ಅಂಕೋಲಾ ತಾಲ್ಲೂಕಿನ ಶಿರೂರುದಲ್ಲಿ ಸಂಭವಿಸಿದ್ದ ಭೀಕರ ಗುಡ್ಡ ಕುಸಿತ ದುರಂತ ದಕ್ಷಿಣ ಭಾರತದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿತ್ತು. ಈ ದುರಂತದಲ್ಲಿ ಕಾಣೆಯಾಗಿದ್ದ ಕೇರಳದ ಲಾರಿ ಚಾಲಕ ಅರ್ಜುನ್ ಅವರನ್ನು ಪತ್ತೆಹಚ್ಚಲು ನಡೆದ 72 ದಿನಗಳ ಸುದೀರ್ಘ ಕಾರ್ಯಾಚರಣೆ ಹಾಗೂ ಆ ಅವಧಿಯಲ್ಲಿ ಅವರ ಕುಟುಂಬ ಅನುಭವಿಸಿದ ಸಂಕಟ ಇದೀಗ ಪುಸ್ತಕ ರೂಪದಲ್ಲಿ ಹೊರಬಂದಿದೆ.
ಅರ್ಜುನ್ ಅವರ ತಾಯಿ ಶೀಲಾ ಕುರುವಚ್ಚಾಲ್ ಅವರು ತಮ್ಮ ಮಗನಿಗಾಗಿ ಕಾದು ಕಳೆದ ನೋವಿನ ದಿನಗಳನ್ನು ‘ಅರ್ಜುನ್ ನನ್ನ ಮಗ’ ಎಂಬ ಕೃತಿಯಲ್ಲಿ ದಾಖಲಿಸಿದ್ದಾರೆ. ಮಗನಿಗಾಗಿ ನಡೆಸಿದ ನಿರಂತರ ನಿರೀಕ್ಷೆ, ಆತಂಕ ಮತ್ತು ಭಾವನಾತ್ಮಕ ಹೋರಾಟವನ್ನು ಪುಸ್ತಕದಲ್ಲಿ ಮನಮುಟ್ಟುವಂತೆ ವಿವರಿಸಲಾಗಿದೆ. ಈ ಕೃತಿಗೆ ವಿಪತ್ತು ನಿರ್ವಹಣಾ ತಜ್ಞ ಹಾಗೂ ಲೇಖಕ ಮುರಳಿ ತುಮ್ಹಾರೂಕುಡಿ ಮುನ್ನುಡಿ ಬರೆದು, ಇದನ್ನು ಸಮಕಾಲೀನ ದುರಂತ ಸಾಹಿತ್ಯದ ಮಹತ್ವದ ಕೃತಿಗಳಲ್ಲಿ ಒಂದೆಂದು ಬಣ್ಣಿಸಿದ್ದಾರೆ.
2024ರ ಜುಲೈ 16ರಂದು ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲಿ ಸಂಭವಿಸಿದ ಗುಡ್ಡ ಕುಸಿತದಲ್ಲಿ ಲಾರಿ ಮತ್ತು ಗ್ಯಾಸ್ ಟ್ಯಾಂಕರ್ ಸೇರಿದಂತೆ ಹಲವು ವಾಹನಗಳು ಮಣ್ಣಿನಡಿ ಸಿಲುಕಿದ್ದವು. ಈ ದುರಂತದಲ್ಲಿ ಒಟ್ಟು 11 ಮಂದಿ ಮೃತಪಟ್ಟಿದ್ದರು. ಆರಂಭಿಕ ಕಾರ್ಯಾಚರಣೆಯಲ್ಲಿ ಕೆಲವರ ಮೃತದೇಹಗಳು ಪತ್ತೆಯಾಗಿದ್ದರೂ, ಅರ್ಜುನ್ ಸೇರಿದಂತೆ ಮೂವರು ಕಾಣೆಯಾಗಿದ್ದರು. ನಿರಂತರ ಮಳೆ ಮತ್ತು ಪ್ರತಿಕೂಲ ಪರಿಸ್ಥಿತಿಗಳಿಂದಾಗಿ ರಕ್ಷಣಾ ಕಾರ್ಯಕ್ಕೆ ಹಲವು ಸವಾಲುಗಳು ಎದುರಾಗಿದ್ದವು.
ಒಂದು ಹಂತದಲ್ಲಿ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದ್ದರೂ, ಕೇರಳದ ಜನತೆ ಹಾಗೂ ಅಲ್ಲಿನ ಜನಪ್ರತಿನಿಧಿಗಳ ಒತ್ತಾಯದ ಹಿನ್ನೆಲೆಯಲ್ಲಿ ಮತ್ತೆ ಶೋಧ ಕಾರ್ಯ ಮುಂದುವರಿಯಿತು. ಬಳಿಕ 72 ದಿನಗಳ ಸುದೀರ್ಘ ಕಾರ್ಯಾಚರಣೆಯ ನಂತರ ಅರ್ಜುನ್ ಅವರ ಮೃತದೇಹ ಪತ್ತೆಯಾಯಿತು. ಆದರೆ ದುರಂತದಲ್ಲಿ ಕಾಣೆಯಾಗಿದ್ದ ಇನ್ನಿಬ್ಬರಿಗಾಗಿ ಹುಡುಕಾಟದ ಪ್ರಶ್ನೆ ಇನ್ನೂ ಉಳಿದಿದೆ.
ಶೀಲಾ ಕುರುವಚ್ಚಾಲ್ ಅವರ ಕೃತಿಯಲ್ಲಿ ಅರ್ಜುನ್ ಅವರ ಬಾಲ್ಯ, ಜೀವನ ಪಯಣ ಮತ್ತು ಶಿರೂರು ದುರಂತದ ಬಳಿಕ ಕುಟುಂಬ ಎದುರಿಸಿದ ಭಾವನಾತ್ಮಕ ಹೋರಾಟವನ್ನು ವಿವರಿಸಲಾಗಿದೆ. ಮಗ ಮರಳಿ ಬರುವನೆಂಬ ಆಶಯದೊಂದಿಗೆ ಕಳೆದ ಪ್ರತಿಯೊಂದು ದಿನದ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಮಲಯಾಳಂ ಭಾಷೆಯಲ್ಲಿ ಪ್ರಕಟವಾದ ಈ ಪುಸ್ತಕವನ್ನು ಕೇರಳದ ಜನಪ್ರತಿನಿಧಿಗಳು ಬಿಡುಗಡೆ ಮಾಡಿದ್ದಾರೆ. ದುರಂತದ ಸಂದರ್ಭದಲ್ಲಿ ನೆರವಾದ ಎಲ್ಲರಿಗೂ ಲೇಖಕಿ ಕೃತಜ್ಞತೆ ಸಲ್ಲಿಸಿದ್ದು, ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಕರ್ನಾಟಕ ಸರ್ಕಾರ ಮತ್ತು ಸಂಬಂಧಿತ ಅಧಿಕಾರಿಗಳ ಪ್ರಯತ್ನವನ್ನೂ ಪ್ರಶಂಸಿಸಿದ್ದಾರೆ. ಈ ಕೃತಿ ಶಿರೂರು ದುರಂತದ ನೆನಪುಗಳನ್ನು ಮತ್ತೊಮ್ಮೆ ಸಾರ್ವಜನಿಕರ ಮುಂದೆ ತಂದಿದೆ.