ಉತ್ತರ ಕನ್ನಡ ಜಿಲ್ಲೆಯ ಅನೇಕ ಮಳೆ ಮಾಪನ ಕೇಂದ್ರಗಳು ಹಾಳಾಗಿದ್ದು, ಇಲ್ಲಿನ ಕಳ್ಳರು ಆ ಮಾಪನ ಯಂತ್ರಗಳನ್ನು ಸಹ ಬಿಟ್ಟಿಲ್ಲ. ಆ ಯಂತ್ರದ ತಲೆಬುಡದ ತಿಳುವಳಿಕೆಯಿಲ್ಲದಿದ್ದರೂ ಕಳ್ಳರು ಅದನ್ನು ಕದ್ದೊಯ್ದಿದ್ದಾರೆ!
ರಾಜ್ಯದಲ್ಲಿ 6600ಕ್ಕೂ ಅಧಿಕ ಮಳೆ ಮಾಪನ ಕೇಂದ್ರಗಳಿವೆ. 1350 ಮಳೆ ಮಾಪನ ಕೇಂದ್ರವನ್ನು ಹೊಸದಾಗಿ ಸ್ಥಾಪಿಸಲು ಸರ್ಕಾರ ಅನುಮೋದನೆಯನ್ನು ನೀಡಿದೆ. ಈ ವೇಳೆ ಕಳ್ಳತನವಾಗಿರುವ ಮಳೆ ಮಾಪನ ಯಂತ್ರಗಳ ಬಗ್ಗೆಯೂ ಮಾಹಿತಿ ಬಂದಿದ್ದು, ಉತ್ತರ ಕನ್ನಡ ಜಿಲ್ಲೆಯ ಎರಡು ಮಳೆ ಮಾಪನ ಕೇಂದ್ರದಲ್ಲಿನ ಯಂತ್ರಗಳು ಕಳ್ಳರ ಪಾಲಾಗಿದೆ. ಹಾಳಾದ ಮಳೆ ಮಾಪನ ಯಂತ್ರಗಳನ್ನು ರಿಪೇರಿ ಮಾಡುವುದು ಸುಲಭದ ಕೆಲಸವಲ್ಲ. ಆ ಯಂತ್ರಗಳನ್ನು ಗುಜುರಿಗೆ ಹಾಕಿದರೂ ಕಾಸು ಬರುವುದಿಲ್ಲ. ಯಾವ ಬಗೆಯ ಸಂಶೋಧನೆಗೂ ಹಾಳಾದ ಯಂತ್ರಗಳು ಸಹಕಾರಿ ಅಲ್ಲ. ಅದಾಗಿಯೂ, ಕಳ್ಳರು ಆ ಅನುಪಯುಕ್ತ ಯಂತ್ರಗಳನ್ನು ಸಹ ಬಿಟ್ಟಿಲ್ಲ!
ಸದ್ಯ ಕಳ್ಳರು ಕದ್ದೊಯ್ದ ಯಂತ್ರಗಳ ಬದಲು ಹೊಸ ಯಂತ್ರ ಅಳವಡಿಸಲು ಸರ್ಕಾರ ಮುಂದಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಒಂಬತ್ತು ಮಳೆ ಮಾಪನ ಕೇಂದ್ರಗಳನ್ನು ಬೇರೆಡೆ ಸ್ಥಳಾಂತರಿಸುವುದು ಹಾಗೂ ಐದು ಮಳೆ ಮಾಪನ ಯಂತ್ರಗಳ ದುರಸ್ತಿಯನ್ನು ಇಂಜೆನ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಗೆವಹಿಸಿದೆ. ಜೊತೆಗೆ ಕಳ್ಳತನವಾದ ಎರಡು ಯಂತ್ರಗಳ ಬದಲು ಬದಲಿ ಯಂತ್ರ ಕೂರಿಸುವ ಹೊಣೆಯನ್ನು ಇದೇ ಕಂಪನಿಗೆ ನೀಡಲಾಗಿದೆ. ಮಳೆ ಮಾಪನ ಕೇಂದ್ರಗಳ ನಿರ್ವಹಣೆಯನ್ನು ಖಾಸಗಿ ಎಜನ್ಸಿಯವರಿಗೆ ಸರ್ಕಾರವಹಿಸಿದ್ದು, ಎಜನ್ಸಿಯವರು ನಿರ್ವಹಣೆ ಸರಿ ಮಾಡದೇ ಇದ್ದರೆ ಜಿಲ್ಲಾಧಿಕಾರಿಗಳಿಗೆ ಎಜನ್ಸಿ ವಿರುದ್ಧ ಕ್ರಮ ಜರುಗಿಸುವ ಅಧಿಕಾರ ನೀಡಲಾಗಿದೆ.
ಈ ಎಲ್ಲಾ ಬೆಳವಣಿಗೆಗಳ ಜೊತೆ ಮಳೆ ಮಾಪನ ಕೇಂದ್ರದಲ್ಲಿನ ಯಂತ್ರಗಳು ಕಳವು ಆಗದಂತೆ ತಡೆಯುವುದಕ್ಕಾಗಿ ಸರ್ಕಾರ ಗ್ರಾಮ ಆಡಳಿತಾಧಿಕಾರಿಗಳಿಗೆ ಸದ್ಯ ಹೊಸ ಜವಾಬ್ದಾರಿಯನ್ನು ನೀಡಿದೆ. ಮಳೆ ಮಾಪನ ಕೇಂದ್ರದ ಯಂತ್ರಗಳು ಕಳ್ಳತನ ಆದರೆ ಗ್ರಾಮ ಆಡಳಿತಾಧಿಕಾರಿಗಳು ಅದರ ಹೊಣೆಹೋರಬೇಕು ಎಂದು ಸರ್ಕಾರ ಹೇಳಿದೆ. ಕಳ್ಳತನವಾದ ತಕ್ಷಣ ತಹಶೀಲ್ದಾರರಿಗೆ ಮಾಹಿತಿ ಕೊಟ್ಟು ಪೊಲೀಸ್ ಪ್ರಕರಣ ದಾಖಲಿಸುವಂತೆಯೂ ತಿಳಿಸಲಾಗಿದೆ. ಅದರೊಂದಿಗೆ ಪ್ರತಿ ವಾರ `ಜಿಲ್ಲಾಧಿಕಾರಿಗಳು ಮಳೆ ಮಾಪನ ಕೇಂದ್ರದ ಮೇಲ್ವಿಚಾರಣಾ ಸಭೆ ನಡೆಸಬೇಕು. ಮಳೆ ಮಾಪನ ಯಂತ್ರಗಳ ಸ್ಥಿತಿಗತಿ ಬಗ್ಗೆ ಅರಿತಿರಬೇಕು’ ಎಂದು ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಕಚೇರಿಯಿಂದ ಸೂಚನೆ ಬಂದಿದೆ.
ಮಾಹಿತಿ ಹಾಗೂ ದಾಖಲೆಗಳ ಪ್ರಕಾರ, ಕುದ್ರುಗಿ, ಕಾತೂರು, ಮಳಗಿ, ತಾರೆಹಳ್ಳಿ-ಕಾನಸೂರು, ಬಾಡದಲ್ಲಿನ ಮಳೆ ಮಾಪನ ಯಂತ್ರಗಳು ದುರಸ್ಥಿ ಆಗಬೇಕಿದೆ. ಚೌಡಳ್ಳಿ ಹಾಗೂ ತತ್ವಣಗಿಯಲ್ಲಿದ್ದ ಯಂತ್ರಗಳು ಕಳ್ಳರ ಪಾಲಾಗಿದೆ. ಕೋಣಾರ, ಶಿರಾಳಿ, ನವೀಲ್ಗೋಣ, ದೇವಳಮಕ್ಕಿ, ಕೆರವಡಿ, ಹೊಲನಗದ್ದೆ, ಬೆಡಸಗಾಂ, ಹೆಗ್ಗರಣಿ ಹಾಗೂ ಬಂಕನಾಳದಲ್ಲಿ ಮಳೆ ಮಾಪನ ಕೇಂದ್ರಕ್ಕಾಗಿ ಜಾಗ ಹುಡುಕಾಟ ನಡೆದಿದೆ. ಕೂಜಳ್ಳಿಯಲ್ಲಿನ ಮಳೆ ಮಾಪನ ಕೇಂದ್ರದ ಸ್ಥಳವೂ ಬದಲಾವಣೆಯಾಗಬೇಕಿದ್ದು, ಇದನ್ನು ಸ್ಪಟಿಕ ಇನ್ಪಾರ್ಮೇಶನ್ ಟೆಕ್ನಾಲಜಿ ಪ್ರೆöÊ ಲಿ ಕಂಪನಿಗೆವಹಿಸಲಾಗಿದೆ. ಮಳೆ ಮಾಪನ ಕೇಂದ್ರಗಳ ಸ್ಥಳ ಬದಲಾವಣೆಗಾಗಿ 10*10 ಅಡಿಯ ಸೂಕ್ತ ಜಾಗ ಕೊಡುವಂತೆ ನೈಸರ್ಗಿಕ ವಿಕೋಪ ಕೇಂದ್ರದವರು ಜಿಲ್ಲಾಡಳಿತಕ್ಕೆ ಎರಡು ಬಾರಿ ಪತ್ರ ಬರೆದಿದ್ದಾರೆ.
`ಜಿಲ್ಲಾಧಿಕಾರಿಗಳು ಪ್ರತಿ ವಾರ ಸಭೆ ನಡೆಸಿ ಮಳೆ ಮಾಪನ ಕೇಂದ್ರದ ಸುಸ್ಥಿತಿ ಬಗ್ಗೆ ಪರಿಶೀಲಿಸಬೇಕು. ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರು ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರದ ಸಂಪೂರ್ಣ ಜವಾಬ್ದಾರದಾರರಾಗಿದ್ದು, ಪ್ರತಿ ವಾರ ಕನಿಷ್ಟ 10ಕಡೆ ಭೇಟಿ ನೀಡಿ ಯಂತ್ರಗಳನ್ನು ಪರಿಶೀಲಿಸಬೇಕು. ನಂತರ ಯಂತ್ರಗಳ ಬಗ್ಗೆ ಅಪರ ಜಿಲ್ಲಾಧಿಕಾರಿಗಳಿಗೆ ವರದಿ ಕೊಡಬೇಕು’ ಎಂದು ಸಹ ಸರ್ಕಾರ ಸೂಚನೆಗಳನ್ನು ಹೊರಡಿಸಿದೆ. ಜೊತೆಗೆ ವಿವಿಧ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಹೊಸದಾಗಿ ಟೆಂಡರ್ ಕರೆದು ಟೆಲಿಮೆಟ್ರಿಕ್ ಮಳೆ ಮಾಪನ ಕೇಂದ್ರ ಸ್ಥಾಪಿಸುವುದಾಗಿಯೂ ಸರ್ಕಾರ ಮಾಹಿತಿ ನೀಡಿದೆ.
ದಾಖಲೆಗಳ ಕ್ರೂಢೀಕರಣ: ಡಾ ರವಿಕಿರಣ ಪಟವರ್ಧನ, ಆಯುರ್ವೇದ ವೈದ್ಯರು, ಶಿರಸಿ