ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಮುಂದುವರೆದಿದೆ. ಮಳೆಗಾಲದ ಅವಧಿಯಲ್ಲಿಯೂ ರಾಜಾರೋಷವಾಗಿ ಮರಳುಗಾರಿಕೆ ನಡೆಸಲಾಗುತ್ತಿದೆ.
ಉತ್ತರ ಕನ್ನಡ ಜಿಲ್ಲೆಯ ನದಿಗಳಲ್ಲಿ ಮರಳು ತೆಗೆಯಲು ಪರವಾನಿಗೆ ಇಲ್ಲ. ಅದಾಗಿಯೂ, ವಿವಿಧ ನದಿಗಳಲ್ಲಿ ಮರಳು ತೆಗೆಯಲಾಗುತ್ತಿದೆ. ಜಲಚರಗಳಿಗೆ ಸಮಸ್ಯೆ ಆಗುವ ಕಾರಣ ಮಳೆ ಅವಧಿಯಲ್ಲಿ ಸಮುದ್ರದಲ್ಲಿನ ಮೀನುಗಾರಿಕೆ ನಿಷೇಧಿಸಲಾಗುತ್ತದೆ. ಆದರೆ, ನದಿಯಲ್ಲಿರುವ ಜಲಚರಗಳ ಬಗ್ಗೆ ಯಾರೂ ತಲೆಕೆಡಿಸಿಕೊಂಡಿಲ್ಲ. ಹೀಗಾಗಿ, ಅಪಾಯಕಾರಿ ಸನ್ನಿವೇಶದಲ್ಲಿಯೂ ನದಿಗಳಿಂದ ಮರಳು ತೆಗೆದು ಮಾರಾಟ ಮಾಡಲಾಗುತ್ತಿದೆ.
ಕಾರವಾರ ತಾಲೂಕಿನ ಸಿದ್ದರ ಗ್ರಾಮಪಂಚಾಯತ ವ್ಯಾಪ್ತಿಯ ಕಾಳಿ ನದಿಯಲ್ಲಿಯೂ ಅಕ್ರಮ ಮರಳುಗಾರಿಕೆ ಮುಂದುವರೆದಿದೆ. ಕಾಳಿ ನದಿಯಿಂದ ಅಕ್ರಮ ಮರಳುಗಾರಿಕೆ ನಡೆಸಿ, ಸಾಗಿಸುತ್ತಿದ್ದ ಟಿಪ್ಪರನ್ನು ಪೊಲೀಸರು ಜಪ್ತು ಮಾಡಿದ್ದಾರೆ. ಶುಕ್ರವಾರ ರಾತ್ರಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮರಳನ್ನು ವಶಕ್ಕೆಪಡೆದಿದ್ದಾರೆ. ಗಣೇಶ ಎಂಬಾತರ ಮೇಲೆ ಪೊಲೀಸರು ಕಾನೂನು ಕ್ರಮವನ್ನು ಜರುಗಿಸಿದ್ದಾರೆ. ಈ ಮರಳನ್ನು ಗೋವಾಗೆ ಸಾಗಾಟ ಮಾಡುತ್ತಿದ್ದ ಬಗ್ಗೆ ಸಾರ್ವಜನಿಕರು ದೂರಿದ್ದು, ಇನ್ನಷ್ಟು ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.