರೆ.
ಪ್ರಮುಖರಾದ ಉದಯ ಸಾಳುಂಕೆ, ಚಂದ್ರಕಾAತ ಸಾಳುಂಕೆ, ಸಂತೋಷ ನಾಯ್ಕ, ಮತ್ತು ಹಿರಿಯ ಶಿಕ್ಷಕರಾದ ಸಂತೋಷ ಕಾಂಬಳೆ, ಭಾಸ್ಕರ ಸಾಳುಂಕೆ, ಶಿಕ್ಷಕರಾದ ವಿಜಯ ಸುಧೀರ, ಜೆ ಬಿ ತಿಪ್ಪೇಸ್ವಾಮಿ, ಶರತ್ ಗಾಂವಕರ, ಪಾಲಕರಾದ ವಿನಯ ನಾಯ್ಕ, ದಿಪಕ್ ತಳೇಕರ ಕಾರ್ಯಕ್ರಮದಲ್ಲಿದ್ದರು. ಈ ವೇಳೆ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪರಿಕರಗಳನ್ನು ನೀಡಲಾಯಿತು. ಮುಖ್ಯ ಶಿಕ್ಷಕ ಗಣೇಶ ಬಿಷ್ಟಣ್ಣನವರ ಅವರು ಸ್ವಾಗತಿಸಿದರು. ಶಿಕ್ಷಕ ವಿಜಯಕುಮಾರ್ ನಾಯ್ಕ ಅವರು ವಂದಿಸಿದರು.