`ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ಹಾಗೂ ಸಿದ್ದಾಪುರ ಪಿಐ ಸೀತಾರಾಮ ಅವರನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿ ಸಿದ್ದಾಪುರದಲ್ಲಿ ಭಾರೀ ಪ್ರಮಾಣದ ಪ್ರತಿಭಟನೆ ನಡೆದಿದೆ. ಮುಖ್ಯಮಂತ್ರಿ ಡಿ ಕೆ ಶಿವಕುಮಾರ, ಗೃಹ ಸಚಿವ ಪ್ರಿಯಾಂಕ ಖರ್ಗೆ ಹಾಗೂ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷಿ ಚೌದರಿ ಅವರಿಗೆ ಪ್ರತಿಭಟನಾಕಾರರು ಪತ್ರವನ್ನು ಬರೆದಿದ್ದಾರೆ.
`ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ ಹಾಗೂ ಸಿದ್ದಾಪುರ ಪಿಐ ಸೀತಾರಾಮ ಅವರಿಂದ ನಿರಂತರ ಕಿರುಕುಳವಾಗುತ್ತಿದೆ. ಅವರ ಕಿರುಕುಳ ತಾಳಲಾರದೇ ತಾನು ಆತ್ಮಹತ್ಯೆ ಮಾಡಿಕೊಳ್ಳುವುದು ಮಾತ್ರ ಬಾಕಿಯಿದೆ’ ಎಂದು ಸಿದ್ದಾಪುರ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ಅವರು ಲಿಖಿತವಾಗಿ ದೂರಿದ್ದಾರೆ. `ತನ್ನ ಹಾಗೂ ಕುಟುಂಬದ ವಿರುದ್ಧ ವ್ಯಕ್ತಿಯೊಬ್ಬರು ಜಾಲತಾಣದಲ್ಲಿ ನಿಂದನೆ ಮಾಡುತ್ತಿದ್ದಾರೆ. ಮಧು ನಾಯ್ಕ ಎಂಬ ಹೆಸರಿನಿಂದ ನಿಂದನೆ ನಡೆಯುತ್ತಿರುವ ಬಗ್ಗೆ ದೂರು ನೀಡಿದ್ದು, ತನಿಖೆ ನಂತರ ಈ ಕೆಲಸ ಮಾಡಿದವರು ಸಿದ್ದಾಪುರ ಮೂಲದ ಮಲವಳ್ಳಿಯ ಪ್ರದೀಪ ಹೆಗಡೆ ಎಂದು ಗೊತ್ತಾಗಿದೆ. ಆದರೆ, ಪೊಲೀಸರು ಅವರ ವಿರುದ್ಧ ಕಠಿಣ ಕ್ರಮ ಜರುಗಿಸಿಲ್ಲ. ಪ್ರಕರಣ ದಾಖಲಿಸಿ ಕೋರ್ಟಿಗೆ ಹಾಜರುಪಡಿಸಿದರೂ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಿಲ್ಲ’ ಎಂದು ವಸಂತ ನಾಯ್ಕ ಅವರು ದೂರಿದ್ದಾರೆ. `ಅದಾದ ನಂತರ ಗೀತಾ ಪಾಟೀಲ್ ಅವರು 3-4 ಬಾರಿ ತನ್ನನ್ನು ಕರೆಯಿಸಿ ನೀವೇ ತಪ್ಪು ಮಾಡಿದ್ದೀರಿ ಎನ್ನುತ್ತಿದ್ದಾರೆ. ನಿಮ್ಮ ಮೇಲೆ ಕೇಸ್ ಮಾಡುತ್ತೇವೆ ಎಂದು ಹೆದರಿಸುತ್ತಿದ್ದಾರೆ. ತಮ್ಮ ಮನೆಗೂ ಪೊಲೀಸರು ಬಂದು ಕಿರುಕುಳ ನೀಡುತ್ತಿದ್ದಾರೆ’ ಎಂದು ವಸಂತ ನಾಯ್ಕ ಅವರು ಆರೋಪಿಸಿದ್ದಾರೆ.
`ಸಿದ್ದಾಪುರದ ಅವರೆಕೊಪ್ಪದಲ್ಲಿ ನಡೆದ ಕೊಲೆ ಪ್ರಕರಣ, ಮರಲಿಗೆಯಲ್ಲಿ ಬಡ ರೈತನ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಸಿದ್ದಾಪುರ ಪೊಲೀಸರು ಎಡವಿದ್ದಾರೆ. ಅಕ್ರಮ ಸಂಬAಧ ವಿಷಯವಾಗಿ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ ಪ್ರಕರಣದಲ್ಲಿಯೂ ಪೊಲೀಸರು ಲೋಪ ಎಸಗಿದ್ದಾರೆ. ಮತ್ತೊಂದು ಹಿಟ್ & ರನ್ ಪ್ರಕರಣದಲ್ಲಿಯೂ ಪೊಲೀಸರು ತನಿಖೆ ಮಾಡದೇ ಅನ್ಯಾಯ ಮಾಡಿದ್ದಾರೆ. ಡಿವೈಎಸ್ಪಿ ಗೀತಾ ಪಾಟೀಲ್ ಹಾಗೂ ಸಿಪಿಐ ಸೀತಾರಾಮ ಅವರ ಅಧಿಕಾರ ಅವಧಿಯಲ್ಲಿ ಕೊಲೆ, ದರೋಡೆ ಹೆಚ್ಚಾಗಿದ್ದು ಸಾರ್ವಜನಿಕರು ಸಮಸ್ಯೆಗೆ ಸಿಲುಕಿದ್ದಾರೆ’ ಎಂದವರು ದೂರಿದ್ದಾರೆ. `ಪೊಲೀಸರು ನ್ಯಾಯ ಕೇಳಿ ಹೋದವರ ವಿರುದ್ಧವೇ ಕೇಸು ಮಾಡುತ್ತಿದ್ದಾರೆ. ಹಣದ ಆಸೆಗೆ ಬಿದ್ದು ಕಾನೂನು ವ್ಯವಸ್ಥೆಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ’ ಎಂದು ಸಹ ವಸಂತ ನಾಯ್ಕ ಮನಮನೆ ಅವರು ದೂರಿ, ಭಾಷಣ ಮಾಡಿದ್ದಾರೆ.