ತೋಟದಲ್ಲಿ ಕೆಲಸ ಮಾಡುತ್ತಿದ್ದ ರಮೇಶ ಪಟಗಾರ ಅವರಿಗೆ ವಿಷಕಾರಿ ಅಲ್ಲದ ಹಾವು ಕಚ್ಚಿದ್ದು, ಹಾವು ಕಚ್ಚಿದ ಆತಂಕದಲ್ಲಿಯೇ ಅವರು ಆಸ್ಪತ್ರೆ ಸೇರಿದ್ದಾರೆ. ಆಸ್ಪತ್ರೆಯವರು 7 ಲಕ್ಷ ರೂ ಬಿಲ್ ಮಾಡಿದ್ದಾರೆ!
ಕುಮಟಾದ ಕಾರಹಿತ್ಲಿನ ರಮೇಶ್ ಶಿವಯ್ಯ ಪಟಗಾರ ಅವರು ಹಣ್ಣೇಮಠದಲ್ಲಿ ವಾಸವಾಗಿದ್ದಾರೆ. 43 ವರ್ಷದ ಅವರು ಸಿದ್ದಾಪುರದಲ್ಲಿ ಕೆಲಸ ಮಾಡುವಾಗ ಧೂಳ್ ಬುಕ್ರಿ ಪ್ರಬೇದದ ಹಾವು ಕಚ್ಚಿದೆ. `ಆ ಹಾವು ವಿಷಕಾರಿ ಅಲ್ಲ’ ಎಂದರೂ ಅದು ರಮೇಶ ಪಟಗಾರ ಅವರ ತಲೆಗೆ ಹೋಗಿಲ್ಲ. ಹಾವು ಕಚ್ಚಿದ ಆತಂಕದಲ್ಲಿಯೇ ರಮೇಶ ಪಟಗಾರ ಅವರ ರಕ್ತದೊತ್ತಡ ಹೆಚ್ಚಾಗಿದೆ. ಭಯದಲ್ಲಿಯೇ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅದಾದ ನಂತರ ಕುಟುಂಬದವರು ರಮೇಶ ಪಟಗಾರ ಅವರನ್ನು ಕುಮಟಾ ಆಸ್ಪತ್ರೆಗೆ ತಂದಿದ್ದು, ನಂತರ ಅವರ ತಾಯಿ ಲಲಿತ ಪಟಗಾರ ಹಾಗೂ ಚಿಕ್ಕಪ್ಪ ಗಣಪತಿ ಪಟಗಾರ ಸೇರಿ ನೆರೆಜಿಲ್ಲೆಯ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಉಡುಪಿಯ ಕಸ್ತೂರಿ ಬಾ ಆಸ್ಪತ್ರೆಯಲ್ಲಿ ರಮೇಶ ಪಟಗಾರ ಅವರ ಸಂಬAಧಿಕರು ಮೊದಲು 40 ಸಾವಿರ ರೂ ಹಣ ಪಾವತಿಸಿದ್ದಾರೆ. ಅಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಬೇರೆ ಆಸ್ಪತ್ರೆಗೆ ಶಿಫಾರಸ್ಸು ಮಾಡಿದ್ದಾರೆ. ಹೀಗಾಗಿ ಕುಟುಂಬದವರು ರಮೇಶ ಪಟಗಾರ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಕಳುಹಿಸಿದ್ದಾರೆ. ಮಂಗಳೂರಿನ ಕೆ ಎಸ್ ಹೆಗಡೆ ಆಸ್ಪತ್ರೆಯವರು `ಹಾವು ಕಚ್ಚಿದ್ದರಿಂದ ಸಮಸ್ಯೆ ಆಗಿಲ್ಲ. ಹಾವು ಕಚ್ಚಿದಾಗ ಅವರು ಹೆದರಿದ್ದು ರಕ್ತದೊತ್ತಡ 280ಕ್ಕೆ ಏರಿಕೆಯಾಗಿದ್ದು, ಮೆದುಳಿನಲ್ಲಿ ರಕ್ತ ಸಂಚಾರ ತೀವೃವಾಗಿದೆ. ಹೀಗಾಗಿ ಸರ್ಜರಿ ಮಾಡಬೇಕು’ ಎಂದು ಹೇಳಿದ್ದಾರೆ. ಸರ್ಜರಿ ಮಾಡುವುದಕ್ಕಾಗಿ ರಮೇಶ ಪಟಗಾರ ಅವರನ್ನು ಕುಟುಂಬದವರು ಮಂಗಳೂರಿನ ಎ ಜೆ ಆಸ್ಪತ್ರೆಗೆ ಸಾಗಿಸಿದ್ದಾರೆ.
ಅಲ್ಲಿ ಆಯುಷ್ಮಾನ್ ಕಾರ್ಡ, ಆರೋಗ್ಯ ಕಾರ್ಡ, ಬಿಪಿಎಲ್ ಕಾರ್ಡನ್ನು ರಮೇಶ ಪಟಗಾರ ಕುಟುಂಬದವರು ಕಾಣಿಸಿದ್ದು ಅದ್ಯಾವುದು ಅಲ್ಲಿ ಕೆಲಸಕ್ಕೆ ಬಂದಿಲ್ಲ. ತಾಳಿ ಉಂಗುರ ಅಡವಿಟ್ಟ ರಮೇಶ ಪಟಗಾರ ಅವರ ಕುಟುಂಬದವರು 3 ಲಕ್ಷ ರೂ ಹಣ ಕೂಡಿಸಿದ್ದಾರೆ. ಅದಾದ ನಂತರ ಚಿಕಿತ್ಸೆಗೆ ಮತ್ತೆ 4 ಲಕ್ಷ ರೂ ಹಣ ಅಗತ್ಯವಿರುವ ಬಗ್ಗೆ ವೈದ್ಯರು ಪತ್ರ ಕೊಟ್ಟಿದ್ದಾರೆ. ಮಂಗಳೂರಿನ ಬೇರೆ ಯಾವ ಆಸ್ಪತ್ರೆಯಲ್ಲಿಯೂ ಈ ಚಿಕಿತ್ಸೆ ನಡೆಸದ ಕಾರಣ ರಮೇಶ ಪಟಗಾರ ಕುಟುಂಬದವರು ಹಣ ಹೊಂದಿಸಲಾಗದೇ ಪರದಾಡುತ್ತಿದ್ದಾರೆ. ಈ ಎಲ್ಲಾ ವಿಷಯ ಅರಿತ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ ಆಗ್ನೇಲ್ ರೋಡ್ರಿಗಸ್ ಅವರು ನೆರವು ಕೋರಿ ಆರೋಗ್ಯ ಸಚಿವರಿಗೆ ಪತ್ರ ಬರೆದಿದ್ದಾರೆ. ರಮೇಶ ಪಟಗಾರ ಅವರ ಪತ್ನಿಯೂ ಆಸ್ಪತ್ರೆಗೆ ದಾಖಲಾಗಿರುವ ವಿಷಯವನ್ನು ಅವರು ವಿವರಿಸಿದ್ದಾರೆ. ಸಾಮಾಜಿಕ ಕಾರ್ಯಕರ್ತ ಸುಧಾಕರ ನಾಯ್ಕ ಹಾಗೂ ನಿವೃತ್ತ ಅಧಿಕಾರಿ ನಾಗೇಶ ಅವರು ಸಹಾಯ ಕೋರಿ ಸಚಿವರಿಗೆ ಮನವಿ ಮಾಡಿದ್ದಾರೆ.