`ಯಲ್ಲಾಪುರದ ಸರ್ಕಾರಿ ಆಸ್ಪತ್ರೆ ರೋಗಿಗಳ ಸೇವೆಗೆ ಸದಾ ಸಿದ್ಧವಾಗಿದ್ದು, ಯಾವುದೇ ಬಗೆಯ ರೋಗವಿದ್ದರೂ ಇಲ್ಲಿ ಬರಬೇಕು. ಉತ್ತಮ ರೀತಿಯ ಚಿಕಿತ್ಸೆಪಡೆದು ಆರೋಗ್ಯವಾಗಿ ಜೀವಿಸಬೇಕು' ಎಂದು ತಾಲೂಕು ಆಡಳಿತ ವೈದ್ಯಾಧಿಕಾರಿ ಡಾ ನರೇಂದ್ರ ಪವಾರ್ ಅವರು ಹೇಳಿದ್ದಾರೆ.
ಯಲ್ಲಾಪುರದ ಚವತ್ತಿಯ ರಾಜು ಗೌಡ ಅವರು ಹಂದಿ ಜ್ವರದಿಂದ ಸಾವನಪ್ಪಿದ್ದಾರೆ. ಜ್ವರ ಕಾಣಿಸಿಕೊಂಡ ನಂತರ 11 ದಿನಗಳ ಕಾಲ ಅವರಿಗೆ ನಿರಂತರ ಚಿಕಿತ್ಸೆ ನಡೆಸಲಾಗಿದ್ದು, ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ದು ಆರೈಕೆ ಮಾಡಿದರೂ ಅವರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಿಲ್ಲ.
ADVERTISEMENT
ಯಲ್ಲಾಪುರದ ಚವತ್ತಿ ಗ್ರಾಮದಲ್ಲಿ ರಾಜು ಮಂಜಾ ಗೌಡ ಅವರು ವಾಸವಾಗಿದ್ದರು. 41 ವರ್ಷದ ಅವರಿಗೆ ಜೂನ್ 10ರಂದು ಸಣ್ಣ ಪ್ರಮಾಣದಲ್ಲಿ ಜ್ವರ ಕಾಣಿಸಿಕೊಂಡಿತ್ತು. ಉಮ್ಮಚ್ಗಿಯ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ ಅವರು ಅಲ್ಲಿ ಚಿಕಿತ್ಸೆಪಡೆದು ಮನೆಗೆ ಮರಳಿದ್ದರು. ಅದಾದ ನಂತರ ಜ್ವರ ಕಡಿಮೆ ಆಗದ ಕಾರಣ ಜೂನ್ 12ರಂದು ಅವರು ಮಂಚಿಕೇರಿಯ ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಅಲ್ಲಿ ನೀಡಿದ ಔಷಧಿಪಡೆದು ರಾಜು ಗೌಡ ಅವರು ಮನೆಗೆ ಮರಳಿದ್ದು, ಜೂನ್ 16ರಂದು ಅವರು ಇನ್ನಷ್ಟು ಆಯಾಸಗೊಂಡರು. ಜ್ವರ-ಸುಸ್ತು ಹೆಚ್ಚಾದ ಹಿನ್ನಲೆ ಜೂನ್ 16ರಂದು ರಾಜು ಗೌಡ ಅವರು ಶಿರಸಿಯ ಖಾಸಗಿ ಆಸ್ಪತ್ರೆಗೆ ತೆರಳಿದರು. ಅಲ್ಲಿ ಒಳ ರೋಗಿಯಾಗಿ ದಾಖಲಿಸಿ ಅವರನ್ನು ಆರೈಕೆ ಮಾಡಲಾಗಿದ್ದು, ನಂತರ ಆ ಆಸ್ಪತ್ರೆಯವರು ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಗೆ ಕಳುಹಿಸಿದರು. ಜೂನ್ 21ರಂದು ಕೆ ಎಸ್ ಹೆಗಡೆ ಆಸ್ಪತ್ರೆಯಲ್ಲಿ ರಾಜು ಗೌಡ ಅವರು ಸಾವನಪ್ಪಿದ್ದಾರೆ.
ಉಚಿತ ಬಂಜೆತನ ತಪಾಸಣಾ ಶಿಬಿರ - ಜೂನ್ 23, 2026
ಸ್ಥಳ: ಹೈಟೆಕ್ ರಕ್ತ ತಪಾಸಣಾ ಕೇಂದ್ರ & ಪಾಲಿ ಕ್ಲಿನಿಕ್ ಅಂಕೋಲಾ | ನೋವಾ ಐವಿಎಫ್
ADVERTISEMENT
ರಾಜು ಗೌಡ ಅವರು ಹಂದಿ ಜ್ವರದಿಂದ (H1-N1) ಸಾವನಪ್ಪಿರುವುದು ಖಚಿತವಾಗಿದೆ. ಈ ಜ್ವರ ಮೂಗು, ಗಂಟಲು, ಶ್ವಾಸಕೋಶವನ್ನು ಬಾಧಿಸುವ ಸಾಂಕ್ರಾಮಿಕ ರೋಗವಾಗಿದೆ. ಮೈ-ಕೈ ನೋವು, ಕೆಮ್ಮು, ನೆಗಡಿ, ತಲೆ ನೋವು, ಗಂಟಲು ನೋವು, ಜ್ವರ ಹಾಗೂ ಆಯಾಸ ರೋಗದ ಪ್ರಮುಖ ಲಕ್ಷಣಗಳಾಗಿವೆ. ಈ ಜ್ವರಕ್ಕೆ ತುತ್ತಾದವರು ಕೆಮ್ಮಿದಾಗ ಗಾಳಿ ಮೂಲಕ ಅದು ಮತ್ತೊಬ್ಬರಿಗೆ ಹರಡುತ್ತದೆ. ರೋಗಿಗಳಿಗೆ ಅಧಿಕ ವಿಶ್ರಾಂತಿ, ದೃವ ಆಹಾರ ಹಾಗೂ ನೀರು ಸೇವನೆ ಅತಿ ಮುಖ್ಯ. ಸಕಾಲದಲ್ಲಿ ಚಿಕಿತ್ಸೆ ದೊರೆತರೆ ರೋಗ ವಾಸಿಯಾಗುವ ಸಾಧ್ಯತೆಗಳಿವೆ. ಅದಾಗಿಯೂ, ಉಸಿರಾಟ ಸಮಸ್ಯೆ, ಎದೆ ನೋವು, ನಿರ್ಜಲೀಕರಣ, ಆಯಾಸ ಕಾಣಿಸಿದರೆ ವೈದ್ಯರನ್ನು ಭೇಟಿಯಾಗುವುದು ಸೂಕ್ತ.
ರೋಗದಿಂದ ಬಳಲುತ್ತಿದ್ದ ರಾಜು ಗೌಡ ಅವರ ಮನೆಗೆ ಜೂನ್ ೧೮ರಂದು ಆರೋಗ್ಯಾಧಿಕಾರಿಗಳು ಭೇಟಿ ನೀಡಿದ್ದರು. ರಾಜು ಗೌಡ ಅವರ ಕುಟುಂಬ ಸದಸ್ಯರನ್ನು ಸಹ ಅವರು ತಾಲೂಕು ಆಸ್ಪತ್ರೆಗೆ ಕರೆದೊಯ್ದು ಅವರನ್ನು ತಪಾಸಣೆಗೆ ಒಳಪಡಿಸಿದ್ದರು. ಕುಟುಂಬದವರನ್ನು ಪ್ರತ್ಯೇಕವಾಗಿರಿಸಿ ಅವರ ಸುರಕ್ಷತೆಗೆ ಒತ್ತು ನೀಡಿದ್ದರು. ಅದರ ಪರಿಣಾಮ ರೋಗ ಬೇರೆಯವರಿಗೆ ಹರಡುವ ಅಪಾಯ ತಪ್ಪಿದ್ದು, ಜೊತೆಗೆ ಗ್ರಾಮದಲ್ಲಿಯೂ ವೈದ್ಯರು ಈ ರೋಗದ ಬಗ್ಗೆ ಅರಿವು ಮೂಡಿಸಿದ್ದಾರೆ.