ದೇವಸ್ಥಾನಗಳನ್ನು ಗುರಿಯಾಗಿರಿಸಿಕೊಂಡು ಕಳ್ಳತನ ಮಾಡುತ್ತಿದ್ದ ವ್ಯಕ್ತಿಯ ಹೆಸರನ್ನು ಕಾರವಾರ ಪೊಲೀಸರು ಬಹಿರಂಗಪಡಿಸಿದ್ದಾರೆ. ಗಿಂಡಿವಾಡದ ವಿನಯ (ವಿನಾಯಕ) ದಯಾನಂದ ಗಾಂವಕರ ಕಳ್ಳತನದ ರೂವಾರಿಯಾಗಿದ್ದು, ವಿವಿಧ ದೇವಾಲಯದಲ್ಲಿ ಕಳ್ಳತನವಾಗಿದ್ದ ಗಂಟೆ, ಆರತಿ, ದೀಪಗಳನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ.
ADVERTISEMENT
ಕಾರವಾರದ ಹಬ್ಬುವಾಡ ರಸ್ತೆಯಲ್ಲಿರುವ ದಾಸಮಾರುತಿ ದೇವಾಲಯದಲ್ಲಿ ಮೇ 20ರಂದು ಕಳ್ಳತನ ನಡೆದಿತ್ತು. 50 ಕೆಜಿಯ ಹಿತ್ತಾಳೆ ಸಾಮಗ್ರಿಗಳನ್ನು ಕಳ್ಳರು ದೋಚಿದ್ದರು. ಈ ಬಗ್ಗೆ ಅಲ್ಲಿನ ಶಾಮಸುಂದರ ಅನಂತ ಬಸರೂರು ಅವರು ನೀಡಿದ ಮಾಹಿತಿ ಅನ್ವಯ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ಶುರು ಮಾಡಿದ್ದರು. ಮೇ 31ರಂದು ಚೆಂಡಿಯಾ ಗ್ರಾಮದ ಜಯಮಾರುತಿ ದೇವಸ್ಥಾನದ ಹುಂಡಿ ಒಡೆದ ಕಳ್ಳರು 21 ಸಾವಿರ ರೂ ಹಣ ದೋಚಿದ್ದರು. ಚೆಂಡಿಯಾದಲ್ಲಿ ಎರಡು ಹಿತ್ತಾಳೆ ಗಂಟೆಯನ್ನು ಸಹ ಕಳ್ಳರು ಅಪಹರಿಸಿದ್ದರು. ಚೆಂಡಿಯಾ ಐಸ್ ಪಾಕ್ಟರಿ ಬಳಿಯ ನರಸಿಂಹ ಸುಬ್ರಾಯ ಆಚಾರಿ ನೀಡಿದ ಮಾಹಿತಿ ಪ್ರಕಾರ ಪೊಲೀಸರು ಈ ಬಗ್ಗೆಯೂ ಪ್ರಕರಣ ದಾಖಲಿಸಿದ್ದರು.
ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026
ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್
ADVERTISEMENT
ಅದಾದ ನಂತರ ಜೂನ್ 4ರಂದು ಮುಖೇರಿ ಸಾಸನವಾಡದಲ್ಲಿರುವ ರಾಮಸತಿ ದೇವಿ ದೇಗುಲಕ್ಕೆ ಕಳ್ಳರು ನುಗ್ಗಿದರು. ದೇವಿ ಆಲಯದಲ್ಲಿದ್ದ ಹಿತ್ತಾಳೆ ಸಾಮಗ್ರಿಗಳ ಜೊತೆ ಗಂಟೆಗಳನ್ನು ಸಹ ಕದ್ದರು. ದೇವಿ ಸನ್ನಿಧಿಯಲ್ಲಿನ ಕಳ್ಳತನದ ಬಗ್ಗೆ ಅಲ್ಲಿನ ವಿಘ್ನೇಶ್ವರ ರತ್ನಾಕರ್ ನಾಗೇಕರ್ ಅವರು ಪೊಲೀಸರಿಗೆ ಮಾಹಿತಿ ನೀಡಿ ದೂರು ದಾಖಲಿಸಿದರು. ಜೂನ್ 5ರಂದು ಸದಾಶಿವಗಡದ ಮಲ್ದಾರವಾಡದಲ್ಲಿರುವ ಕಾಳೋಬಾ ದೇವರ ಗುಡಿಯಲ್ಲಿ ಕಳ್ಳತನ ನಡೆದಿತ್ತು. ಕುಲ ದೇವರ ಮಂದಿರದಲ್ಲಿ ಕಳ್ಳತನವಾದ ಬಗ್ಗೆ ಸಮಿತಿಯವರಲ್ಲಿ ಚರ್ಚಿಸಿ ದೇವಭಾಗ ರಸ್ತೆಯ ನರಸಿಂಹಕಟ್ಟಾದ ಮಂಗೇಶ ದತ್ತಾ ಗಜನೀಕರ್ ಅವರು ಚಿತ್ತಾಕುಲ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಮೇ 24ರಂದು ಅಸ್ನೋಟಿಯ ವಿಠಲ ರುಖುಮಾಯಿ ದೇವಾಲಯದಲ್ಲಿಯೂ ಕಳ್ಳತನ ನಡೆದಿದ್ದು, ಅಲ್ಲಿದ್ದ ದೀಪಗಳನ್ನು ದುಷ್ಕರ್ಮಿಗಳು ದೋಚಿದ್ದರು. ಅಸ್ನೋಟಿ ಕೊಳಗೆಯ ದೀಪಕ ಗೋಪಾಲ ಬಾವ ಅವರು ಈ ಬಗ್ಗೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಎಲ್ಲಾ ದೇವಸ್ಥಾನಗಳ ಕಳ್ಳತನದ ಬಗ್ಗೆ ಸಮಗ್ರ ಶೋಧ ನಡೆಸಿದ ಪೊಲೀಸರಿಗೆ ಕಳ್ಳರ ಬಗ್ಗೆ ಸಣ್ಣ ಸುಳಿವು ಸಿಕ್ಕಿತು. ಅದೇ ಸುಳಿವಿನ ಆಧಾರದಲ್ಲಿ ಇನ್ನಷ್ಟು ತನಿಖೆ ಮಾಡಿದಾಗ ಗಿಂಡಿವಾಡದ ವಿನಯ (ವಿನಾಯಕ) ದಯಾನಂದ ಗಾಂವಕರ ಅವರು ಸಿಕ್ಕಿಬಿದ್ದರು. ವಿಚಾರಣೆಯಲ್ಲಿ ಅವರು ಕಳ್ಳತನ ಮಾಡಿದನ್ನು ಒಪ್ಪಿಕೊಂಡಿದ್ದು, ಕದ್ದ ಸಾಮಗ್ರಿಗಳನ್ನು ಪೊಲೀಸರಿಗೆ ಒಪ್ಪಿಸಿದರು. ಒಟ್ಟು 87 ಸಾವಿರ ರೂ ಮೌಲ್ಯದ ಸಾಮಗ್ರಿಗಳನ್ನು ಪೊಲೀಸರು ವಶಕ್ಕೆಪಡೆದಿದ್ದಾರೆ. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರ ಜೊತೆ ಹೆಚ್ಚವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ, ಡಿವೈಎಸ್ಪಿ ಗಿರೀಶ್ ವಿ, ಪೊಲೀಸ್ ನಿರೀಕ್ಷಕಿ ಜಯಶ್ರೀ ಮಾನೆ, ಪಿಸೈ ಉದ್ದಪ್ಪ ಧರೆಪ್ಪನವರ್, ಸಿಬ್ಬಂದಿ ಸೂರಜ್ ಕೋಠಾರಕರ್, ಸಚೀನ ನಾಯ್ಕ, ಹಸನ್ ಕುಟ್ಟಿ, ರಾಜೇಶ ನಾಯ್ಕ, ಮದೇವ ಸಂಗಾಪುರ, ಪ್ರಕಾಶ ದಂಡಪ್ಪನವರ್, ಪ್ರತಾಪಕುಮಾರ ಜೊತೆ ತಾಂತ್ರಿಕ ವಿಭಾಗದ ಬಬನ ಕದಂ, ಉದಯ ಗುನಗಾ, ಮಹಾಲಿಂಗ ಸಾವಳಗಿ ಸೇರಿ ದೇವಾಲಯ ದೋಚಿದವನನ್ನು ಹಿಡಿದಿದ್ದಾರೆ.