ಕಾರವಾರ ಜೈಲಿನಲ್ಲಿರುವ ಮೊಹಮದ್ ನೌಫಲ್ ಅಬ್ದುಲ್ ಲತೀಫ್ ಅವರು ಕಾರಾಗೃಹದ ಒಳಗೆ ರಾಜಾರೋಷವಾಗಿ ಮೊಬೈಲ್ ಬಳಕೆ ಮಾಡಿದ್ದಾರೆ. ಅವರ ಪಕ್ಕದ ವಾರ್ಡಿನಲ್ಲಿರುವ ಕೈದಿಗಳು ಸಹ ಬೀಡಿ-ಸೊಪ್ಪಿನಪುಡಿ ಬಳಸಿದ್ದಾರೆ. ಹೊತ್ತಿಗೆ ಸರಿಯಾಗಿ ಊಟ, ನೆಮ್ಮದಿಯ ನಿದ್ದೆ, ಅಗತ್ಯವಿದ್ದಾಗ ಆಸ್ಪತ್ರೆ ನೆಪದಲ್ಲಿ ಪ್ರವಾಸ ಜೊತೆಗೆ ಮೊಬೈಲು-ಹೊಗೆ ಸೊಪ್ಪು ಎನ್ನುತ್ತ ಇಲ್ಲಿನ ಕೈದಿಗಳು ಐಷಾರಾಮಿ ಜೀವನ ನಡೆಸಿದ್ದಾರೆ. ಹೀಗಾಗಿ ಸುಧಾರಣಾ ತಾಣವಾಗಬೇಕಿದ್ದ ಕಾರವಾರ ಜೈಲು ಮನರಂಜನಾ ಕೇಂದ್ರವಾಗಿ ಬದಲಾದ ಅನುಮಾನ ಕಾಡುತ್ತಿದೆ.
ಕಾರಾಗೃಹದ ಒಳಗೆ ಮೊಬೈಲ್ ಬಳಕೆ ನಿಷೇಧಿಸಿದೆ. ಅದರೊಂದಿಗೆ ಬೀಡಿ, ಸಿಗರೇಟು, ಗಾಂಜಾ ಮೊದಲಾದ ವಸ್ತುಗಳನ್ನು ಜೈಲಿನ ಒಳಗೆ ಬಿಡುವ ಹಾಗಿಲ್ಲ. ಅದಕ್ಕಾಗಿಯೇ ಜೈಲಿನ ಪ್ರವೇಶ ದ್ವಾರದಲ್ಲಿ ಭದ್ರತಾ ಸಿಬ್ಬಂದಿ ಪ್ರತಿಯೊಬ್ಬರನ್ನು ತಪಾಸಣೆಗೆ ಒಳಪಡಿಸುತ್ತಾರೆ. ಮೊಬೈಲುಗಳನ್ನು ಅಲ್ಲಿ ವಶಕ್ಕೆಪಡೆದು, ನಂತರ ಮರಳಿಸುತ್ತಾರೆ. ಕೈದಿಗಳನ್ನು ಭೇಟಿ ಮಾಡಲು ಬರುವವರಿಗೂ ಇದೇ ನಿಯಮ ಅನ್ವಯ. ಅದಾಗಿಯೂ ಕಾರವಾರ ಜೈಲಿನಲ್ಲಿ ನಿಷೇಧಿತ ಮೊಬೈಲ್, ಬೆಂಕಿ ಪೊಟ್ಟಣ, ಒಣಗಿದ ಸೊಪ್ಪಿನ ಪುಡಿಗಳು ಕಾಣಿಸಿವೆ. ಬಿಗಿ ಭದ್ರತೆಯ ನಡುವೆಯೂ ನಿಷೇಧಿತ ಸಾಮಗ್ರಿಗಳು ಜೈಲಿನ ಒಳಗೆ ಹೇಗೆ ಹೋದವು? ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ.
ಈಚೆಗೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿನ ಕೈದಿಗಳು ಮೊಬೈಲ್ ಫೋನ್ ಬಳಸುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಅದಾದ ನಂತರ ಮೈಸೂರಿನ ಜೈಲಿನಲ್ಲಿಯೂ ಕೈದಿಗಳು ವಿಶೇಷ ಸೌಲಭ್ಯಗಳನ್ನು ಸ್ವೀಕರಿಸುತ್ತಿರುವುದು ಬೆಳಕಿಗೆ ಬಂದಿತ್ತು. ಇದೀಗ ಕಾರವಾರ ಕಾರಾಗೃಹದಲ್ಲಿರುವ ಕೆಲ ಕೈದಿಗಳು ಸಹ ಐಷಾರಾಮಿ ಹಾಗೂ ಮಾದಕ ವಸ್ತು ಬಳಕೆ ಮಾಡುತ್ತಿರುವುದು ಗೊತ್ತಾಗಿದೆ. ಕಾರಾಗೃಹದ ಒಳಗೆ ಮೊಬೈಲ್ ಫೋನ್ ತಂದವರು ಯಾರು? ಬೀಡಿ, ಬೆಂಕಿ ಪೊಟ್ಟಣ ಹಾಗೂ ಸೊಪ್ಪಿನ ಪುಡಿಗಳು ಜೈಲಿನೊಳಗೆ ಹೇಗೆ ಬಂದವು? ಅವುಗಳನ್ನು ಕೈದಿಗಳಿಗೆ ಕೊಟ್ಟವರು ಯಾರು? ಎನ್ನುವುದು ಬಹಿರಂಗವಾಗಿಲ್ಲ.
ನವೆoಬರ್ 18ರ ನಸುಕಿನಲ್ಲಿ ಕಾರವಾರದ ಟ್ರಾಫಿಕ್ ಪಿಎಸ್ಐ ಶ್ರೀಕಾಂತ ರಾಥೋಡ್ ಅವರು ದಿಢೀರ್ ಆಗಿ ಕಾರವಾರ ಕಾರಾಗೃಹಕ್ಕೆ ಭೇಟಿ ನೀಡಿದ್ದಾರೆ. ಅವರು ಅಲ್ಲಿನ 8ನೇ ಸೆಲ್ ಶೋಧ ಮಾಡಿದ್ದಾರೆ. ಆಗ, ಬಂಧಿಖಾನೆಯಲ್ಲಿರುವ ಮಂಗಳೂರಿನ ಮೊಹಮದ್ ನೌಫಲ್ ಅಬ್ದುಲ್ ಲತೀಫ್ ಅವರ ಬಳಿ ಕೀಪ್ಯಾಡ್ ಮೊಬೈಲ್ ಕಾಣಿಸಿದೆ. 9ನೇ ಸೆಲ್ ಪ್ರವೇಶಿಸಿದಾಗ ಅಲ್ಲಿ ಒಂದು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಸಿಕ್ಕಿದೆ. ಅದರೊಳಗೆ ಬೀಡಿ ಪ್ಯಾಕ್, ಬೆಂಕಿ ಪೊಟ್ಟಣ, ಹಳದಿ ಬಣ್ಣದ ಲೈಟರ್ ಹಾಗೂ ಒಣಗಿದ ಸೊಪ್ಪಿನ ಪುಡಿಗಳನ್ನು ಸಣ್ಣ ಸಣ್ಣ ಕಾಗದದ ಪೊಟ್ಟಣದಲ್ಲಿ ಕಟ್ಟಿರುವುದು ಗೋಚರಿಸಿದೆ. ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂತಿ, ಜಗದೀಶ ಎಂ ಅವರ ಸೂಚನೆ ಮೇರೆಗೆ ಶ್ರೀಕಾಂತ ರಾಥೋಡ್ ಅವರು ಕಾರಾಗೃಹದಲ್ಲಿ ಶೋಧ ನಡೆಸಿದ್ದು, ಅಲ್ಲಿನ ವಿದ್ಯಮಾನಗಳ ಬಗ್ಗೆ ಡಿವೈಎಸ್ಪಿ ಎಸ್ ವಿ ಗಿರೀಶ ಅವರಿಗೆ ವರದಿ ಒಪ್ಪಿಸಿದ್ದಾರೆ.
ಆ ವರದಿ ವಾಚಿಸಿದ ಪೊಲೀಸ್ ಉಪಾಧ್ಯಕ್ಷ ಎಸ್ ವಿ ಗಿರೀಶ್ ಅವರು ಕೆಂಡಾಮoಡಲರಾಗಿದ್ದಾರೆ. ಕಾರಾಗೃಹದ ಒಳಗೆ ನಿಷೇಧಿತ ವಸ್ತು ಬಳಕೆ ಮಾಡಿದ ಕೈದಿಗಳ ವಿರುದ್ಧ ಅವರು ಕಾರವಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಅವರು ದೂರಿನಲ್ಲಿ ವಿವರಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಶುರು ಮಾಡಿದ್ದಾರೆ.