ಹವ್ಯಕ ಕ್ರಿಕೆಟ್ ತಂಡದ ಉತ್ತಮ ಆಟಗಾರ ಪ್ರವೀಣ ಹೆಗಡೆ (ಬೂಸಾ) ಅವರು ವಿದ್ಯುತ್ ತಂತಿ ಸ್ಪರ್ಶಿಸಿ ಸಾವನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಪ್ರವೀಣ ಹೆಗಡೆ ಅವರು ಶಿವಮೊಗ್ಗದ ಕೆಳದಿ ಬಳಿಯ ಹಾರೆಕೊಪ್ಪದಲ್ಲಿ ವಾಸವಾಗಿದ್ದು, ಅಲ್ಲಿಯೇ ಅವರು ಅಕಾಲಿಕ ಮರಣಕ್ಕೆ ಒಳಗಾಗಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಬಿದ್ರಕಾನ್ ಪ್ರವೀಣ ಹೆಗಡೆ ಅವರ ಮೂಲ ಊರು. ಬಾಲ್ಯದಿಂದಲೂ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿಹೊಂದಿದ್ದ ಅವರು ತಮ್ಮ ಆಟದಿಂದಲೇ ಜನರ ಮನಗೆದ್ದಿದ್ದರು. ಉತ್ತಮ ಬ್ಯಾಟಿಂಗ್ ಹಾಗೂ ಪ್ರತಿ ಬಾಲ್’ಗೂ ಭರ್ಜರಿ ಸಿಕ್ಸ್ ಹೊಡೆಯುವ ಮೂಲಕ ಅವರು ಕ್ರಿಕೆಟ್ ಅಭಿಮಾನಿಗಳ ನೆಚ್ಚಿನ ಆಟಗಾರರಾಗಿದ್ದರು. ಪ್ರವೀಣ ಹೆಗಡೆ ಅವರು ಶಿವಮೊಗ್ಗದ ಕೆಳದಿ ಬಳಿಯ ಹಾರೆಕೊಪ್ಪದಲ್ಲಿ ವಾಸವಾಗಿದ್ದು, ನಿತ್ಯವೂ ಅವರು ಕ್ರಿಕೆಟ್ ಅಭ್ಯಾಸ ಮಾಡುತ್ತಿದ್ದರು.
ಭಾನುವಾರ ಸಂಜೆ ಅವರು ಮನೆಗೆ ವಿದ್ಯುತ್ ಸರಬರಾಜು ಇಲ್ಲದ ಕಾರಣ ವಿದ್ಯುತ್ ತಂತಿಗೆ ಅಡ್ಡಲಾಗಿದ್ದ ಮರದ ಕೊಂಬೆ ತುಂಡರಿಸಲು ಹೋಗಿ ವಿದ್ಯುತ್ ಸ್ಪರ್ಶಕ್ಕೆ ಒಳಗಾದರು. ಮರ ಏರಿ ವಿದ್ಯುತ್ ತಂತಿಗೆ ತಾಗಿದ್ದ ಕೊಂಬೆ ಕತ್ತರಿಸುವಾಗ ಪ್ರವೀಣ ಹೆಗಡೆ ಅವರು ನೆಲಕ್ಕೆ ಕುಸಿದು ಬಿದ್ದಿದ್ದು, ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ತಕ್ಷಣ ಸ್ಥಳೀಯರು ಹಾಗೂ ಕುಟುಂಬದವರು ಆಗಮಿಸಿ ಪ್ರವೀಣ ಹೆಗಡೆ ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಮಾಡಿದರು. ಆದರೆ, ಅದರಿಂದ ಯಾವ ಪ್ರಯೋಜನವೂ ಆಗಲಿಲ್ಲ. 37ನೇ ವಯಸ್ಸಿನಲ್ಲಿಯೇ ಪ್ರವೀಣ ಹೆಗಡೆ ಅವರು ಈ ಲೋಕದ ಯಾತ್ರೆ ಮುಗಿಸಿದರು.
ಸಂತಾಪ:
ಪ್ರವೀಣ ಹೆಗಡೆ ಅವರಿಗೆ ಪತ್ನಿ ಹಾಗೂ ಪುಠಾಣಿ ಮಕ್ಕಳಿದ್ದು, ಅವರ ಜೊತೆ ಕುಟುಂಬದವರು ಕಣ್ಣೀರಾಗಿದ್ದಾರೆ. ಸಮಾಜದಲ್ಲಿ ಸೌಮ್ಯ ಸ್ವಭಾವ, ಸ್ನೇಹಪರ ವ್ಯಕ್ತಿತ್ವ ಹಾಗೂ ಕ್ರೀಡಾಸ್ಫೂರ್ತಿಗೆ ಹೆಸರಾಗಿದ್ದ ಪ್ರವೀಣ್ ಹೆಗಡೆ ಅವರ ನಿಧನಕ್ಕೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕ ಭೀಮಣ್ಣ ನಾಯ್ಕ ಸೇರಿ ಅನೇಕರು ಕಂಬನಿ ಮಿಡಿದಿದ್ದಾರೆ.