ನಡುತೋಪು ಕಾಮಗಾರಿ ಹೆಸರಿನಲ್ಲಿ ಮೂರು ವರ್ಷದ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಟ್ಟ ಗಿಡಗಳ ಬಗ್ಗೆ ಶಿರಸಿಯ ನ್ಯಾಯವಾದಿ ರವೀಂದ್ರ ನಾಯ್ಕ ಅವರು ಲೆಕ್ಕ ಕೇಳಿದ್ದು, ಅರಣ್ಯ ಇಲಾಖೆ ಆ ಲೆಕ್ಕ ಕೊಟ್ಟಿಲ್ಲ. ಈ ತಿಂಗಳ ಅಂತ್ಯದೊಳಗೆ ಉತ್ತರ ನೀಡದೇ ಇದ್ದರೆ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದ್ದಾರೆ.
ಮೂರು ವರ್ಷದ ಅವಧಿಯಲ್ಲಿ ಅರಣ್ಯದಲ್ಲಿ ನೆಟ್ಟ ಗಿಡ ಎಷ್ಟು? ಅದರಲ್ಲಿ ಬದುಕಿದ್ದು ಎಷ್ಟು? ಎಂದು ರವೀಂದ್ರ ನಾಯ್ಕ ಅವರು ಪ್ರಶ್ನಿಸಿದ್ದಾರೆ. ಮಾಹಿತಿ ಹಕ್ಕು ಕಾಯ್ದೆ ಅಡಿ ಅವರು ಅರ್ಜಿ ಸಲ್ಲಿಸಿದರೂ ಅದಕ್ಕೆ ಈವರೆಗೆ ಉತ್ತರ ಸಿಕ್ಕಿಲ್ಲ. 30 ದಿನಗಳ ಒಳಗೆ ಉತ್ತರಿಸದೇ ಇದ್ದರೆ ಅರಣ್ಯಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸುವುದಾಗಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ಅವರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ದಶ ಲಕ್ಷ ಗಿಡ ನೆಡುವ ಅಭಿಯಾನದ ಅಂಗವಾಗಿ ರವೀಂದ್ರ ನಾಯ್ಕ ಅವರು ಮುಂಡಗೋಡಿನ ನಂದಿಕಟ್ಟದಲ್ಲಿ ಗಿಡ ನಾಟಿ ಮಾಡಿದ್ದು, ಈ ವೇಳೆ ಅರಣ್ಯ ಇಲಾಖೆಯ ಗಿಡ ನೆಡುವ ಕಾರ್ಯಕ್ರಮದ ಬಗ್ಗೆ ಮಾತನಾಡಿದ್ದಾರೆ. `ನಡುತೋಪು ಕಾಮಗಾರಿಗೆ ವಿಷಯವಾಗಿ ಸಾಕಷ್ಟು ಟೀಕೆಗಳು ಬರುತ್ತಿದೆ. ಹೀಗಾಗಿ ಆ ವಿಷಯವಾಗಿ ಮಾಹಿತಿ ಪ್ರಕಟಿಸಲು ಅರ್ಜಿ ಸಲ್ಲಿಸಲಾಗಿದೆ. ಅದನ್ನು ಅಧಿಕಾರಿಗಳು ಬಹಿರಂಗಪಡಿಸಬೇಕು’ ಎಂದವರು ಆಗ್ರಹಿಸಿದ್ದಾರೆ.