ನಿತ್ಯದ ದುಡಿಮೆಗಾಗಿ ಚಿಪ್ಪಿಕಲ್ಲು ಆರಿಸಲು ಸಮುದ್ರಕ್ಕೆ ಹೋಗಿದ್ದ ಅಂಕೋಲಾದ ಆನಂದು ನಾಯ್ಕ ಅವರು ಅಲೆಗಳ ಅಬ್ಬರಕ್ಕೆ ಸಿಲುಕಿದ್ದಾರೆ. ಅಲ್ಲಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಅವರು ಶವವಾಗಿದ್ದಾರೆ.
ಅಂಕೋಲಾ ಬಾವಿಕೇರಿ ಕಾನಬೀರವಾಡದಲ್ಲಿ ಆನಂದು ಚೆನ್ನಾ ನಾಯ್ಕ (51) ಅವರು ವಾಸವಾಗಿದ್ದರು. ಅಕ್ಟೊಬರ್ 20ರ ಮಧ್ಯಾಹ್ನ 3 ಗಂಟೆಗೆ ಅವರು ಸಮುದ್ರಕ್ಕೆ ಹೋಗಿದ್ದರು. ಕೈಚೀಲ ಹಾಗೂ ಹಲಗತ್ತಿಹಿಡಿದಿದ್ದ ಅವರು ಬೇಲೇಕೆರೆ ಸಮುದ್ರದ ಬಳಿ ಚಿಪ್ಪೆಕಲ್ಲು ಆರಿಸಿಕೊಂಡು ಬರುವುದಾಗಿ ಮನೆಯಲ್ಲಿ ಹೇಳಿದ್ದರು.
ಆದರೆ, ಸಂಜೆಯಾದರೂ ಅವರು ಮನೆಗೆ ಮರಳಲಿಲ್ಲ. ಮರುದಿನವೂ ಅವರ ಸುಳಿವು ಸಿಗಲಿಲ್ಲ. ಹೀಗಾಗಿ ಆನಂದು ನಾಯ್ಕ ಅವರ ಮಗ ವಿನಯ ನಾಯ್ಕ ಅವರು ಅಂಕೋಲಾ ಪೊಲೀಸರ ಮೊರೆ ಹೋದರು. ತಂದೆ ಕಾಣೆಯಾದ ಬಗ್ಗೆ ಅವರು ಪ್ರಕರಣ ದಾಖಲಿಸಿದ್ದು, ಪೊಲೀಸರು ಹುಡುಕಾಟ ಶುರು ಮಾಡಿದರು.
ಅಕ್ಟೊಬರ್ 21ರ ಸಂಜೆ ಸಮುದ್ರದಲ್ಲಿ ಶವವೊಂದು ಸಿಕ್ಕಿದ್ದು, ಅದನ್ನು ಸರಿಯಾಗಿ ಗಮನಿಸಿದಾಗ ಅದು ಆನಂದ ನಾಯ್ಕ ಅವರ ದೇಹ ಎಂದು ಗೊತ್ತಾಯಿತು. ಉದಯ ಚನ್ನಾ ನಾಯ್ಕ ಅವರು ಸಹೋದರನ ಶವ ಗುರುತಿಸಿದರು. ಕಾನೂನು ಪ್ರಕ್ರಿಯೆ ನಡೆಸಿ ಕುಟುಂಬದವರು ಶವಪಡೆದರು.