ಗೃಹ ಉಪಯೋಗಿ ವಸ್ತುಗಳನ್ನು ಅರ್ದ ಬೆಲೆಯಲ್ಲಿ ನೀಡುವುದಾಗಿ ಘೋಷಿಸಿದ್ದ ಭಟ್ಕಳದ `ಗ್ಲೋಬಲ್ ಇಂಟರ್ನ್ಯಾಷನಲ್’ ಮಳಿಗೆ ಬಾಗಿಲು ಮುಚ್ಚಿದೆ. ವಿಶೇಷ ಆಫರ್ ಎಂದು ಜನರನ್ನು ನಂಬಿಸಿ ಮುಂಗಡ ಹಣಪಡೆದವ ಪರಾರಿಯಾಗಿದ್ದು, ಕಾಸು ಕೊಟ್ಟವರು ಅಂಗಡಿ ಮುಂದೆ ಜಮಾಯಿಸಿದ್ದಾರೆ.
Advertisement. Scroll to continue reading.
ಭಟ್ಕಳ ಪಟ್ಟಣದ ರಥಬೀದಿಯ ಯೂನಿಯನ್ ಬ್ಯಾಂಕ್ ಎದುರಿನ ಕಾಂಪ್ಲೆಕ್ಸಿನಲ್ಲಿ ಈಚೆಗೆ ‘ಗ್ಲೋಬಲ್ ಇಂಟರ್ನ್ಯಾಷನಲ್’ ಎಂಬ ಮಳಿಗೆ ಶುರುವಾಗಿತ್ತು. ತಮಿಳುನಾಡು ಮೂಲದ ಉದಯಕುಮಾರ್ ರೇಂಗರಾಜು ಎಂಬಾತರು ಇಲ್ಲಿ ಮಳಿಗೆ ತೆರೆದಿದ್ದು, ಆರು ಜನರನ್ನು ಕೆಲಸಕ್ಕೆ ನೇಮಿಸಿಕೊಂಡಿದ್ದರು. ಗೃಹ ಉಪಯೋಗಿ ವಸ್ತು ಪೂರೈಕೆಗಾಗಿ ಅನೇಕರಿಂದ ಮುಂಗಡ ಹಣ ಸ್ವೀಕರಿಸಿದ್ದರು. 25 ದಿನಗಳ ಅವಧಿಯಲ್ಲಿ ಅವರು ಲಕ್ಷಾಂತರ ರೂ ರಸೀದಿ ಹರಿದಿದ್ದರು.
ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ವಿವಿಧ ವಸ್ತು ಕೊಡುವುದಾಗಿ ಅವರು ನಂಬಿಸಿದ್ದರು. ಸಾಕಷ್ಟು ಜನ ಇಲ್ಲಿ ಆಗಮಿಸಿ ಮುಂಗಡ ಹಣ ನೀಡಿದ್ದರು. ಮೊದಲ ವಾರ ಟಿವಿ, ಪ್ರಿಜ್, ಎಸಿ ಸೇರಿ ಅನೇಕ ವಸ್ತುಗಳನ್ನು ಮಳಿಗೆಯವರು ಕಾಸು ಕೊಟ್ಟವರ ಮನೆಗೆ ತಲುಪಿಸಿದ್ದರು. ಇದರಿಂದ ಇನ್ನಷ್ಟು ಗ್ರಾಹಕರು ಬಂದು ಹಣ ಪಾವತಿ ಮಾಡಿದ್ದರು. ತಮಗೆ ಇಷ್ಟವಾದ ಸಾಮಗ್ರಿ ಬುಕ್ ಮಾಡಿ ಹೋಗಿದ್ದರು.
ಕೆಲವರು 1 ಲಕ್ಷ ರೂಪಾಯಿಗೂ ಅಧಿಕ ಮೊತ್ತದ ಹಣ ಪಾವತಿಸಿದ್ದರು. ಈ ಎಲ್ಲಾ ಹಣ ಸಂಗ್ರಹಿಸಿದ ಉದಯಕುಮಾರ್ ರೇಂಗರಾಜು ಊರು ಬಿಟ್ಟು ಪರಾರಿಯಾದರು. ಬುಧವಾರ ಬೆಳಿಗ್ಗೆ ಅಂಗಡಿ ಬಾಗಿಲು ಮುಚ್ಚಿರುವುದನ್ನು ಕಂಡು ಗ್ರಾಹಕರು ಬೆಚ್ಚಿ ಬಿದ್ದರು. ತಾವು ಕೊಟ್ಟ ಹಣ ಮರಳಿಸಬೇಕು ಎಂದು ಪಟ್ಟುಹಿಡಿದರು. ಜನರೇ ಮಳಿಗೆಯ ಒಳಗೆ ನುಗ್ಗಿ ಬಾಗಿಲು ಒಡೆಯಲು ಪ್ರಯತ್ನಿಸಿದ್ದು, ಪೊಲೀಸರು ಇದನ್ನು ತಡೆದರು. ಹಣ ಕಳೆದುಕೊಂಡವರು ದೂರು ನೀಡಿದರೆ ಕ್ರಮ ಜರುಗಿಸುವುದಾಗಿ ಪೊಲೀಸರು ಹೇಳಿದರು.