`ಅರಣ್ಯವಾಸಿಗಳ ಸಮಸ್ಯೆಗಳ ಬಗ್ಗೆ ಚಳಿಗಾಲದ ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಆಗ್ರಹಿಸಿ ಡಿ 6ರಂದು ಹೋರಾಟ ನಡೆಯಲಿದೆ’ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಅವರು ಹೇಳಿದ್ದಾರೆ.
Advertisement. Scroll to continue reading.
ಕಾರವಾರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು `ಮೂರು ತಲೆಮಾರಿನ ದಾಖಲೆ ಷರತ್ತು ಕಾನೂನುಬಾಹಿರ. ಸಾಂದರ್ಭಿಕ ದಾಖಲೆ ಅಡಿಯಲ್ಲಿ ಅರಣ್ಯ ಭೂಮಿ ಹಕ್ಕು ನೀಡುವುದೇ ಮುಖ್ಯ. ಈಗಿರುವ ಕಾನೂನು ಅಡಿಯಲ್ಲಿ ಈ ಹಿಂದೆ ಎಚ್ ಕೆ ಪಾಟೀಲ್ ಮತ್ತು ಆರ್ ವಿ ದೇಶಪಾಂಡೆಯವರು ಹಕ್ಕು ಪತ್ರ ನೀಡಿದ ಮಾನದಂಡದ ಅಡಿಯಲ್ಲಿ ಇನ್ನಿತರ ಅರಣ್ಯವಾಸಿಗಳಿಗೂ ಹಕ್ಕು ಪತ್ರ ನೀಡಬೇಕು’ ಎಂದು ಆಗ್ರಹಿಸಿದರು.
`ಅರಣ್ಯವಾಸಿಗಳ ಸಮಸ್ಯೆಗಳ ಕುರಿತು ಚಳಿಗಾಲ ಅಧಿವೇಶನದಲ್ಲಿ ಚರ್ಚಿಸಿ ನಿರ್ಣಯ ತೆಗೆದುಕೊಳ್ಳಬೇಕು. ಅರಣ್ಯ ಭೂಮಿ ಹಕ್ಕು ಹೋರಾಟಗಾರರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಬೇಕು’ ಎಂದು ಆಗ್ರಹಿಸಿದರು. `ಉತ್ತರ ಕನ್ನಡ ಜಿಲ್ಲೆಯಲ್ಲಿ 88000 ಕುಟುಂಬವು ಅರಣ್ಯ ಪ್ರದೇಶವನ್ನು ವಾಸ್ತವ್ಯ ಮತ್ತು ಸಾಗುವಳಿಗೆ ಅವಲಂಬಿತವಾಗಿದೆ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದಂತ ಅರ್ಜಿಗಳಲ್ಲಿ 73000 ಕುಟುಂಬಗಳ ಅರ್ಜಿ ತಿರಸ್ಕರಿಸಲ್ಪಟ್ಟಿದೆ. ಜಿಲ್ಲೆಯಲ್ಲಿ ಕೇವಲ 2,856 ಅರ್ಜಿಗಳಿಗೆ ಮಾತ್ರ ಮಾನ್ಯತೆ ದೊರಕಿದೆ’ ಎಂಬ ಮಾಹಿತಿ ನೀಡಿದರು.