ಮನೆಯಲ್ಲಿದ್ದ ಮಗಳನ್ನು ಹೊರಗೆ ಕಳುಹಿಸಿದ ಆನಂದ ರಾವುತ್ ಅವರು ದೇವರ ಮನೆಗೆ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶಾಲೆಗೆ ಹೋಗಿದ್ದ ಮತ್ತೊಬ್ಬ ಮಗಳು ಮನೆಗೆ ಬಂದಾಗ ತಂದೆಯ ಶವ ಕಾಣಿಸಿದ್ದು, ಅವರು ಅಲ್ಲಿಯೇ ಕುಸಿದು ಬಿದ್ದಿದ್ದಾರೆ.
ಜೊಯಿಡಾದ ಜಗಲಪೇಟೆ ಜನತಾಪ್ಲಾಟಿನ ಆನಂದ ರಾವುತ್ (40) ಅವರು ವಾಸವಾಗಿದ್ದರು. ಅವರು ಅಪರ್ಣ ರಾವುತ್ ಅವರನ್ನು ವರಿಸಿದ್ದರು. ಮದುವೆ ಆಗುವ ಮುಂಚಿನಿoದಲೂ ಆನಂದ ರಾವುತ್ ಅವರಿಗೆ ಕೈ-ಕಾಲು ನಡುಗುವ ಕಾಯಿಲೆಯಿತ್ತು. ಅದಾಗಿಯೂ ಅವರು ಗೌಂಡಿ ಕೆಲಸ ಮಾಡಿ ಸಂಸಾರ ನಡೆಸುತ್ತಿದ್ದರು. ಕಟ್ಟಡ ಕೆಲಸಕ್ಕಾಗಿ ಅವರು ಕಳೆದ ವರ್ಷ ವಿದೇಶಕ್ಕೆ ಸಹ ಹೋಗಿದ್ದರು.
ಆದರೆ, ದುಬೈನಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾದ ಕಾರಣ ಒಂದೇ ವರ್ಷದಲ್ಲಿ ಆನಂದ ರಾವುತ್ ಅವರು ಮನೆಗೆ ಮರಳಿದ್ದರು. ಇಲ್ಲಿ ಒಂದು ದಿನ ಕೆಲಸಕ್ಕೆ ಹೋದರೆ ಎರಡು ದಿನ ವಿಶ್ರಾಂತಿಪಡೆದು ಜೀವನ ನಡೆಸುತ್ತಿದ್ದರು. ಈಚೆಗೆ ಖಾನಾಪುರಕ್ಕೆ ಹೋಗಿದ್ದ ಅವರು ಅಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಗಾಗಿದ್ದರು. ಕೆಲ ದಿನಗಳ ಕಾಲ ತಮ್ಮ ಊರಾದ ಶಿರೊಳ್ಳಿಯಲ್ಲಿಯೇ ವಾಸವಾಗಿದ್ದರು.
ಕಳೆದ 4 ದಿನದ ಹಿಂದೆ ಜೊಯಿಡಾದ ಜಗಲಪೇಟೆಗೆ ಆನಂದ ರಾವುತ್ ಅವರು ಮರಳಿ ಬಂದಿದ್ದರು. ನವೆಂಬರ್ 28ರಂದು ಪತ್ನಿ ಅಪರ್ಣ ರಾವುತ್ ಅವರು ಮಗಳನ್ನು ಶಾಲೆಗೆ ಬಿಡಲು ಹೋಗಿದ್ದರು. ಚಿಕ್ಕ ಮಗಳು ಮನೆಯಲ್ಲಿಯೇ ಇದ್ದು, ಆನಂದ ರಾವುತ್ ಅವರು ಆಕೆಯನ್ನು ಮನೆಯಿಂದ ಹೊರ ಕಳುಹಿಸಿದರು. ಅದಾದ ನಂತರ ದೇವರ ಕೋಣೆಗೆ ಹೋಗಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದರು. ಮನೆಗೆ ಮರಳಿದ ಅಪರ್ಣ ರಾವುತ್ ಹಾಗೂ ಮಕ್ಕಳು ಶವ ನೋಡಿ ಆಘಾತಕ್ಕೆ ಒಳಗಾದರು.