`ಮಾನವ ಹಕ್ಕು’ ಎಂಬ ಹೆಸರು ಹೋಲುವ ರೀತಿ ಕೆಲವರು ವಿವಿಧ ಸಂಘ-ಸoಸ್ಥೆ ರಚಿಸಿಕೊಂಡಿದನ್ನು ಮಾನವ ಹಕ್ಕು ಆಯೋಗ ಗಂಭೀರವಾಗಿ ಪರಿಗಣಿಸಿದೆ. `ಮಾನವ ಹಕ್ಕುಗಳ ಆಯೋಗ’, `ಪರಿಷತ್ತು’, `ಹೋರಾಟ ಸಮಿತಿ’ ಎಂಬ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವವರನ್ನು ರಾಜ್ಯ ಮಾನವ ಹಕ್ಕು ಆಯೋಗ ಗುರುತಿಸಲು ಮುಂದಾಗಿದೆ.
ಮಾನವ ಹಕ್ಕು ಆಯೋಗ ಎಂಬ ಹೆಸರಿಗೆ ಸಮೀಪವಿರುವ ಹೆಸರಿನ ಸಂಘಟನೆಯವರು ವಿವಿಧ ಕಡೆ ತೆರಳಿ ವಸೂಲಿ ನಡೆಸುತ್ತಿರುವ ಆತಂಕದ ವಿಚಾರವನ್ನು ಮಾನವ ಹಕ್ಕು ಆಯೋಗದ ಸದಸ್ಯ ಎಸ್ ಕೆ ವಂಟಿಗೋಡಿ ಅವರೇ ಬಹಿರಂಗಪಡಿಸಿದ್ದಾರೆ. `ಮಾನವ ಹಕ್ಕು ಆಯೋಗ ಅಥವಾ ಅದೇ ಅರ್ಥ ಕೊಡುವ ಇನ್ಯಾವುದೇ ಹೆಸರಿನ ಸಂಸ್ಥೆಯವರು ವಸೂಲಿಗೆ ಬಂದರೆ ನಮಗೆ ದೂರು ಕೊಡಿ. ಅಂಥವರನ್ನು ವಿಚಾರಣೆಗೆ ಒಳಪಡಿಸಿ ಆ ಸಂಸ್ಥೆಯ ನೋಂದಣಿಯನ್ನು ರದ್ಧು ಮಾಡಲು ಶಿಫಾರಸ್ಸು ಮಾಡುತ್ತೇವೆ’ ಎಂದು ಎಸ್ ಕೆ ವಂಟಿಗೋಡಿ ಅವರು ಜನರಲ್ಲಿ ಮನವಿ ಮಾಡಿದ್ದಾರೆ. ಶುಕ್ರವಾರ ಶಿರಸಿಗೆ ಬಂದಿದ್ದ ಅವರು ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ್ದು, ಮುಖ್ಯವಾಗಿ `ಮಾನವ ಹಕ್ಕು’ ಪದದ ದುರ್ಬಳಕೆಯ ವಿಚಾರ ಮಾತನಾಡಿದರು.
`ರಾಜ್ಯ ಮಾನವ ಹಕ್ಕುಗಳ ಆಯೋಗದ ಹೆಸರನ್ನು ಹೋಲುವ ಸಂಘ ಸಂಸ್ಥೆಗಳ ನೋಂದಣಿಯನ್ನು ರದ್ದುಪಡಿಸಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ. ಇನ್ನು ಮುಂದೆ ಅಂತಹ ಯಾವುದೇ ಸಂಸ್ಥೆಗಳಿಗೆ ನೋಂದಣಿ ನೀಡದಂತೆ ತಿಳಿಸಲಾಗಿದ್ದು, ಮಾನವ ಹಕ್ಕು ಹೆಸರಿನ ಬೆದರಿಕೆಗಳಿಗೆ ಕಡಿವಾಣ ಹಾಕುವುದೇ ನಮ್ಮ ಗುರಿ’ ಎಂದವರು ವಿವರಿಸಿದರು. `ಸಂಘಟನೆಗಳು ಮಾನವ ಹಕ್ಕುಗಳ ಹೆಸರಿನೊಂದಿಗೆ ಇತರೆ ಹೆಸರುಗಳನ್ನು ಸೇರಿಸಿ ನೋಂದಣಿ ಮಾಡಿಸಿಕೊಳ್ಳುವುದು ಮತ್ತು ವಿಸಿಟಿಂಗ್ ಕಾರ್ಡ್ಗಳನ್ನು ಬಳಸಿ ಅಧಿಕಾರಿಗಳ ಮೇಲೆ ಪ್ರಭಾವ ಬೀರುವುದು ಸರಿಯಲ್ಲ. ಯಾವುದೇ ವ್ಯಕ್ತಿ ಆಯೋಗದ ಹೆಸರಿನಲ್ಲಿ ಸಂಘ, ಸಂಸ್ಥೆ ಅಥವಾ ಪರಿಷತ್ಗಳನ್ನು ಸ್ಥಾಪಿಸುವಂತಿಲ್ಲ. ತಮ್ಮ ಹಕ್ಕು ಉಲ್ಲಂಘನೆಯಾದಲ್ಲಿ ನೇರವಾಗಿ ಆಯೋಗಕ್ಕೆ ದೂರು ನೀಡಬಹುದೇ ಹೊರತು, ಹೆಸರನ್ನು ದುರ್ಬಳಕೆ ಮಾಡುವುದು ಸರಿಯಲ್ಲ’ ಎಂದವರು ಸಭೆಯಲ್ಲಿ ಹೇಳಿದರು.
`ವಿವಿಧ ಇಲಾಖೆ ಅಧಿಕಾರಿಗಳು ಮಾನವ ಹಕ್ಕುಗಳು ಉಲ್ಲಂಘನೆಯಾಗದoತೆ ಕಾರ್ಯನಿರ್ವಹಿಸಬೇಕು. ಸಾರ್ವಜನಿಕರು ಕಚೇರಿಗಳಿಗೆ ಬಂದಾಗ ಅವರ ಅಹವಾಲುಗಳನ್ನು ಸೌಜನ್ಯದಿಂದ ಸ್ವೀಕರಿಸಿ, ಅವರ ನೋವು-ನಲಿವುಗಳಿಗೆ ಸ್ಪಂದಿಸಬೇಕು. ಅರ್ಹತೆ ಇದ್ದರೂ ಸೌಲಭ್ಯಗಳನ್ನು ನೀಡದಿದ್ದರೆ ಅದು ಸಹ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ’ ಎಂದು ವಿವರಿಸಿದರು. `ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲು ಯಾರಿಗೂ ಸಾಧ್ಯವಿಲ್ಲ’ ಎಂದರು. ಡಿವೈಎಸ್ಪಿ ಗೀತಾ ಪಾಟೀಲ, ತಹಶೀಲ್ದಾರ ಪಟ್ಟರಾಜ ಗೌಡ, ಎಂ ಆರ್ ಕುಲಕರ್ಣಿ, ತಾಲ್ಲೂಕು ಪಂಚಾಯಿತಿ ಇಒ ಚನ್ನಬಸಪ್ಪ ಹಾವಣಗಿ, ಪೌರಾಯುಕ್ತ ಪ್ರಕಾಶ ಚನ್ನಪ್ಪನವರ್ ಸಭೆಯಲ್ಲಿದ್ದರು.