ದುಷ್ಟರ ಪಾಲಿಗೆ ದುಸ್ವಪ್ನವಾಗಿರುವ ಅಂಕೋಲಾ ಪಿಐ ಚಂದ್ರಶೇಖರ ಮಠಪತಿ ಅವರ ವಿರುದ್ಧ ಪುರಸಭೆ ಮಾಜಿ ಸದಸ್ಯ ಸಂದೀಪ ಬಂಟ್ ಅವರು ಹಪ್ತಾ ವಸೂಲಿ ಆರೋಪ ಮಾಡಿದ್ದಾರೆ. ಆದರೆ, ಈ ಆರೋಪಕ್ಕೆ ಪೂರಕವಾದ ದಾಖಲೆ ಒದಗಿಸದ ಕಾರಣ ಆರೋಪದ ಹಿಂದೆ ಕಾಣದ ಕೈಗಳು ಕೆಲಸ ಮಾಡಿದ ಅನುಮಾನವ್ಯಕ್ತವಾಗುತ್ತಿದೆ.
ಒಂದುವರೆ ವರ್ಷದ ಹಿಂದೆ ಅಂಕೋಲಾ ಪೊಲೀಸ್ ಠಾಣೆಗೆ ಬಂದ ಚಂದ್ರಶೇಖರ ಮಠಪತಿ ಅವರು ಅನೇಕ ಅಪರಾಧ ಪ್ರಕರಣಗಳನ್ನು ಬೇದಿಸಿದ್ದಾರೆ. ಹಲವು ಅಕ್ರಮಗಳಿಗೆ ಅವರು ಕಡಿವಾಣ ಹಾಕಿದ್ದಾರೆ. ಕಾನೂನುಬಾಹಿರವಾಗಿ ನಡೆಯುವ ಕೆಲಸಗಳ ಮೇಲೆ ಅವರು ಕಣ್ಣಿಟ್ಟಿದ್ದು, ಬೀಟ್ ಪೊಲೀಸ್ ವ್ಯವಸ್ಥೆಯನ್ನು ಬಲಗೊಳಿಸಿದ್ದಾರೆ. ಸಣ್ಣ ಸುಳಿವು ಆಧರಿಸಿ ದೊಡ್ಡ ದೊಡ್ಡ ಪ್ರಕರಣಗಳನ್ನು ಬೇದಿಸಿದಕ್ಕಾಗಿ ಅನೇಕ ಸನ್ಮಾನ-ಬಿರುದುಗಳು ಸಹ ಅವರಿಗೆ ದೊರೆತಿದೆ.
ಕಳೆದ ಒಂದುವರೆ ವರ್ಷದಲ್ಲಿ ಚಂದ್ರಶೇಖರ ಮಠಪತಿ ಅವರು 42ಕ್ಕೂ ಅಧಿಕ ಮಟ್ಕಾ ದಾಳಿ ನಡೆಸಿದ್ದಾರೆ. ಗೂಡಗಂಡಿಕಾರರಿ0ದಹಿಡಿದು ಮಟ್ಕಾಬುಕ್ಕಿಯವರೆಗೆ ಮುಲಾಜಿಲ್ಲದೇ ಪ್ರಕರಣ ದಾಖಲಿಸಿದ್ದಾರೆ. ಪ್ರಭಾವಿಗಳ ಒತ್ತಡಕ್ಕೂ ಮಣಿಯದೇ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಸಾಮಾನ್ಯವಾಗಿ ಪೊಲೀಸರು ಮಟ್ಕಾ ದಾಳಿ ನಡೆಸಿದಾಗ ಒಂದು ಬಾಲ್ ಪೆನ್ನಿನ ಜೊತೆ 500ರಿಂದ 600ರೂ ಹಣ ಮಾತ್ರ ಸಿಗುತ್ತದೆ. ಆದರೆ, ನವೆಂಬರ್ 26ರಂದು ಚಂದ್ರಶೇಖರ ಮಠಪತಿ ಅವರು ಕೇಣಿಯಲ್ಲಿನ ಅಂಗಡಿ ಮೇಲೆ ದಾಳಿ ನಡೆಸಿದಾಗ 17 ಸಾವಿರ ರೂ ಮಟ್ಕಾ ಹಣ ಸಿಕ್ಕಿದ್ದು, ಸಿಕ್ಕಿಬಿದ್ದ ಶ್ಯಾಮ ಬಂಟ್ ಅವರು `ಮಟ್ಕಾ ಬುಕ್ಕಿ ಸಂದೀಪ ಬಂಟ್ ಅವರ ಸೂಚನೆ ಮೇರೆಗೆ ಈ ಆಟ ಆಡಿಸುತ್ತಿದ್ದೇನೆ’ ಎಂದು ಬಾಯ್ಬಿಟ್ಟಿದ್ದಾರೆ. ಈ ಹಿನ್ನಲೆ ಸಂದೀಪ ಬಂಟ್ ಅವರನ್ನು ಮಟ್ಕಾ ಬುಕ್ಕಿ ಎಂದು ಗುರುತಿಸಿ ಪಿಐ ಚಂದ್ರಶೇಖರ ಮಠಪತಿ ಅವರು ಪ್ರಕರಣ ದಾಖಲಿಸಿದ್ದಾರೆ. ಮಟ್ಕಾ ಪ್ರಕರಣದಲ್ಲಿ ಸಂದೀಪ ಬಂಟ್ ಅವರು ಆರೋಪಿ ಸ್ಥಾನಕ್ಕೇರಿರುವುದು ಇದೇ ಮೊದಲಲ್ಲ.
ಚಂದ್ರಶೇಖರ ಮಠಪತಿ ಅವರು ಅಂಕೋಲಾ ಪೊಲೀಸ್ ಠಾಣೆಗೆ ಬರುವ ಮುನ್ನವೇ ಪೊಲೀಸ್ ದಾಖಲೆಗಳ ಪ್ರಕಾರ ಮಟ್ಕಾ ಬುಕ್ಕಿಯಾಗಿ ಗುರುತಿಸಿಕೊಂಡಿದ್ದ ಸಂದೀಪ ಬಂಟ್ ಅವರು ಇದೀಗ ಚಂದ್ರಶೇಖರ ಮಠಪತಿ ಅವರು ತಮ್ಮ ವಿರುದ್ಧ ಮತ್ತೊಮ್ಮೆ ಪ್ರಕರಣ ದಾಖಲಿಸಿದ ಕಾರಣ ಅವರ ವಿರುದ್ಧ ಆರೋಪ ಮಾಡಿದ್ದಾರೆ ಎಂಬುದು ಪೊಲೀಸ್ ವಲಯದಲ್ಲಿ ಕೇಳಿಸಿದ ಮಾತು. ಸಂದೀಪ ಬಂಟ್ ಅವರ ವಿರುದ್ಧ ಈ ಹಿಂದೆ ದಾಖಲಾಗಿದ್ದ ಪ್ರಕರಣಗಳಲ್ಲಿ `ಬಿ ರಿಪೋರ್ಟ’ ಸಲ್ಲಿಕೆಯಾಗಿದ್ದು, ಈ ಪ್ರಕರಣದಲ್ಲಿ `ಬಿ ರಿಪೋರ್ಟ’ ಸಲ್ಲಿಕೆ ಸಾಧ್ಯತೆಗಳಿಲ್ಲದ ಕಾರಣ ಪೊಲೀಸರ ವಿರುದ್ಧ ಆರೋಪ ಮಾಡಿದ ಬಗ್ಗೆ ಮಾತುಗಳಿವೆ.
ಹೀಗಾಗಿ ಮಾಧ್ಯಮದವರು ಸಹ `ಆರೋಪಕ್ಕೆ ತಕ್ಕ ದಾಖಲೆ ಒದಗಿಸಿ’ ಎಂದು ಕೇಳಿದ್ದು, ಸಂದೀಪ ಬಂಟ್ ಅವರು ದಾಖಲೆ ನೀಡಿಲ್ಲ. `ಪೊಲೀಸರು ನನ್ನಲ್ಲಿಯೂ ಹಪ್ತಾ ಕೇಳಿದ್ದಾರೆ’ ಎಂದು ಸಂದೀಪ ಬಂಟ್ ಅವರು ಹೇಳಿದ್ದು, ಜನಪ್ರತಿನಿಧಿಯಾಗಿ ಅನುಭವಹೊಂದಿರುವ ಅವರು ಆ ಅವಧಿಯಲ್ಲಿಯೇ ಕಾನೂನಿನ ಪ್ರಕಾರ ದಾಖಲೆಗಳ ಜೊತೆ ಮೇಲಧಿಕಾರಿಗಳಾದ ಪೊಲೀಸ್ ಅಧೀಕ್ಷಕರಿಗೆ ಏಕೆ ದೂರು ಏಕೆ ದಾಖಲಿಸಲಿಲ್ಲ? ಎಂಬ ಪ್ರಶ್ನೆಗೂ ಉತ್ತರವಿಲ್ಲ.