ಶಿರಸಿಯ ಅನೇಕ ಕಡೆ ಅವೈಜ್ಞಾನಿಕ ಕೆಲಸ ನಡೆಯುತ್ತಿದ್ದು, ಅದರಿಂದ ಜನ ಸಮಸ್ಯೆಗೆ ಸಿಲುಕಿದ್ದಾರೆ. ಹೀಗಾಗಿ ಆ ಅವೈಜ್ಞಾನಿಕ ಕಾಮಗಾರಿಗಳ ವಿರುದ್ಧ ಜೆಡಿಎಸ್ ನಾಯಕ ಉಪೇಂದ್ರ ಪೈ ಅವರು ತಿರುಗಿ ಬಿದ್ದಿದ್ದಾರೆ.
ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿರುವ ಬಗ್ಗೆ ಉಪೇಂದ್ರ ಪೈ ಅವರು ಅಧಿಕಾರಿಗಳ ಗಮನಸೆಳೆದಿದ್ದಾರೆ. ಅರೆಬರೆ ಕೆಲಸದಿಂದಾಗಿ ಅಪಘಾತ ಪ್ರಮಾಣ ಹೆಚ್ಚಾಗುತ್ತಿದೆ ಎಂದು ದೂರಿದ ಅವರು ರಿಕ್ಷಾ ಸಂಘಟನೆಯವರ ಜೊತೆ ಸೇರಿ ಪ್ರತಿಭಟನೆಯನ್ನು ಮಾಡಿದ್ದಾರೆ. ಉಪೇಂದ್ರ ಪೈ ಅವರು ಪ್ರತಿಭಟನೆ ಮಾಡುವ ಸುದ್ದಿ ಕೇಳಿ ಅನೇಕರು ಅಲ್ಲಿ ಜಮಾಯಿಸಿದ್ದು, ಅವರಿಗೆ ಬೆಂಬಲವ್ಯಕ್ತಪಡಿಸಿದ್ದಾರೆ.
ಶಿರಸಿ ನಗರದ ಪಂಡಿತ ಸಾರ್ವಜನಿಕ ಆಸ್ಪತ್ರೆಯಿಂದ ಸಾಮ್ರಾಟ ಹೊಟೆಲಿನವರೆಗೆ ಕೈಗೊಂಡಿರುವ ದ್ವಿಪಥ ರಸ್ತೆ ಅಭಿವೃದ್ಧಿ ಕಾಮಗಾರಿಯ ಬಗ್ಗೆ ಪ್ರತಿಭಟನಾಕಾರರು ಪ್ರಶ್ನೆ ಕೇಳಿದ್ದಾರೆ. ಕಳೆದ ಹಲವು ವರ್ಷಗಳಿಂದ ಈ ಕೆಲಸ ಕುಂಟುತ್ತ ಸಾಗುತ್ತಿದ್ದು, ರಸ್ತೆ ಅಗಲೀಕರಣ ಕಾಮಗಾರಿ ಪೂರ್ಣಗೊಳ್ಳದ ಕಾರಣ ಜನ ಸಮಸ್ಯೆ ಅನುಭವಿಸುತ್ತಿರುವ ಬಗ್ಗೆ ಆಕ್ರೋಶವ್ಯಕ್ತಪಡಿಸಿದ್ದಾರೆ. ಪಂಡಿತ ಸಾರ್ವಜನಿಕ ಆಸ್ಪತ್ರೆಯಿಂದ ಉಪಅರಣ್ಯ ಸಂರಕ್ಷಣಾಧಿಕಾರಿ ಕಚೇರಿವರೆಗೆ ರಸ್ತೆಯ ಮಧ್ಯಭಾಗದಲ್ಲಿ ಡಿವೈಡರ್ ಅಳವಡಿಸಲಾಗಿದ್ದರೂ, ರಸ್ತೆಯ ಅಗಲವನ್ನು ಸಮರ್ಪಕವಾಗಿ ವಿಸ್ತರಿಸದಿರುವ ಬಗ್ಗೆ ಅಸಮಧಾನವ್ಯಕ್ತಪಡಿಸಿದ್ದಾರೆ.
`ಈಗಾಗಲೇ ಈ ಭಾಗದಲ್ಲಿ ರಸ್ತೆ ಕಿರಿದಾಗಿದ್ದು, ಡಿವೈಡರ್ ನಿರ್ಮಾಣದ ಬಳಿಕ ವಾಹನಗಳು ಒಂದನ್ನೊAದು ದಾಟಲು ಕಷ್ಟಪಡುತ್ತಿವೆ. ಈ ರಸ್ತೆಯ ಎರಡೂ ಬದಿಗಳಲ್ಲಿ ಪ್ರಮುಖ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದ್ದು, ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವೇಳೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಚರಿಸುತ್ತಾರೆ. ಶಾಲೆ ಬಿಡುವ ಸಮಯದಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿ ವಿದ್ಯಾರ್ಥಿಗಳು ರಸ್ತೆ ದಾಟಲು ಸಮಸ್ಯೆ ಅನುಭವಿಸುತ್ತಿದ್ದಾರೆ’ ಎಂದು ಅಲ್ಲಿ ಸೇರಿದ್ದ ಜನ ವಿವರಿಸಿದ್ದಾರೆ.
`ನಗರದ ಪ್ರಮುಖ ಸಂಪರ್ಕ ರಸ್ತೆಯಾಗಿರುವ ಈ ಮಾರ್ಗದಲ್ಲಿ ಪ್ರತಿದಿನ ನೂರಾರು ವಾಹನಗಳು ಸಂಚರಿಸುತ್ತವೆ. ಕಾಮಗಾರಿ ವಿಳಂಬದಿAದ ವಾಹನ ದಟ್ಟಣೆ ಹೆಚ್ಚುತ್ತಿದ್ದು, ತುರ್ತು ಸೇವೆಗಳ ವಾಹನಗಳ ಸಂಚಾರಕ್ಕೂ ಅಡಚಣೆ ಉಂಟಾಗುತ್ತಿದೆ. ವಿಶೇಷವಾಗಿ ಆಸ್ಪತ್ರೆ ಸಮೀಪದ ಭಾಗದಲ್ಲಿ ಆಂಬುಲೆನ್ಸ್ಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ, ಡಿವೈಡರ್ನಿಂದ ಉಂಟಾಗಿರುವ ಸಂಚಾರ ಸಮಸ್ಯೆಗೆ ಪರಿಹಾರ ಕಂಡುಹಿಡಿಯಬೇಕು’ ಎಂದು ಆಗ್ರಹಿಸಿದ್ದಾರೆ.