ಗಣೇಶ ಗುಡಿ ಭಾಗದಲ್ಲಿ ಅಪರೂಪದ ಪ್ರಾಣಿಯ ಬಗ್ಗೆ ಅರಣ್ಯಾಧಿಕಾರಿಗಳು ಮಾತನಾಡಿದ್ದಾರೆ. ಗಣೇಶಗುಡಿಯ ಬಳಿ ಹೈನಾ (ಕತ್ತೆ ಕಿರುಬ) ಓಡಾಡಿರುವುದನ್ನು ಅರಣ್ಯಾಧಿಕಾರಿಗಳು ದೃಢಪಡಿಸಿದ್ದು `ವನ್ಯಜೀವಿ ಆಕ್ರಮಣದ ಆತಂಕ ಬೇಡ’ ಎಂದು ಧೈರ್ಯ ಹೇಳಿದ್ದಾರೆ.
`ಕುಳಗಿ ಹಾಗೂ ಗಣೇಶಗುಡಿ ಭಾಗದಲ್ಲಿ ಅಪರೂಪದ ಪ್ರಾಣಿಯಾದ ಕತ್ತೆಕಿರುಬ ಕಾಣಿಸಿಕೊಂಡಿದೆ. ವನ್ಯಜೀವಿ ಇಲಾಖೆ ಈ ಪ್ರಾಣಿಯನ್ನು ತಂದು ಬಿಟ್ಟಿರುವುದಲ್ಲ’ ಎಂದು ಕಾಳಿ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕ ನಿಲೇಶ ಶಿಂದೆ ಅವರು ಹೇಳಿದ್ದಾರೆ.
`ದಾಂಡೇಲಿ ತಾಲೂಕಿನ ಕುಳಗಿ ಮತ್ತು ಜೋಯಿಡಾ ತಾಲೂಕಿನ ಗಣೇಶಗುಡಿ ಪ್ರದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಕತ್ತೆ ಕಿರುಬ ಪ್ರಾಣಿ ಕಾಣಿಸಿಕೊಳ್ಳುತ್ತಿದೆ. ಈ ಜೀವಿಯನ್ನು ವನ್ಯಜೀವಿ ಇಲಾಖೆಯವರೇ ತಂದು ಬಿಟ್ಟಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಚರ್ಚೆಯಲ್ಲಿದೆ. ಆದರೆ, ಅದು ಸತ್ಯವಲ್ಲ’ ಎಂದವರು ಸ್ಪಷ್ಟಪಡಿಸಿದರು.
`ಈ ಪ್ರಾಣಿ ಮಾನವನ ಮೇಲೆ ದಾಳಿ ಮಾಡುವುದಿಲ್ಲ. ಪರಿಸರ ಸಮತೋಲನವನ್ನು ಕಾಪಾಡುವಲ್ಲಿ ಕತ್ತೆ ಕಿರುಬದ ಪಾತ್ರ ದೊಡ್ಡದಾಗಿದ್ದು, ನೆರೆ ಜಿಲ್ಲೆಯ ಕಾಡಿನಿಂದ ಇಲ್ಲಿಗೆ ಬಂದಿರುವುದು ದೃಢವಾಗಿದೆ. ಆ ಜೀವಿಯ ಬಗ್ಗೆ ನಿಗಾವಹಿಸಲಾಗಿದೆ. ಮತ್ತೆ ಎಲ್ಲಾದರೂ ಈ ಜೀವಿ ಕಾಣಿಸಿದರೆ ಅರಣ್ಯ ಇಲಾಖೆಗೆ ಮಾಹಿತಿ ಕೊಡಿ’ ಎಂದವರು ಮನವಿ ಮಾಡಿದ್ದಾರೆ. `ಈ ಪ್ರಾಣಿಯ ಜೀವಕ್ಕೆ ಯಾರೂ ಕೂಡ ತೊಂದರೆ ಕೊಡಬೇಡಿ. ವನ್ಯಜೀವಿ ರಕ್ಷಣೆಗೆ ಕೈ ಜೋಡಿಸಿ’ ಎಂದವರು ಕರೆ ನೀಡಿದ್ದಾರೆ.