ಇನ್ನಿತರ ಶಾಲೆಗಳಿಗೆ ಮಾದರಿ ಆಗಬೇಕಿದ್ದ ಶಾಸಕರ ಮಾದರಿ ಶಾಲೆಯಲ್ಲಿನ ಮಕ್ಕಳಿಗೆ ಗುಣಮಟ್ಟದ ಊಟ ಸಿಗುತ್ತಿಲ್ಲ. ಶುಕ್ರವಾರ ಮಧ್ಯಾಹ್ನ ಈ ಶಾಲೆಯಲ್ಲಿ ಊಟ ಮಾಡಿದ ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ.
ಮುಂಡಗೋಡಿನ ಶಾಸಕರ ಮಾದರಿ ಶಾಲೆಯಲ್ಲಿ ಊಟ ಮಾಡಿದ ಮಕ್ಕಳಿಗೆ ಅನ್ನದ ಬಟ್ಟಲಿನಲ್ಲಿ ಇಲಿ ಹಿಕ್ಕಿ ಸಿಕ್ಕಿದೆ. ಅರಿವಿಲ್ಲದೇ ಅನ್ನದ ಜೊತೆ ಅದನ್ನು ಸೇವಿಸಿದ ಚಿಣ್ಣರು ಅಸ್ವಸ್ಥರಾಗಿದ್ದಾರೆ. ಕೆಲ ವಿದ್ಯಾರ್ಥಿನಿಯರು ವಾಂತಿ ಮಾಡಿಕೊಂಡಿದ್ದು, ಮುಖ್ಯ ಶಿಕ್ಷಕ ವಿನೋದ ನಾಯ್ಕ ಅವರು ಮಕ್ಕಳನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಈ ಶಾಲೆಯಲ್ಲಿ 400ರಷ್ಟು ಮಕ್ಕಳು ಓದುತ್ತಿದ್ದು, ಎಂದಿನAತೆ ಎಲ್ಲರೂ ಮಧ್ಯಾಹ್ನ ಬಿಸಿಯೂಟ ಸೇವಿಸಿದ್ದಾರೆ. ಕೆಲವರಿಗೆ ಆ ಊಟ ಅಜೀರ್ಣವಾಗಿದೆ. ಅದಾದ ನಂತರ ಕೆಲವರು ಹೊಟ್ಟೆನೋವಿನಿಂದ ಬಳಲಿದ್ದಾರೆ. ಕೆಲವರು ವಾಂತಿ ಮಾಡಿಕೊಂಡು ಅಸ್ವಸ್ಥರಾಗಿದ್ದಾರೆ. ಮಕ್ಕಳು ಮಾಡಿದ ಊಟ ಪರಿಶೀಲನೆ ಮಾಡಿದಾಗ ಸಾಂಬಾರಿನೊಳಗೆ ಇಲಿ ಹಿಕ್ಕಿ ತೇಲುತ್ತಿರುವುದು ಗೊತ್ತಾಗಿದೆ. ಆಹಾರದಲ್ಲಿನ ಅಶುಚಿತ್ವ ಮಕ್ಕಳ ಅನಾರೋಗ್ಯಕ್ಕೆ ಕಾರಣವಾಗಿದೆ.
ಸದ್ಯ 27 ಮಕ್ಕಳಿಗೆ ಚಿಕಿತ್ಸೆ ಕೊಡಲಾಗಿದೆ. ಮಕ್ಕಳೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಬಿಸಿಯೂಟ ಸಿಬ್ಬಂದಿಯ ವಿಚಾರಣೆ ನಡೆಯುತ್ತಿದೆ. ವೈದ್ಯಾಧಿಕಾರಿ ಡಾ ನರೇಂದ್ರ ಪವಾರ್, ತಹಶೀಲ್ದಾರ್ ಶಂಕರ ಗೌಡಿ, ತಾ ಪಂ ಮುಖ್ಯಾಧಿಕಾರಿ ಟಿ ವೈ ದಾಸನಕೊಪ್ಪ, ಸಿಪಿಐ ರಂಗನಾಥ ನೀಲಮ್ಮನವರ್, ಪ ಪಂ ಮುಖ್ಯಾಧಿಕಾರಿ ಸಂತೋಷಕುಮಾರ ಎಚ್ ಮೊದಲಾದವರು ಸ್ಥಳಕ್ಕೆ ದೌಡಾಯಿಸಿದ್ದಾರೆ.