RTI ಅರ್ಜಿ ಸಲ್ಲಿಕೆಗೆ ಹೋಗಿದ್ದ ಮಹಿಳಾ ನ್ಯಾಯವಾದಿ ಮೇಲೆ ಅಧಿಕಾರಿಯೊಬ್ಬರು ದಬ್ಬಾಳಿಕೆ ಮಾಡಿದ್ದಾರೆ. ಇದರಿಂದ ಸಿಡಿದೆದ್ದ ನ್ಯಾಯವಾದಿ ಆ ಅಧಿಕಾರಿ ವಿರುದ್ಧ ಕಾನೂನು ಸಮರ ಶುರು ಮಾಡಿದ್ದಾರೆ. ಮಾಹಿತಿ ಕೊಡದ ಅಧಿಕಾರಿ ವಿರುದ್ಧ ಅವರು ಕೋರ್ಟಿನಲ್ಲಿ ಕೇಸು ಹಾಕಿದ್ದಾರೆ!
ಕಾರವಾರದ ಸೋನಾರವಾಡದಲ್ಲಿ ಪದ್ಮಾ ತಾಂಡೇಲ್ ಅವರು ವಾಸವಾಗಿದ್ದಾರೆ. ನ್ಯಾಯವಾದಿಯಾಗಿ ಅವರು ಬದುಕು ಕಟ್ಟಿಕೊಂಡಿದ್ದಾರೆ. ಮೇ 5ರಂದು ಅವರು ಕಾರವಾರ ಎಂ ಜಿ ರಸ್ತೆಯ ಎನ್ ಸಿ ಸಿ ಕಚೇರಿಗೆ ಹೋಗಿದ್ದು, ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿ ಸಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಅಲ್ಲಿನ ಅಧಿಕಾರಿ-ಸಿಬ್ಬಂದಿ ಅವರ ಅರ್ಜಿ ಸ್ವೀಕರಿಸಿಲ್ಲ. ಈ ಬಗ್ಗೆ ಪ್ರಶ್ನಿಸಿದಾಗ ವಾಗ್ವಾದ ನಡೆದಿದೆ.
ಈ ವೇಳೆ ಅಲ್ಲಿಗೆ ಆಗಮಿಸಿದ ಕೇಂದ್ರ ಸರ್ಕಾರಿ ಅಧಿಕಾರಿ ಶುಶಾಂತ ಅವರು ಪದ್ಮಾ ತಾಂಡೇಲ್ ಅವರ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ. `ಕಚೇರಿಯಿಂದ ಹೊರ ಹೋಗು’ ಎಂದು ಬೆದರಿಸಿದ್ದಾರೆ. ಹಿಂದಿಯಲ್ಲಿ ಬೈದು ನಿಂದಿಸಿದ್ದಾರೆ. ಅರ್ಜಿ ಸ್ವೀಕರಿಸುವ ಬದಲು ಅನಗತ್ಯವಾಗಿ ಕಚೇರಿ ಒಳಗೆ ಕೂರಿಸಿ ಹಿಂಸಿಸಿದ್ದಾರೆ. ಅದಾದ ನಂತರ ಕಚೇರಿಯಿಂದ ಅವರನ್ನು ಹೊರಗೆ ದಬ್ಬಿದ್ದಾರೆ. ಈ ಎಲ್ಲಾ ವಿಷಯದ ಬಗ್ಗೆ ಪದ್ಮಾ ತಾಂಡೇಲ್ ಅವರು ಪೊಲೀಸರಿಗೆ ವಿಷಯ ತಿಳಿಸಿದ್ದು, ಅದಾದ ನಂತರ ಕೋರ್ಟಿಗೆ ಹೋಗಿ ದೂರಿದ್ದಾರೆ. ನ್ಯಾಯಾಲಯದ ಸೂಚನೆ ಮೇರೆಗೆ ಪೊಲೀಸರು ಕೇಂದ್ರ ಸರ್ಕಾರದ ಅಧಿಕಾರಿ ಶುಶಾಂತ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ.