ಪೊಲೀಸ್ ಅಧಿಕಾರಿಗಳಿಗೆ ಫೋನ್ ಮಾಡಿದಾಗ ಅವರು ಮಾತಿಗೆ ಸಿಗದ ಕಾರಣ ಸಮಸ್ಯೆ ವಿವರಿಸಿ ಕುಮಟಾದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಪತ್ರ ಬರೆದಿದ್ದಾರೆ. ಜೊತೆಗೆ `ಫೋನಿನಲ್ಲಿ ಮಾತನಾಡಲು ಸಮಯ ನಿಗದಿಪಡಿಸಿ’ ಎಂದು ಸಹ ಅವರು ಮನವಿ ಮಾಡಿದ್ದಾರೆ.
ಕೆಲವು ಸಲ 112 ಸಹಾಯವಾಣಿಗೆ ಫೋನ್ ಮಾಡಿದಾಗ ಸ್ಪಂದನೆ ಸಿಗದ ಬಗ್ಗೆ ಕೇಂದ್ರದ ಅಧ್ಯಕ್ಷ ಆಗ್ನೇಲ್ ರೋಡಿಗ್ರಿಸ್ ವಿವರಿಸಿದ್ದಾರೆ. ಇದರೊಂದಿಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ತೆರಳಿದಾಗ ದೂರು ಸ್ವೀಕರಿಸಿದ ಬಗ್ಗೆ ಅವರು ದೂರಿದ್ದಾರೆ. `ಇಂಥ ವಿಷಯಗಳ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲು ಸರ್ಕಾರಿ ಸಂಖ್ಯೆಗೆ ಫೋನ್ ಮಾಡಿದರೂ ಕರೆ ಸ್ವೀಕರಿಸುತ್ತಿಲ್ಲ’ ಎಂದವರು ಹೇಳಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿಯವರಿಗೆ ಪತ್ರ ಬರೆದ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು `ಸಾರ್ವಜನಿಕರು ಯಾವ ಸಮಯದಲ್ಲಿ ಫೋನ್ ಮಾಡಬೇಕು?’ ಎಂದು ಪ್ರಕಟಣೆ ನೀಡುವ ಬಗ್ಗೆ ಮನವಿ ಮಾಡಿದ್ದಾರೆ. `ಯಾವಾಗ ಫೋನ್ ಮಾಡಿದರೂ ಅಧಿಕಾರಿಗಳು ಸಭೆಯಲ್ಲಿರುವುದಾಗಿ ಹೇಳುತ್ತಾರೆ. ಹೀಗಾಗಿ ಸಾರ್ವಜನಿಕರ ಜೊತೆ ಫೋನಿನಲ್ಲಿ ಮಾತನಾಡಲು ಸಮಯ ಕೊಡಬೇಕು’ ಎಂದವರು ಅರ್ಜಿಯಲ್ಲಿ ಬರೆದಿದ್ದಾರೆ. ಕುಮಟಾ ಪೊಲೀಸ್ ಠಾಣೆಗೆ ತೆರಳಿ ಈ ಪತ್ರ ನೀಡಿದ್ದಾರೆ.