ಹತ್ತು ವರ್ಷಗಳ ಹಿಂದೆಯೇ ಸತ್ತು ಸಮಾಧಿ ಆಗಿದ್ದ ಕೆಲವರು ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಹುಟ್ಟಿ ಬಂದಿದ್ದಾರೆ. ಉಸಿರಾಡುವ ಶಕ್ತಿ ಇಲ್ಲದಿದ್ದರೂ ಅವರೆಲ್ಲರೂ ತಮ್ಮ ಭೂಮಿ ಮಾರಾಟ ಮಾಡಿದ್ದಾರೆ!
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬೊಗ್ರಿಬೈಲ್ ಸಮೀಪದ ಸರ್ವೇ ನಂಬರ್ 25, ಹಿಸ್ಸಾ ನಂ.1ರಲ್ಲಿರುವ 7 ಎಕರೆ 26 ಗುಂಟೆ ಜಮೀನು 2026ರಲ್ಲಿ ಮಾರಾಟವಾಗಿದೆ. ಶಿವಮೊಗ್ಗ ಮೂಲದ ಶಿವಕುಮಾರ ಮುರಗೇಶ ರಾಮಸ್ವಾಮಿ ಎಂಬಾತರು ಈ ಜಮೀನು ಖರೀದಿಸಿದ್ದಾರೆ. ಆದರೆ, ಈ ಜಮೀನು ಮಾರಾಟ ಮಾಡಿದವರು ಈಗ ಬದುಕಿಲ್ಲ. ಹತ್ತು ವರ್ಷಗಳ ಹಿಂದೆಯೇ ಸಾವನಪ್ಪಿದವರ ಹೆಸರಿನಲ್ಲಿ ಈ ಜಮೀನು ಮಾರಾಟವಾಗಿದ್ದು, ಸಾವನಪ್ಪಿದ ವ್ಯಕ್ತಿಗಳು ಜಮೀನು ಮಾರಾಟಕ್ಕೆ ಬಂದಿದ್ದಾದರೂ ಹೇಗೆ? ಎಂದು ಅಧಿಕಾರಿಗಳು ಸಹ ತಲೆಕೆಡಿಸಿಕೊಂಡಿದ್ದಾರೆ.
ಸರ್ಕಾರಿ ದಾಖಲೆಗಳ ಪ್ರಕಾರ ಸಾವನಪ್ಪಿದ ವ್ಯಕ್ತಿಗಳು ಸಹ 2026ರ ಫೆಬ್ರವರಿ 26ರಂದು ಅಂಕೋಲಾ ಉಪನೋಂದಣಿ ಕಚೇರಿಗೆ ಆಗಮಿಸಿದ್ದಾರೆ. ಅವರೇ ತಮ್ಮ ಆಧಾರ್ ಕಾರ್ಡ ಕೊಟ್ಟು ಕೈ ಬೆರಳಿನ ದೃಢೀಕರಣ ನೀಡಿ ಭೂಮಿ ಮಾರಾಟ ಮಾಡಿದ್ದಾರೆ. ಆ ಜಮೀನಿಗೆ 9 ಜನ ಮಾಲಕರಿದ್ದು, ಅವರೆಲ್ಲರೂ ಒಟ್ಟಿಗೆ ಬಂದು ಸಹಿ ಮಾಡಿದ್ದಾರೆ. ದಾಖಲೆಗಳ ಪ್ರಕಾರ ಮುಕುಂದ ನಾರಾಯಣ ಪ್ರಭು (60), ಹರಿ ಅನಂತ ಪೈ (55), ರಾಧಾಕೃಷ್ಣ ಮಂಜುನಾಥ ಪೈ (45), ವಿಠ್ಠಲದಾಸ ಮಂಜುನಾಥ ಪೈ (37), ನಾರಾಯಣ ಕೇಶವ ಪೈ (37), ರಾಘವೇಂದ್ರ ಕೇಶವ ಪೈ (38), ಬಾಬಣಿ ಮರ್ತು ಪೈ (43), ಮಾಧವ ಮರ್ತು ಪೈ (35) ಹಾಗೂ ಮನೋಹರ ಮರ್ತು ಪೈ (45) ಎಂಬಾತರು ಸೇರಿ ಈ ಭೂಮಿ ಮಾರಾಟ ಮಾಡಿದ್ದು ಬದುಕಿದ್ದವರ ಜೊತೆ ಸಾವನಪ್ಪಿರುವವರು ಸಹ ಭೂಮಿ ಮಾರಾಟಕ್ಕೆ ಆಸಕ್ತಿವಹಿಸಿದ್ದು ಸೂಜಿಗದ ವಿಷಯ.
ಈ ಪ್ರಕರಣದಲ್ಲಿ ಸಾವನಪ್ಪಿದವರ ಹೆಸರಿನಲ್ಲಿ ನಕಲಿ ವ್ಯಕ್ತಿಗಳನ್ನು ಕೂರಿಸಿ ಆಧಾರ್ ಕಾರ್ಡ ಮಾಡಲಾಗಿದೆ. ನಂತರ ಅವರೇ ನಿಜವಾದ ಭೂ ಮಾಲಿಕರು ಎಂದು ಬಿಂಬಿಸಿ ಭೂಮಿ ನೋಂದಣಿ ಕಾರ್ಯ ನಡೆದಿದೆ. ಭೂ ಮಾಲಕರಿಗೆ ಅಂಕೋಲಾ ವಿಳಾಸ ನೀಡುವ ಬದಲು ವಿಜಯಪುರದ ನಿವಾಸಿಗಳು ಎಂದು ದಾಖಲೆ ಸೃಷ್ಠಿಸಿ ಭೂಮಿ ನೋಂದಣಿ ಪ್ರಕ್ರಿಯೆ ಮುಗಿಸಲಾಗಿದೆ. ಎಂಟು ಪುರುಷರು ಮತ್ತು ಒಬ್ಬ ಮಹಿಳೆ ಉಪ ನೋಂದಣಿ ಕಚೇರಿಗೆ ಹಾಜರಾಗಿ ನೋಂದಣಿ ಪ್ರಕ್ರಿಯೆಯಲ್ಲಿ ಭಾಗಿಯಾದ ಬಗ್ಗೆ ದಾಖಲೆ ಸೃಷ್ಠಿಯಾಗಿದ್ದು, ನಕಲಿ ಆಧಾರ್ ಕಾರ್ಡ ಜಾಲ ಈ ಭೂ ಕಬಳಿಕೆ ವಿಷಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆಲಸ ಮಾಡಿದೆ.
ಈ ಭೂ ಮಾರಾಟ ಹಗರಣದಲ್ಲಿ ಸ್ಥಳೀಯರ ಪಾತ್ರವೂ ಅಷ್ಟೇ ದೊಡ್ಡದಾಗಿದೆ. ಸತ್ತವರು ಬಂದು ಸಹಿ ಮಾಡಿದನ್ನು ತಾನೂ ನೋಡಿದ್ದೇನೆ ಎನ್ನುವ ಅರ್ಥದಲ್ಲಿ ಅವರು ತನಗೆ ಪರಿಚಿತರು ಎಂದು ಮಾರುತಿ ಬೆಚ್ಚು ಗೌಡ ಹಾಗೂ ಸಂತೋಷ ಬುದ್ದು ಗೌಡ ಎಂಬಾತರು ಸಹಿ ಮಾಡಿದ್ದಾರೆ. ಅವರಿಬ್ಬರು ನಿಜವಾಗಿಯೂ ಮಾಲಕರನ್ನು ಗುರುತಿಸಿ ಸಹಿ ಹಾಕಿದ್ದಾರಾ? ಸತ್ತ ವ್ಯಕ್ತಿಗಳು ಭೂಮಿ ಮಾರಾಟ ಮಾಡಲು ಬಂದದನ್ನು ಸಾಕ್ಷಿದಾರರು ನೋಡಿದ್ದಾರಾ? ಅಥವಾ ಪುಡಿಗಾಸಿನ ಆಸೆಗೆ ಬಿದ್ದು ಕಣ್ಮುಚ್ಚಿ ಸಹಿ ಮಾಡಿದರಾ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ. ಈ ಪ್ರಕರಣದಲ್ಲಿ ಉಪನೋಂದಣಿ ಕಚೇರಿ ಅಧಿಕಾರಿಗಳ ಪಾತ್ರದ ಬಗ್ಗೆಯೂ ಚರ್ಚೆ ಶುರುವಾಗಿದೆ. ಸಾವನಪ್ಪಿದ ವ್ಯಕ್ತಿ ಹೆಸರಿನಲ್ಲಿ ನಕಲಿ ದಾಖಲೆ ಬಂದರೂ ಅದರ ಮೇಲೆ ಸಹಿ-ಸೀಲು ಮುದ್ರಿಸಿದ ಅಧಿಕಾರಿಗಳ ಬಗ್ಗೆಯೂ ಅನುಮಾನ ಶುರುವಾಗಿದೆ.