ಜನ ವಿರೋಧದ ನಡುವೆಯೂ ಅಂಕೋಲಾದ ಕೇಣಿಯಲ್ಲಿ ವಾಣಿಜ್ಯ ಬಂದರು ನಿರ್ಮಾಣಕ್ಕೆ ಸಿದ್ಧತೆ ನಡೆಯುವುದನ್ನು ವಿರೋಧಿಸಿ ಹೋರಾಟಗಾರರು ನವೆಂಬರ್ 25ಕ್ಕೆ `ಅಂಕೋಲಾ ಬಂದ್’ ಕರೆ ನೀಡಿದ್ದಾರೆ. ಆ ದಿನ ವಿವಿಧ ವಾಣಿಜ್ಯ ಮಳಿಗೆಯವರು ಸ್ವಯಂ ಪ್ರೇರಿತವಾಗಿ ತಮ್ಮ ಮಳಿಗೆ ಬಂದ್ ಮಾಡುವ ಬಗ್ಗೆ ನಿರ್ಧರಿಸಿದ್ದು, ಸರಾಯಿ ಅಂಗಡಿಯನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಆದೇಶ ಹೊರಡಿಸಿದ್ದಾರೆ.
ಕೇಣಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಾಣಿಜ್ಯ ಬಂದರು ವಿರುದ್ಧ ಎಲ್ಲಡೆ ವ್ಯಾಪಕ ಆಕ್ರೋಶವ್ಯಕ್ತವಾಗುತ್ತಿದೆ. ಸಾಕಷ್ಟು ಶಾಂತಿಯುತ ಪ್ರತಿಭಟನೆಗಳು ಇಲ್ಲಿ ನಡೆದಿದೆ. ಅದರೊಂದಿಗೆ ಅಲ್ಲಿನ ಜನ ಕಳೆದ 10 ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಅದರ ಮುಂದುವರೆದ ಭಾಗವಾಗಿ ನವೆಂಬರ್ 25ರಂದು `ಅಂಕೋಲಾ ಬಂದ್’ಗೆ ಕರೆ ನೀಡಲಾಗಿದೆ. ಈ ವೇಳೆ ಶಾಂತಿ-ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಸರಾಯಿ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಕೇಣಿ ವಾಣಿಜ್ಯ ಬಂದರುವಿನಿAದ ಆಗುವ ಅನಾಹುತಗಳ ಬಗ್ಗೆ ಜನ ಸಿಡಿದೆದ್ದಿದ್ದಾರೆ. ಅಹವಾಲು ಸಭೆಯಲ್ಲಿ ಸಹ ಅನೇಕರು ಬಂದರು ವಿರೋಧಿಸಿದ್ದಾರೆ. ಅದಾಗಿಯೂ ಬಂದರು ನಿರ್ಮಾಣಕ್ಕೆ ಈವರೆಗೆ ತಡೆ ಬಿದ್ದಿಲ್ಲ. `ಯೋಜನೆ ರದ್ಧಾಗುವವರೆಗೂ ಹೋರಾಟ ನಿಲ್ಲಿಸುವುದಿಲ್ಲ’ ಎಂದು ಪ್ರತಿಭಟನಾಕಾರರು ಹೇಳುತ್ತಿದ್ದಾರೆ. `ಉತ್ತರ ಕನ್ನಡ ಉಳಿಸಿ’ ಎಂಬ ನಿಟ್ಟಿನಲ್ಲಿ ಆಂದೋಲನ ನಡೆಯುತ್ತಿದೆ. ಕೇಣಿ ಬಂದರು ವಿಷಯವಾಗಿ ಮೀನುಗಾರರು ನಿರಂತರ ಧರಣಿ ನಡೆಸುತ್ತಿದ್ದು, ಮುಖ್ಯವಾಗಿ ಮಹಿಳೆಯರು ತಮ್ಮ ಎಲ್ಲಾ ಕೆಲಸ ಬದಿಗೊತ್ತಿ ಈ ಯೋಜನೆಯನ್ನು ಪ್ರತಿಭಟಿಸುತ್ತಿದ್ದಾರೆ.
ಕೇಣಿ ಬಂದರು ಯೋಜನೆಯಿಂದ ಆಗುವ ಪರಿಸರ ದುಷ್ಪರಿಣಾಮ, ಜೀವ ಸಂಕುಲ ನಾಶದ ಬಗ್ಗೆ ತಜ್ಞರು ಅರಿವು ಮೂಡಿಸಿದರೂ ಹೂಡಿಕೆ ಕಂಪನಿ ಆ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಜನರಿಗೆ ಆಸೆ-ಆಮೀಷವೊಡ್ಡುವವರ ಸಂಖ್ಯೆ ಕಡಿಮೆ ಆಗಿಲ್ಲ. ಅದಾಗಿಯೂ ಅಂಕೋಲಾದ ಹೋರಾಟಗಾರರು ಇದಕ್ಕೆ ಬಗ್ಗಿಲ್ಲ. `ಉತ್ತರ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಅನೇಕ ಯೋಜನೆಗಳು ಬಂದಿವೆ. ಅದರಿಂದ ಯಾವ ಅಭಿವೃದ್ಧಿಯೂ ನಡೆದಿಲ್ಲ. ಜನ ಪದೇ ಪದೇ ನಿರಾಶ್ರಿತರಾಗಿದ್ದು, ಬದುಕಿಗೆ ಮಾರಕವಾಗ ಕೇಣಿ ಬಂದರು ಯೋಜನೆಯೂ ನಮಗೆ ಬೇಡ’ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದಿದ್ದಾರೆ.
ಇಷ್ಟು ದಿನ ಶಾಂತಿಯುತವಾಗಿ ನಡೆಯುತ್ತಿದ್ದ ಹೋರಾಟ ಇದೀಗ `ಬಂದ್ ಕರೆ’ಗೆ ಬಂದು ನಿಂತಿದೆ. `ತಮ್ಮ ಜೀವ ಹೋದರೂ ಬಂದರು ನಿರ್ಮಾಣಕ್ಕೆ ಬಿಡುವುದಿಲ್ಲ’ ಎನ್ನುವ ಮೀನುಗಾರರ ಸಂಖ್ಯೆಯೂ ಹೆಚ್ಚಾಗಿದೆ. ಹೀಗಾಗಿ ನವೆಂಬರ್ 25ರಂದು ಅಂಕೋಲಾದ ವಿವಿಧ ವಾಣಿಜ್ಯ ಮಳಿಗೆಯವರು ಸ್ವಯಂ ಪ್ರೇರಿತ ಬಂದ್ ಮಾಡಲು ನಿರ್ಧರಿಸಿದ್ದು, ಮದ್ಯದ ಅಂಗಡಿಗಳನ್ನು ಸರ್ಕಾರವೇ ಬಾಗಿಲು ಮುಚ್ಚಿಸುತ್ತಿದೆ. ಈ ದಿನ ಬೆಳಗ್ಗೆ 6 ಗಂಟೆಯಿAದ ಸಂಜೆ 4ಗಂಟೆಯವರೆಗೆ ಅಂಕೋಲಾ ಪಟ್ಟಣದಲ್ಲಿ ಮದ್ಯ ಮಾರಾಟ ಹಾಗೂ ಸಾಗಾಟಕ್ಕೆ ಜಿಲ್ಲಾಡಳಿತ ತಡೆ ಒಡ್ಡಿದೆ.