ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸಿದ್ದಾಪುರದ ಕಾನಸೂರಿನ ಗೆಳೆಯರ ಬಳಗದವರು ಸನ್ಮಾನಿಸಿದ್ದಾರೆ. ಸಾವಿರಾರು ಜನರಿಗೆ ನ್ಯಾಯ ಕೊಡಿಸಿದ ಸರ್ಕಾರಿ ಅಭಿಯೋಜಕ ರಾಜೇಶ ಮಳಗೀಕರ, ಸಹಕಾರಿ ಕ್ಷೇತ್ರದ ಮೂಲಕ ಜನರಿಗೆ ಆರ್ಥಿಕ ಸಹಕಾರ ನೀಡುತ್ತಿರುವ ವಿನಾಯಕ ಶೆಟ್ಟಿ ಹಾಗೂ ಧಾರವಾಡ ಹಾಲು ಒಕ್ಕೂಟದ ಪ್ರಭಾರಿ ಅಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಪ್ರೀತಿಯಿಂದ ಈ ಸನ್ಮಾನ ಸ್ವೀಕರಿಸಿದ್ದಾರೆ.
Advertisement. Scroll to continue reading.
ಕಾನಸೂರಿನ ಸರ್ಕಾರಿ ಶಾಲೆಯಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನಿಸಲಾಗಿದೆ. ಉದ್ಯಮಿ ಆರ್ ಜಿ ಶೇಟ್ ಅವರು ಸನ್ಮಾನಿಸಿ ಸಾಧಕರನ್ನು ಅಭಿನಂದಿಸಿದ್ದಾರೆ. ಅನಂತಮೂರ್ತಿ ಹೆಗಡೆ ಚ್ಯಾರಿಟೇಬಲ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಅವರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಸಂಘಟಕರ ಬಗ್ಗೆ ಅವರು ಮೆಚ್ಚುಗೆಯ ಮಾತನಾಡಿದರು.
`ನ್ಯಾಯವಾಗಿದ್ದವರೆ ಕಾನೂನು ಸದಾ ಬೆಂಬಲಿಸುತ್ತದೆ. ನ್ಯಾಯಪರವಾಗಿದ್ದವರಿಗೆ ಅನ್ಯಾಯವಾಗದಂತೆ ಸರ್ಕಾರಿ ಅಭಿಯೋಜಕ ರಾಜೇಶ ಮಳಗೀಕರ ಅವರು ನಿರಂತರವಾಗಿ ಶ್ರಮಿಸುತ್ತಿದ್ದಾರೆ’ ಎಂದು ಗಣ್ಯರು ಹೇಳಿದರು. `ಕೆಡಿಸಿಸಿ ಬ್ಯಾಂಕಿನ ಅಧಿಕಾರಿಯಾಗಿದ್ದ ವಸಂತ ಶೆಟ್ಟಿ ಅವರು ಬಡ ಜನರ ಆರ್ಥಿಕ ಸಮಸ್ಯೆಗೆ ಪರಿಹಾರ ಒದಗಿಸಲು ಸಾಕಷ್ಟು ಶ್ರಮಿಸಿದ್ದರು. ಅವರ ಪ್ರಯತ್ನದ ಫಲವಾಗಿ ಶ್ರೀ ಭೂತೇಶ್ವರ ಪತ್ತಿನ ಸಹಕಾರಿ ಸಂಘ ಮುನ್ನಡೆಯುತ್ತಿದೆ’ ಎಂದ ಗಣ್ಯರು ಸಂಘದ ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಶೇಟ್ ಅವರ ಕೆಲಸವನ್ನು ಶ್ಲಾಘಿಸಿದರು. `ನಾವು ನಂಬಿದ ಗೋ ಮಾತೆ ಎಂದಿಗೂ ನಮ್ಮನ್ನು ಕೈ ಬಿಡುವುದಿಲ್ಲ. ಕೆಲಸದಲ್ಲಿನ ಶೃದ್ಧೆಯ ಪರಿಣಾಮ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅವರು ಧಾರವಾಡ ಹಾಲು ಒಕ್ಕೂಟ ಪ್ರವೇಶಿಸಿದ್ದು, ಎಲ್ಲರಿಗೂ ಹೆಮ್ಮೆಯ ವಿಚಾರ’ ಎಂದು ಅಲ್ಲಿ ಭಾಗವಹಿಸಿದವರು ಹೇಳಿದರು.
ಕಾನಸೂರು ಗ್ರಾಪಂ ಅಧ್ಯಕ್ಷೆ ಅನಿತಾ ನಾಯ್ಕ, ಉಪಾಧ್ಯಕ್ಷೆ ಸವಿತಾ ಕಾನಡೆ, ಸದಸ್ಯರಾದ ಶಶಿಕಾಂತ ನಾಮಧಾರಿ, ಮನೋಜ ಶಾನಭಾಗ, ಶಶಿಪ್ರಭಾ ಹೆಗಡೆ, ಎಸ್ಡಿಎಂಸಿ ಅಧ್ಯಕ್ಷೆ ಭಾರತಿ ನಾಯ್ಕ, ಸಂಘಟಕ ರಾಜು ಕಾನಸೂರು, ಶಿಕ್ಷಕ ಗುರುರಾಜ ನಾಯ್ಕ, ದಯಾನಂದ ಇತರರು ವಿವಿಧ ಜವಾಬ್ದಾರಿ ನಿಭಾಯಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಿರಸಿ ಆರ್ಕೆಸ್ಟ್ರಾದ ದಿವ್ಯಾ ಹೆಗಡೆ ತಂಡವದವರಿAದ ನಡೆದ ರಸಮಂಜರಿ ಹಾಗೂ ವಿದ್ಯಾರ್ಥಿಗಳು ನಡೆಸಿದ ಕಾರ್ಯಕ್ರಮ ಗಮನಸೆಳೆಯಿತು.