ಸಂಚಾರಿ ನಿಯಮ ಉಲ್ಲಂಘಿಸುವವರಿಗೆ ಗೋಕರ್ಣ ಪೊಲೀಸ್ ಸಿಬ್ಬಂದಿ ವಸಂತ ಕಲ್ಪಾಡಿ ಅವರು ಯಮನ ವೇಷಧರಿಸಿ ಹೆದರಿಸಿದರು. ಸಂಚಾರಿ ನಿಯಮ ಪಾಲಿಸುವವರಿಗೆ ಯಮ ಕಿಂಕರನ ವೇಷ ಧರಿಸಿದ್ದ ಅನುರಾಜ ನಾಯ್ಕ ಹಾಗೂ ಪರಮೇಶ್ವರ ಅವರು ಹೂವು ನೀಡಿ ಗೌರವಿಸಿದರು!
ಕಡ್ಡಾಯ ಹೆಲ್ಮೆಟ್ ಬಗ್ಗೆ ಕುಮಟಾ ಪೊಲೀಸರು ಸಾಕಷ್ಟು ಅರಿವು ಮೂಡಿಸುತ್ತಿದ್ದು, ಅದರ ಭಾಗವಾಗಿ ಗೋಕರ್ಣ ಪೊಲೀಸರು ಮಂಗಳವಾರ ಪೆಟ್ರೋಲ್ ಬಂಕಿನಲ್ಲಿ ಬೀಡು ಬಿಟ್ಟಿದ್ದರು. ಚೌಡಗೇರಿ ಪೆಟ್ರೋಲ್ ಬಂಕಿಗೆ ಬರುವವರನ್ನು ಯಮ ವೇಷಧರಿಸಿ ಪರಿಶೀಲಿಸಿದ ಪೊಲೀಸರು ಸಂಚಾರಿ ನಿಯಮ ಉಲ್ಲಂಗಿಸುವವರಿಗೆ ಪೆಟ್ರೋಲ್ ಕೊಡಲು ನಿರಾಕರಿಸಿದರು. ಸ್ಥಳೀಯ ನಿವಾಸಿ ಸುರೇಶ ಆಗೇರ್ ಅವರು ಚಿತ್ರಗುಪ್ತನ ಪಾತ್ರವಹಿಸಿ ಸಂಚಾರಿ ನಿಯಮ ಪಾಲನೆ ಮಾಡದವರನ್ನು ಬೆದರಿಸಿದರು!
ಹೆಲ್ಮೆಟ್ ಧರಿಸದೇ ಬಂದವರನ್ನು ಪಿಐ ಶ್ರೀಧರ ಎಸ್ ಆರ್ ಅವರು ಮರಳಿ ಮನೆಗೆ ಕಳುಹಿಸದರು. ಅವರೇ ಹೆಲ್ಮೆಟ್ ಧರಿಸಿ ಬಂದಾಗ ಹೂವು ನೀಡಿ ಸ್ವಾಗತಿಸಿದರು. ಅದಾದ ನಂತರ ಪೆಟ್ರೋಲ್ ನೀಡಲಾಗಿದ್ದು, ಪೊಲೀಸರ ವಿಭಿನ್ನ ಪ್ರಯತ್ನ ಜನರ ಮನ ಮುಟ್ಟಿತು. ಒಂದು ದಿನ ಜನರಿಗೆ ಅರಿವು ಮೂಡಿಸಿ, ಅದಾದ ನಂತರ ದಂಡದ ಪ್ರಯೋಗ ನಡೆಸುವುದಾಗಿ ಪೊಲೀಸರು ತಿಳಿಸಿದರು.