ಅಂಕೋಲಾ ತೆಂಕಣಕೇರಿಯ ಬೊಮ್ಮಯ್ಯ ದೇವಸ್ಥಾನ ಬಳಿಯಿರುವ ಗುಲಾಬಿ ನಾಯ್ಕ ಅವರಿಗೆ ಅವರ ಮಕ್ಕಳೇ ಮೋಸ ಮಾಡಿದ್ದಾರೆ. ಗುಲಾಬಿ ನಾಯ್ಕ ಅವರ ಪತಿ ಪಾಂಡುರoಗ ನಾಯ್ಕ ಅವರ ಬ್ಯಾಂಕ್ ಖಾತೆಯಲ್ಲಿದ್ದ 1 ಕೋಟಿಗೂ ಅಧಿಕ ಮೊತ್ತವನ್ನು ಪುತ್ರಿ ನಾಗಶ್ರೀ ನಾಯ್ಕ, ನಾಗಶ್ರೀ ನಾಯ್ಕ ಅವರ ಪತಿ ಸೂರಜ ನಾಯ್ಕ ಹಾಗೂ ಸೂರಜ ನಾಯ್ಕ ಅವರ ಅಕ್ಕ ಶೀಥಲ ನಾಯ್ಕ ಸೇರಿ ಲಪಟಾಯಿಸಿದ್ದಾರೆ.
ಅಂಕೋಲಾ ತೆಂಕಣಕೇರಿಯ ಬೊಮ್ಮಯ್ಯ ದೇವಸ್ಥಾನ ಬಳಿ ಗುಲಾಬಿ ಪಾಂಡುರoಗ ನಾಯ್ಕ ಅವರು ವಾಸವಾಗಿದ್ದಾರೆ. ಗುಲಾಬಿ ನಾಯ್ಕ ಅವರು ಮೊದಲು ಸರ್ಕಾರಿ ಸೇವೆಯಲ್ಲಿದ್ದು, ನಿವೃತ್ತಿ ನಂತರ ವಿಶ್ರಾಂತಿ ಜೀವನ ನಡೆಸುತ್ತಿದ್ದಾರೆ. ಅವರಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಆ ಪೈಕಿ ಕೊನೆಯ ಮಗಳಾದ ನಾಗಶ್ರೀ ನಾಯ್ಕ ಅವರನ್ನು ಪೂಜಗೇರಿ ರಸ್ತೆಯ ಶಂಕರ ನಾರಾಯಣ ದೇಗುಲ ಬಳಿಯ ಸೂರಜ ನಾಯ್ಕ ಅವರಿಗೆ ಮದುವೆ ಮಾಡಿ ಕೊಡಲಾಗಿದೆ. ನಾಗಶ್ರೀ ನಾಯ್ಕ ಅವರಿಗೆ ತಮ್ಮ ತಂದೆ-ತಾಯಿ ಅವರ ಬ್ಯಾಂಕ್ ಖಾತೆ ವಿವರಗಳೆಲ್ಲವೂ ಗೊತ್ತಿದ್ದು, ಅವರ ಎಟಿಎಂ ಕಾರ್ಡ, ಮೊಬೈಲ್ ಹಾಗೂ ಇನ್ನಿತರ ಬ್ಯಾಂಕ್ ವಹೀವಾಟು ಬಳಸಿಕೊಂಡು ನಾಗಶ್ರೀ ಸೂರಜ್ ನಾಯ್ಕ, ಸೂರಜ ಅರವಿಂದ ನಾಯ್ಕ ಹಾಗೂ ಶೀಥಲ ಅರವಿಂದ ನಾಯ್ಕ ಸೇರಿ 1.18 ಕೋಟಿ ರೂ ಲಪಟಾಯಿಸಿದ್ದಾರೆ. 70 ವರ್ಷದ ಗುಲಾಬಿ ನಾಯ್ಕ ಹಾಗೂ 75 ವರ್ಷದ ಪಾಂಡುರAಗ ನಾಯ್ಕ ಅವರು ಕೋಟ್ಯಧೀಶರಾಗಿದ್ದರೂ ಅದೆಲ್ಲವನ್ನು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಪಾಸ್ಬುಕ್ ಮುದ್ರಣದ ನಂತರವೇ ಅವರ ಬ್ಯಾಂಕ್ ಖಾತೆ ಖಾಲಿಯಾಗಿರುವುದು ಗಮನಕ್ಕೆ ಬಂದಿದೆ.
ಗುಲಾಬಿ ನಾಯ್ಕ ಅವರು ತಮ್ಮ ದುಡಿಮೆಯ ಹಣದ ಜೊತೆ ಪಿಂಚಣಿ ಹಣವನ್ನು ಕೂಡಿಟ್ಟಿದ್ದರು. ನಿವೃತ್ತಿ ನಂತರದ ಹಣ ಹಾಗೂ ಪಿಂಚಣಿ ಹಣವನ್ನು ಅವರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನಲ್ಲಿ ಜಮಾ ಮಾಡಿದ್ದರು. ಜೊತೆಗೆ ಪಾಂಡುರoಗ ನಾಯ್ಕ ಹಾಗೂ ಗುಲಾಬಿ ನಾಯ್ಕ ಅವರು ಕೆನರಾ ಬ್ಯಾಂಕ್, ಪೋಸ್ಟ್ ಆಫೀಸ್ ಸೇರಿ ವಿವಿಧ ಕಡೆ ಬ್ಯಾಂಕ್ ಖಾತೆ ಹೊಂದಿದ್ದರು. 2022ರಲ್ಲಿ ಕೊನೆಯ ಮಗಳಾದ ನಾಗಶ್ರೀ ನಾಯ್ಕ ಅವರನ್ನು ಸೂರಜ ನಾಯ್ಕ ತೆಂಗಣಗೇರಿ ಅವರ ಜೊತೆ ಮದುವೆ ಮಾಡಿಕೊಟ್ಟಿದ್ದು, ಮನೆ ಹತ್ತಿರವೇ ವಾಸವಾಗಿದ್ದ ಆ ದಂಪತಿ ಆಗಾಗ ಭೇಟಿ ನೀಡಿ ಪ್ರೀತಿ-ವಿಶ್ವಾಸಗಳಿಸುವ ನಾಟಕ ಮಾಡಿದ್ದರು. ಅದಾದ ನಂತರ ವೃದ್ದಾಪ್ಯದ ಕಾರಣ ಪಾಂಡುರAಗ ನಾಯ್ಕ ದಂಪತಿಯನ್ನು ತಮ್ಮ ಮನೆಗೆ ಕರೆದೊಯ್ದು ಆರೈಕೆ ಮಾಡಿದ ಹಾಗೇ ನಟಿಸುತ್ತಿದ್ದರು. ಈ ನಡುವೆ ಶೀತಲ ನಾಯ್ಕ ಅವರ ಪ್ರಚೋದನೆಗೆ ಒಳಗಾದ ನಾಗಶ್ರೀ ನಾಯ್ಕ ಹಾಗೂ ಸೂರಜ ನಾಯ್ಕ ಮೊಬೈಲ್, ಎಟಿಎಂ ಬಳಸಿ ಪಾಂಡುರoಗ ನಾಯ್ಕ ಅವರ ಖಾತೆಯಿಂದ ಮೊದಲು 18 ಲಕ್ಷ ರೂ ಎಗರಿಸಿದರು. ಅದಾದ ನಂತರ ಅದೇ ರೀತಿ ಮುಂದುವರೆಸಿದ್ದು, ಒಮ್ಮೆ 79 ಲಕ್ಷ ರೂ, ಮತ್ತೆ 8.61 ಲಕ್ಷ ರೂ, ಅದಾದ ನಂತರ 6895ರೂ ಲಪಟಾಯಿಸಿದರು. ಮತ್ತೆ 13 ಲಕ್ಷ ರೂ ದೋಚಿದ ಆ ಮೂವರು ಅಂಚೆ ಇಲಾಖೆಯ ಖಾತೆಯಲ್ಲಿದ್ದ 1003ರೂಪಾಯಿಯನ್ನು ಸಹ ಬಿಡಲಿಲ್ಲ.
ಆ ವೃದ್ಧ ದಂಪತಿ ಬ್ಯಾಂಕ್ ಪಾಸ್ ಬುಕ್ ಮುದ್ರಣ ಮಾಡಿಸಿದಾಗ ಅಲ್ಲಿದ್ದ ಹಣವೆಲ್ಲವೂ ಖಾಲಿ ಆಗಿತ್ತು. ಈ ಬಗ್ಗೆ ವಿಚಾರಿಸಿದಾಗ ಮಗಳು ಹಾಗೂ ಅಳಿಯ ಸೇರಿ ಮೋಸ ಮಾಡಿರುವುದು ಅರಿವಿಗೆ ಬಂದಿತು. ಮೊದಲು ಎಲ್ಲಾ ಹಣ ಕೊಡುವುದಾಗಿ ಹೇಳಿದ್ದ ಮೂವರು ಆರೋಪಿತರು ನಂತರ ಮತ್ತೆ ಹಣ ಕೇಳಿದರೆ ಕೈ ಕಾಲು ಮುರಿಯುವುದಾಗಿ ಬೆದರಿಸಿದರು. ಅನ್ಯಾಯಕ್ಕೆ ಒಳಗಾದ ಗುಲಾಬಿ ನಾಯ್ಕ ಅವರು ಪೊಲೀಸರ ಮೊರೆ ಹೋಗಿದ್ದಾರೆ. `ಮಗಳು-ಅಳಿಯ ಹಾಗೂ ಅಳಿಯನ ಅಕ್ಕನಿಗೆ ಶಿಕ್ಷಿಸಿ. ತಮ್ಮ ಹಣ ಮರಳಿಸಿ’ ಎಂದು ಮನವಿ ಮಾಡಿದ್ದಾರೆ.