ರಸ್ತೆ ಸುರಕ್ಷತಾ ನಿಯಮ ಪಾಲಿಸದೇ ಬೈಕಿನಲ್ಲಿ ಅಡ್ಡಾದಿಡ್ಡಿ ಸಂಚರಿಸುತ್ತಿದ್ದವರಿಗೆ ಅಪಘಾತವಾಗಿದ್ದು, ಒಬ್ಬರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದಾರೆ.
ಗೋಕರ್ಣ ಬಳಿಯ ಮೊಗೇರಕಟ್ಟೆಯ ಬಳಿ ಭಾನುವಾರ ಈ ಅವಘಡ ನಡೆದಿದೆ. ಆಂದ್ರ ಪ್ರದೇಶ ಮೂಲದ ನಾಲ್ಕು ಜನ ಎರಡು ಬೈಕಿನಲ್ಲಿ ಚಲಿಸುತ್ತಿದ್ದರು. ಅಡ್ಡಾದಿಡ್ಡಿ ಬೈಕ್ ಓಡಿಸುತ್ತಿದ್ದ ಅವರಲ್ಲಿ ಒಬ್ಬರ ಬೈಕು ಅಪಘಾತಕ್ಕೀಡಾಯಿತು. ಬೈಕಿನಿಂದ ಬಿದ್ದ ಸವಾರರ ತಲೆಗೆ ಗಂಭೀರ ಪ್ರಮಾಣದಲ್ಲಿ ಗಾಯವಾಯಿತು.
ತಕ್ಷಣ ಗೋಕರ್ಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಗಾಯಾಳುವನ್ನು ಸಾಗಿಸಲಾಯಿತು. ಪ್ರಭಾರಿ ಆಡಳಿತ ವೈದ್ಯಾಧಿಕಾರಿ ಡಾ ಜಗದೀಶ ನಾಯ್ಕ ಅವರು ಚಿಕಿತ್ಸೆ ನೀಡಿದರು. ತಲೆಗೆ ಬಲವಾದ ಪೆಟ್ಟು ಬಿದ್ದ ಕಾರಣ ಗಾಯಾಳು ಅರೆಪ್ರಜ್ಞಾ ವ್ಯವಸ್ಥೆಗೆ ತಲುಪಿದ್ದರು.
ಈ ಹಿನ್ನಲೆ ಅವರನ್ನು ಹೆಚ್ಚಿನ ಚಿಕಿತ್ಸೆಗೆ ವೈದ್ಯರು ಬೇರೆ ಕಡೆ ಶಿಫಾರಸ್ಸು ಮಾಡಿದರು. ಜೊತೆಗಿದ್ದವರು ಗಾಯಾಳುವನ್ನು ಉಡುಪಿಗೆ ಕಳುಹಿಸಿದರು. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
`ಸಂಚಾರಿ ನಿಯಮ ಪಾಲಿಸಿ.. ಕಾನೂನನ್ನು ಗೌರವಿಸಿ’