ಬೈಕ್ ಸವಾರರಿಗೆ ಹೆಲ್ಮೆಟ್ ಕಡ್ಡಾಯದ ಬಗ್ಗೆ ಪೊಲೀಸರು ಜಾಗೃತಿ ಮೂಡಿಸಿದ್ದು, ಅದರಿಂದ ಪ್ರೇರೇಪಿತರಾದ ಗೋಕರ್ಣದ ಶ್ರೀಧರ ಶೆಟ್ಟಿ ಅವರು ಸೈಕಲ್ ಸವಾರಿ ನಡೆಸುವಾಗಲೂ ಹೆಲ್ಮೆಟ್ ಧರಿಸುತ್ತಿದ್ದಾರೆ!
ಗೋಕರ್ಣದ ಗಂಜಿಗದ್ದೆ ಬಳಿಯ ಚಕ್ರಮನೆ ಓಣಿಯ ಶ್ರೀಧರ ಶೆಟ್ಟಿ ಅವರು ರಥಬೀದಿಯಲ್ಲಿ ಸದ್ಗುರು ಹೊಟೇಲ್ ನಡೆಸುತ್ತಾರೆ. ಮೊದಲಿನಿಂದಲೂ ಸೈಕಲ್ ಸವಾರಿ ಎಂದರೆ ಅವರಿಗೆ ಅಚ್ಚುಮೆಚ್ಚು. ತುರ್ತು ಕಾರ್ಯದ ಓಡಾಟಕ್ಕೆ ಮಾತ್ರ ಬೈಕ್ ಬಳಸುವ ಅವರು ನಿತ್ಯದ ಓಡಾಟಕ್ಕೆ ಸೈಕಲ್ ಓಡಿಸುವುದೇ ಹೆಚ್ಚು. ಬೈಕ್ ಓಡಿಸುವಾಗ ಬೇಕು ಎಂದು ಖರೀದಿಸಿದ ಹೆಲ್ಮೆಟ್’ನ್ನು ಅವರು ಇದೀಗ ಸೈಕಲ್ ಓಡಿಸುವಾಗಲೂ ಬಳಸುತ್ತಿದ್ದಾರೆ. ಸೈಕಲ್ ಓಡಿಸುವಾಗ ಹೆಲ್ಮೆಟ್ ಧರಿಸಿದ ವ್ಯಕ್ತಿಯನ್ನು ಗೋಕರ್ಣಕ್ಕೆ ಬರುವ ಜನ ಅಚ್ಚರಿಯಿಂದ ನೋಡುತ್ತಿದ್ದಾರೆ!
ಪರಿಸರ ಸ್ನೇಹಿ ಸೈಕಲ್ ಬಳಸುವಂತೆ ಜನರಲ್ಲಿ ಅರಿವು ಮೂಡಿಸುವುದರ ಜೊತೆ `ಜೀವ ರಕ್ಷಣೆಗೆ ಹೆಲ್ಮೆಟ್ ಅಗತ್ಯ’ ಎಂಬುದನ್ನು ಸಾರುವುದಕ್ಕಾಗಿ ಶ್ರೀಧರ ಶೇಟ್ ಅವರು ಈ ಕೆಲಸ ಮಾಡುತ್ತಿದ್ದಾರೆ. ಶ್ರೀಧರ ಶೇಟ್ ಅವರು ಹೆಲ್ಮೆಟ್ ಬಳಸಿ ಸೈಕಲ್ ಓಡಿಸುವ ವಿಡಿಯೋ ವಾಟ್ಸಪ್ ಗುಂಪುಗಳಲ್ಲಿಯೂ ಪ್ರಸಿದ್ಧಿಪಡೆದಿದೆ.`ಹೊಂಡ ಬಿದ್ದ ರಸ್ತೆಯಲ್ಲಿ ಸಂಚರಿಸುವಾಗ ರಕ್ಷಣೆಗಾಗಿ ಸೈಕಲ್ ಸವಾರರು ಹೆಲ್ಮೆಟ್ ಧರಿಸುವುದು ಅನಿವಾರ್ಯ’ ಎಂದು ಅನೇಕರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಸೈಕಲ್ ಶೆಟ್ಟಿ ಅವರ ಈ ಸಾಹಸ ಜನರ ಚಚೆಯ ವಿಷಯವಾಗಿದೆ.