ಬೆಂಗಳೂರಿನ ಎಂ ಎಸ್ ರಾಮಯ್ಯ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ವಿದ್ಯಾರ್ಥಿಗಳ ಕ್ರೀಡಾಕೂಟದಲ್ಲಿ ಭೂಮಿಕಾ ಹೆಗಡೆ ಅವರು ಭಾಗವಹಿಸಿದ್ದು, ಚೆಸ್ ವಿಭಾಗದಲ್ಲಿ ಅವರು ರಾಷ್ಟ್ರ ಮಟ್ಟಕ್ಕೆ ಆಯ್ಕೆ ಆಗಿದ್ದಾರೆ.
ಭೂಮಿಕಾ ಹೆಗಡೆ ಅವರು ಕುಮಟಾದ ಹೆಗಡೆಯ ನಾಗರಾಜ ಹೆಗಡೆ ಹಾಗೂ ರೇಣುಕಾ ಹೆಗಡೆ ದಂಪತಿಯ ಪುತ್ರಿ. ಕೆನರಾ ಎಕ್ಸಲೆನ್ಸ ಕಾಲೇಜು ಗೋರೆಯ ವಿದ್ಯಾರ್ಥಿನಿ. ಅವರು ಅಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದುತ್ತಿದ್ದಾರೆ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಉತ್ಸಾಹದಿಂದ ಭಾಗವಹಿಸುವ ಭೂಮಿಕಾ ಹೆಗಡೆ ಅವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಕಾಲೇಜಿನ ಕೀರ್ತಿಯನ್ನು ಉತ್ತುಂಗಕ್ಕೆ ಕರೆದೊಯ್ದಿದ್ದಾರೆ.
ಭೂಮಿಕಾ ಹೆಗಡೆ ಅವರ ಸಾಧನೆಯ ಬಗ್ಗೆ ಕೆನರಾ ಎಕ್ಸಲೆನ್ಸ ಕಾಲೇಜು ಗೋರೆಯ ಸಂಸ್ಥಾಪಕ ಅಧ್ಯಕ್ಷ ಡಾ ಜಿ.ಜಿ ಹೆಗಡೆ ಅವರು ಸಂತಸವ್ಯಕ್ತಪಡಿಸಿದರು. ಆಡಳಿತ ಮಂಡಳಿಯ ವಿಶ್ವಸ್ಥರಾದ ಡಿ ಎನ್ ಭಟ್ಟ, ಪ್ರಾಚಾರ್ಯ ನಾಗರಾಜ್ ಹೆಗಡೆ, ಆಡಳಿತಾಧಿಕಾರಿಗಳಾದ ಶಶಾಂಕ ಶಾಸ್ತ್ರಿ, ಕ್ರೀಡಾ ಸಂಚಾಲಕರಾದ ಗಣಪತಿ ಭಟ್ಟ ಹಾಗೂ ಬೋಧಕ-ಬೋಧಕೇತರ ಸಿಬ್ಬಂದಿ ಭೂಮಿಕಾ ಹೆಗಡೆ ಅವರನ್ನು ಅಭಿನಂದಿಸಿದರು. `ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿಯೂ ಅವರು ಗೆದ್ದು ಬರಲಿ’ ಎಂದು ಎಲ್ಲರೂ ಹಾರೈಸಿದರು.
