ಭಟ್ಕಳದ ಶಕಿಲಾ ಶಾಯಿನ್ ಹಾಗೂ ಸಯ್ಯದ್ ಜಮಾಲುದ್ಧಿನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ. ಹೀಗಾಗಿ `ತಾನು ನೀಡಿದ ಹಣ ಕೊಡು’ ಎಂದು ಶಕಿಲಾ ಶಾಯಿನ್ ಅವರು ಪತಿಗೆ ಕೇಳಿಕೊಂಡಿದ್ದು, ಹಣ ಮರಳಿಸಬೇಕಾದ ಸಯ್ಯದ್ ಜಮಾಲುದ್ಧಿನ್ ಪತ್ನಿ ಮೇಲೆ ಕೈ ಮಾಡಿದ್ದಾರೆ.
ಭಟ್ಕಳದ ಶಕಿಲಾ ಶಾಯಿನ್ ಹಾಗೂ ಅದೇ ಊರಿನ ಸಯ್ಯದ್ ಜಮಾಲುದ್ಧಿನ್ 2022ರಲ್ಲಿ ಪರಿಚಿತರಾದರು. ಅದಾದ ನಂತರ ಅವರಿಬ್ಬರು ಪರಸ್ಪರ ಒಪ್ಪಿ ವಿವಾಹವಾದರು. ಸಂಪ್ರದಾಯದ ಪ್ರಕಾರ ಅದ್ಧೂರಿಯಾಗಿ ಅವರ ಮದುವೆ ನಡೆಯಿತು. ಆದರೆ, ಕಾಲಕ್ರಮೇಣ ಅವರಿಬ್ಬರ ನಡುವೆ ಬಿನ್ನಾಭಿಪ್ರಾಯ ಮೂಡಿತು. ಹೀಗಾಗಿ ಅವರ ಸಂಬoಧ ಮುರಿದು ಬಿದ್ದಿತು. ಸದ್ಯ ಅವರಿಬ್ಬರ ನಡುವೆ ವಿಚ್ಚೇಧನದ ಮಾತುಕಥೆ ನಡೆಯುತ್ತಿದೆ.
ಬಿನ್ನಾಭಿಪ್ರಾಯದ ನಂತರ ಶಕಿಲಾ ಶಾಯಿನ್ ಅವರು ತಮ್ಮ ತವರು ಮನೆಯಲ್ಲಿ ಉಳಿದಿದ್ದರು. ಮದುವೆ ಆದ ಹೊಸತಿನಲ್ಲಿ ಶಕಿಲಾ ಶಾಯಿನ್ ಅವರು ಪತಿ ಸಯ್ಯದ್ ಜಮಾಲುದ್ಧಿನ್ ಅವರಿಗೆ 1.10 ಲಕ್ಷ ರೂ ಹಣ ಕೊಟ್ಟಿದ್ದರು. ಮದುವೆ ಮುರಿದ ಕಾರಣ ಆ ಹಣ ಮರಳಿಸುವಂತೆ ಶಕಿಲಾ ಶಾಯಿನ್ ಪತಿಗೆ ಗಂಟು ಬಿದ್ದಿದ್ದರು. ಆದರೆ, ಸಯ್ಯದ್ ಜಮಾಲುದ್ಧಿನ್ ಮಾತ್ರ ಆ ಹಣ ಕೊಡಲು ಒಪ್ಪಿರಲಿಲ್ಲ. ಶಕಿಲಾ ಶಾಯಿನ್ ಅವರು ಹಣ ಕೇಳುವುದನ್ನು ಬಿಟ್ಟಿರಲಿಲ್ಲ.
ನವೆಂಬರ್ 5ರಂದು ಶಕಿಲಾ ಶಾಯಿನ್ ಅವರು ಪತಿ ಸಯ್ಯದ್ ಜಮಾಲುದ್ಧಿನ್ ಅವರ ಮನೆಗೆ ಹೋಗಿ ಗಲಾಟೆ ಮಾಡಿದರು. `ನನ್ನ ಹಣ ನನಗೆ ಮರಳಿಸು’ ಎಂದು ದೊಡ್ಡದಾಗಿ ಕೂಗಿದರು. ಇದರಿಂದ ಸಿಟ್ಟಾದ ಸಯ್ಯದ್ ಜಮಾಲುದ್ಧಿನ್ ಶಕಿಲಾ ಶಾಯಿನ್ ಅವರಿಗೆ ಮೊದಲು ಕೈಯಿಂದ ಹೊಡೆದರು. ನಂತರ ಅವರನ್ನು ನೆಲಕ್ಕೆ ಬೀಳಿಸಿ ಕಾಲಿನಿಂದ ಒದ್ದರು. ಅಲ್ಲಿ ಬಿದ್ದಿದ್ದ ಕಲ್ಲಿನಿಂದ ಶಕಿಲಾ ಶಾಯಿನ್ ಅವರ ತಲೆಗೆ ಹೊಡೆದು ಗಾಯಗೊಳಿಸಿದರು.