ಶಿರಸಿಯ ಭಾಸ್ಕರ ಬೋವಿವಡ್ಡರ್ ಹಾಗೂ ಯಲ್ಲಾಪುರದ ಹರುಷ ಬೋವಿವಡ್ಡರ್ ಸೇರಿ ಯಲ್ಲಾಪುರದ ವಿಶ್ವೇಶ್ವರ ಹೆಬ್ಬಾರ್ ಅವರ ತೋಟಕ್ಕೆ ನುಗ್ಗಿದ್ದು, ಅಲ್ಲಿದ್ದ ಅಡಿಕೆ ಕದ್ದಿದ್ದಾರೆ. ವಿಶ್ವೇಶ್ವರ ಹೆಬ್ಬಾರ್ ಅವರ ದೂರಿಗೆ ಸ್ಪಂದಿಸಿದ ಪೊಲೀಸರು ಆ ಇಬ್ಬರು ಕಳ್ಳರನ್ನು ಹಿಡಿದು ಜೈಲಿಗೆ ಹಾಕಿದ್ದಾರೆ.
ನವೆಂಬರ್ 5ರಂದು ಯಲ್ಲಾಪುರದ ಇಡಗುಂದಿ ಬಳಿಯ ದೋಣಗಾರದಲ್ಲಿ ವಿಶ್ವೇಶ್ವರ ವೆಂಕಟ್ರಮಣ ಹೆಬ್ಬಾರ್ ಅವರ ಅಡಿಕೆ ತೋಟಕ್ಕೆ ಕಳ್ಳರು ನುಗ್ಗಿದ್ದರು. ಅಡಿಕೆ ಮರ ಏರಿದ ದುಷ್ಟರು ಅಲ್ಲಿದ್ದ 10 ಕ್ವಿಂಟಾಲ್ ಹಸಿ ಅಡಿಕೆ ದೋಚಿ ಪರಾರಿ ಆಗಿದ್ದರು. ಅಡಿಕೆ ಕಳ್ಳತನದಿಂದ ತಲೆಬಿಸಿಗೆ ಒಳಗಾದ ವಿಶ್ವೇಶ್ವರ ಹೆಬ್ಬಾರ್ ಅವರು ಪೊಲೀಸ್ ದೂರು ನೀಡಿದ್ದರು. `ಸುಮಾರು 40 ಮರ ಬೋಳಿಸಿದ ಕಳ್ಳರನ್ನು ಹುಡುಕಿ ತಮ್ಮ ಅಡಿಕೆ ತಮಗೆ ಮರಳಿಸಿ’ ಎಂದವರು ಪಿಐ ರಮೇಶ ಹಾನಾಪುರ ಅವರ ಬಳಿ ಮನವಿ ಮಾಡಿದ್ದರು.
ವಿಶ್ವೇಶ್ವರ ಹೆಬ್ಬಾರ್ ಅವರಿಂದ ಎಲ್ಲಾ ಮಾಹಿತಿಪಡೆದ ಪಿಎಸ್ಐ ರಾಜಶೇಖರ ವಂದಲಿ, ಸಿದ್ದಪ್ಪ ಗುಡಿ ಹಾಗೂ ಮಹಾವೀರ ಕಾಂಬಳೆ ಜಂಟಿಯಾಗಿ ತನಿಖೆ ಶುರು ಮಾಡಿದರು. ಪೊಲೀಸ್ ಸಿಬ್ಬಂದಿ ಬಸವರಾಜ ಹಗರಿ, ಉಮೇಶ ತುಂಬರಗಿ, ಸುರೇಶ ವಡ್ಡರ, ದೀಪಕ ನಾಯ್ಕ ಹಾಗೂ ಪರಮೇಶ ಕೆ ಅವರು ವಿವಿಧ ಆಯಾಮಗಳಲ್ಲಿ ಹುಡುಕಾಟ ನಡೆಸಿದರು. ಆಗ, ಯಲ್ಲಾಪುರ ಮಂಚಿಕೇರಿ ಬಳಿಯ ಬೆಂಡಿಗೇರಿ ಹರುಷ ಈರಪ್ಪ ಬೋವಿವಡ್ಡರ್ (24) ಅವರ ಮೇಲೆ ಪೊಲೀಸರಿಗೆ ಅನುಮಾನ ಮೂಡಿತು. ಹರುಷ ಬೋವಿವಡ್ಡರ್ ಅವರನ್ನು ವಿಚಾರಣೆಗೆ ಒಳಪಡಿಸಿದಾಗ ಶಿರಸಿ ಗೌಡಳ್ಳಿ ಬಳಿಯ ಕೋಗುಲಕೋಳಿಯ ಭಾಸ್ಕರ ಕೃಷ್ಣ ಭೋವಿವಡ್ಡರ್ (19) ಅವರ ಜೊತೆ ಸೇರಿ ಅಡಿಕೆ ಕಳ್ಳತನ ಮಾಡಿರುವುದು ಬಹಿರಂಗವಾಯಿತು.
ಪೊಲೀಸರನ್ನು ಕಂಡ ಕೂಡಲೇ ಅವರಿಬ್ಬರು ತಮ್ಮ ತಪ್ಪು ಒಪ್ಪಿಕೊಂಡರು. 1 ಲಕ್ಷ ರೂ ಮೌಲ್ಯದ 10 ಕ್ವಿಂಟಾಲ್ ಅಡಿಕೆ ಕಳ್ಳತನ ನಡೆದಿದ್ದರೂ ಅವರ ಬಳಿ 50 ಸಾವಿರ ಮೌಲ್ಯದ 4.54 ಕ್ವಿಂಟಲ್ ಅಡಿಕೆ ಮಾತ್ರ ಸಿಕ್ಕಿತು. ಅಡಿಕೆ ಕಳ್ಳ ಸಿಕ್ಕಿಬಿದ್ದಿರುವ ವಿಷಯವನ್ನು ಪಿಐ ರಮೇಶ ಹಾನಾಪುರ ಅವರು ಶಿರಸಿ ಡಿವೈಎಸ್ಪಿ ಗೀತಾ ಪಾಟೀಲ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ ಕೃಷ್ಣಮೂರ್ತಿ, ಜಗದೀಶ ಎಂ ಹಾಗೂ ಪೊಲೀಸ್ ಅಧೀಕ್ಷಕ ದೀಪನ್ ಎಂ ಎನ್ ಅವರಿಗೆ ತಿಳಿಸಿದರು. ಪ್ರಕರಣ ದಾಖಲಾದ ಒಂದೇ ದಿನದಲ್ಲಿ ಕಳ್ಳರನ್ನು ಹುಡುಕಿದ ಪೊಲೀಸರ ಕಾರ್ಯಕ್ಕೆ ಮೇಲಧಿಕಾರಿಗಳು ಮೆಚ್ಚುಗೆ ಸೂಚಿಸಿದರು.