ಹೊನ್ನಾವರದ ಪಿಸೈ ಮಹಂತೇಶ ವಾಲ್ಮೀಕಿ ಹಾಗೂ ಮಂಜುನಾಥ ಸೇರಿ ಪಟ್ಟಣ ಪ್ರದಕ್ಷಿಣೆ ಹಾಕಿದ್ದು, ಈ ವೇಳೆ ಟೆಕ್ನಿಶಿಯನ್ ವಿದ್ಯೇಶ ಮೇಸ್ತ ಹಾಗೂ ಕ್ಯಾಶಿಯರ್ ನಾಗೇಂದ್ರ ನೀಲೇಕಣಿ ತಪ್ಪು ಮಾಡಿ ಸಿಕ್ಕಿ ಬಿದ್ದಿದ್ದಾರೆ. ಬೇರೆ ಬೇರೆ ಸ್ಥಳದಲ್ಲಿ ಅವರಿಬ್ಬರು ಅಮಲಿನಲ್ಲಿ ಅಲೆದಾಡುತ್ತಿರುವಾಗ ಪೊಲೀಸರು ಹಿಡಿದು ಕೇಸು ಹಾಕಿದ್ದಾರೆ.
ಹೊನ್ನಾವರದ ಕಾಸರಕೋಡು ಮಲಬಾರ್ ಕೇರಿಯಲ್ಲಿ ವಿದ್ಯೇಶ ಪರಮೇಶ ಮೇಸ್ತ ಅವರು ಟೆಕ್ನಿಶಿಯನ್ ಆಗಿದ್ದಾರೆ. 26 ವರ್ಷದ ಅವರು ಮಾದಕ ವ್ಯಸನದ ಮೋಹಕ್ಕೆ ಬಿದ್ದಿದ್ದು, ಕುಟುಂಬದವರಿಗೂ ಗೊತ್ತಾಗದ ಹಾಗೇ ಕದ್ದು ಮುಚ್ಚಿ ಗಾಂಜಾ ಸೇವಿಸುತ್ತಾರೆ. ಜೂನ್ 14ರಂದು ಇಕೋ ಬೀಚಿಗೆ ಹೋಗಿದ್ದ ವಿದ್ಯೇಶ ಮೇಸ್ತ ಅವರು ಅಲ್ಲಿಯೂ ತಮ್ಮ ಚಟ ಮುಂದುವರೆಸಿದ್ದಾರೆ. ಈ ವೇಳೆ ಪಿಸೈ ಮಹಂತೇಶ ವಾಲ್ಮೀಕಿ ಅವರು ಅಲ್ಲಿಗೆ ಆಗಮಿಸಿ ವಿದ್ಯೇಶ ಮೇಸ್ತ ಅವರ ನಶೆಯಿಳಿಸಿದ್ದಾರೆ.
ಹೊನ್ನಾವರದ ಕಾಸರಕೋಡುವಿನಲ್ಲಿ ನಾಗೇಂದ್ರ ಪರಮೇಶ್ವರ ನೀಲೇಕಣಿ ಅವರು ವಾಸವಾಗಿದ್ದು, ಅವರು ಕ್ಯಾಶಿಯರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ. ಅವರು ಸಹ 28ನೇ ವಯಸ್ಸಿನಲ್ಲಿಯೇ ಮೋಜು-ಮಸ್ತಿಗಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳ ಮೋಹಕ್ಕೆ ಒಳಗಾದ ನಾಗೇಮದ್ರ ನೀಲೇಕಣಿ ಅವರು ಜೂನ್ 14ರ ಮಧ್ಯಾಹ್ನ ಹೊನ್ನಾವರದ ಶ್ರೀದೇವಿ ಆಸ್ಪತ್ರೆ ಬಳಿ ಗಾಂಜಾ ಸೇವಿಸಿದ್ದಾರೆ. ಅಲ್ಲಿ-ಇಲ್ಲಿ ಅಲೆದಾಡುತ್ತಿದ್ದ ನಾಗೇಂದ್ರ ನೀಲೇಕಣಿ ಅವರನ್ನು ಪಿಸೈ ಮಂಜುನಾಥ ಅವರು ಹಿಡಿದಿದ್ದಾರೆ.
ತಮ್ಮ ವ್ಯಾಪ್ತಿಯಲ್ಲಿನ ಯುವಕರು ಅಡ್ಡದಾರಿ ಹಿಡಿದಿರುವುದನ್ನು ನೋಡಿದ ಪೊಲೀಸರು ಅವರಿಬ್ಬರಿಗೂ ಕಠಿಣ ಎಚ್ಚರಿಕೆ ನೀಡಿದ್ದಾರೆ. ಗಾಂಜಾ ಸೇವನೆಯ ದುಷ್ಪರಿಣಾಮಗಳ ಬಗ್ಗೆ ಪಾಠ ಮಾಡಿದ್ದಾರೆ. ಅದಾದ ನಂತರ ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವಂತೆ ಸೂಚಿಸಿ, ಕೇಸು ದಾಖಲಿಸಿದ್ದಾರೆ.