ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕರಾವಳಿ ಹಾಗೂ ಮಲೆನಾಡಿನ ಭಾಗಗಳಲ್ಲಿ ಕಲ್ಲೇಡಿಗಳ ಸಂಚಾರ ಹೆಚ್ಚಾಗುವುದು ಸಾಮಾನ್ಯ. ಮಣ್ಣಿನಿಂದ ಹೊರಬಂದು ಹಳ್ಳ-ಕೊಳ್ಳಗಳ ಕಡೆಗೆ ಸಾಗುವ ಈ ಕಲ್ಲೇಡಿಗಳು ಗ್ರಾಮೀಣ ಬದುಕಿನ ಭಾಗವಾಗಿದ್ದವು. ಆದರೆ ಈ ಬಾರಿ ಪರಿಸ್ಥಿತಿ ಭಿನ್ನವಾಗಿದೆ. ಮುಂಗಾರು ಮಳೆ ಉತ್ತಮವಾಗಿದ್ದರೂ ಕಲ್ಲೇಡಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿರುವುದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಸಾಮಾನ್ಯವಾಗಿ ಜೂನ್ ತಿಂಗಳಲ್ಲಿ ಮುಂಗಾರು ಆರಂಭವಾದ ಬಳಿಕ ಕಲ್ಲೇಡಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತವೆ. ಕೆಲವು ಪ್ರದೇಶಗಳಲ್ಲಿ ಅವುಗಳನ್ನು ಆಹಾರವಾಗಿಯೂ ಬಳಸಲಾಗುತ್ತದೆ. ಗ್ರಾಮೀಣ ಮಾರುಕಟ್ಟೆಗಳಲ್ಲಿ ಕಲ್ಲೇಡಿಗಳಿಗೆ ಉತ್ತಮ ಬೇಡಿಕೆಯೂ ಇರುತ್ತದೆ. ಆದರೆ ಈ ವರ್ಷ ಮಾರುಕಟ್ಟೆಗೆ ತರುವಷ್ಟು ಕಲ್ಲೇಡಿಗಳು ಸಿಗುತ್ತಿಲ್ಲ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ತಜ್ಞರ ಅಭಿಪ್ರಾಯದ ಪ್ರಕಾರ, ಹವಾಮಾನದಲ್ಲಿ ಆದ ಬದಲಾವಣೆ, ಅತಿಯಾದ ಬಿಸಿಲು, ಅವಧಿ ಪೂರ್ವ ಹಾಗೂ ಅವಧಿಗೂ ತಡವಾಗಿ ಬರುವ ಮಳೆ, ಕಲ್ಲೇಡಿಗಳ ಸಹಜ ಜೀವನ ಚಕ್ರದ ಮೇಲೆ ಪರಿಣಾಮ ಬೀರಿರಬಹುದು. ಮಳೆಯ ನೀರು ಹರಿಯಲು ಆರಂಭವಾದಾಗ ಕಲ್ಲೇಡಿಗಳು ಸಂತಾನೋತ್ಪತ್ತಿ ಚಟುವಟಿಕೆಯಲ್ಲಿ ತೊಡಗುತ್ತವೆ. ಆದರೆ ಈಹಿಂದೆ ಅವಧಿಗೂ ಮುನ್ನ ಮಳೆ ಸುರಿದ ಕಾರಣ ಅವುಗಳ ಪ್ರಜನನ ಪ್ರಕ್ರಿಯೆಯಲ್ಲಿ ವ್ಯತ್ಯಾಸ ಉಂಟಾಗಿರಬಹುದೆಂಬ ಅನುಮಾನ ವ್ಯಕ್ತವಾಗಿದೆ.
ಸಾಗರ ಅಧ್ಯಯನ ವಿಭಾಗದ ಫ್ರೊಫೆಸರ್ ಅವರ ಪ್ರಕಾರ, ಮೊದಲ ಮಳೆಯ ನಂತರ ಕಲ್ಲೇಡಿಗಳು ತಮ್ಮ ಹಳೆಯ ಕವಚವನ್ನು ಕಳಚಿಕೊಂಡು ಹೊಸ ಕವಚ ರೂಪುಗೊಳ್ಳುವ ಹಂತವನ್ನು ಎದುರಿಸುತ್ತವೆ. ಈ ಸಮಯದಲ್ಲಿ ಅವುಗಳು ಹೆಚ್ಚು ದುರ್ಬಲವಾಗಿರುತ್ತವೆ. ಹವಾಮಾನದಲ್ಲಿನ ಅಲ್ಪ ಪ್ರಮಾಣದ ಬದಲಾವಣೆಯೂ ಅವುಗಳ ಬದುಕಿನ ಮೇಲೆ ಪರಿಣಾಮ ಬೀರಬಹುದು.
ಇನ್ನೊಂದು ಗಮನಾರ್ಹ ಅಂಶವೆಂದರೆ, ಈ ಬಾರಿ ದೊಡ್ಡ ಗಾತ್ರದ ಕಲ್ಲೇಡಿಗಳು ಬಹಳ ವಿರಳವಾಗಿ ಕಂಡುಬರುತ್ತಿವೆ. ಸಿಕ್ಕರೂ ಅವುಗಳ ಗಾತ್ರ ಹಿಂದಿನ ವರ್ಷಗಳಿಗಿಂತ ಚಿಕ್ಕದಾಗಿದೆ ಎಂದು ಗ್ರಾಮೀಣ ಭಾಗದ ಜನರು ಹೇಳುತ್ತಿದ್ದಾರೆ. ಕಳೆದ ವರ್ಷ ನಾಲ್ಕು ದೊಡ್ಡ ಕಲ್ಲೇಡಿಗಳಿಗೆ 150 ರೂಪಾಯಿವರೆಗೆ ಬೆಲೆ ಸಿಕ್ಕಿದ್ದರೆ, ಈ ಬಾರಿ ಮಾರುಕಟ್ಟೆಯಲ್ಲಿ ಅವುಗಳ ಸುಳಿವೇ ಇಲ್ಲ.
ಪರಿಸರ ಹಾಗೂ ಹವಾಮಾನ ಬದಲಾವಣೆಯ ಪರಿಣಾಮಗಳು ಕೇವಲ ಮನುಷ್ಯರ ಬದುಕಿನ ಮೇಲಷ್ಟೇ ಅಲ್ಲ, ಪ್ರಕೃತಿಯ ಸೂಕ್ಷ್ಮ ಜೀವವೈವಿಧ್ಯದ ಮೇಲೂ ಪರಿಣಾಮ ಬೀರುತ್ತಿವೆ ಎಂಬುದಕ್ಕೆ ಕಲ್ಲೇಡಿಗಳ ಈ ಕುಸಿತ ಮತ್ತೊಂದು ಉದಾಹರಣೆಯಾಗಿದೆ. ಮುಂದಿನ ದಿನಗಳಲ್ಲಿ ಈ ಕುರಿತು ವೈಜ್ಞಾನಿಕ ಅಧ್ಯಯನಗಳು ನಡೆದರೆ ಮಾತ್ರ ನಿಖರ ಕಾರಣಗಳು ಬೆಳಕಿಗೆ ಬರಲಿವೆ.
ಮಳೆ ಜೋರಾಗಿದ್ದರೂ ಕಲ್ಲೇಡಿಗಳು ಕಾಣಿಸದಿರುವುದು ಪ್ರಕೃತಿಯ ಮೌನ ಎಚ್ಚರಿಕೆಯೇ ಎಂಬ ಪ್ರಶ್ನೆ ಈಗ ಕರಾವಳಿ ಮತ್ತು ಮಲೆನಾಡಿನ ಜನರಲ್ಲಿ ಮೂಡಿದೆ.