ಮುರುಡೇಶ್ವರ ಕಾಮತ್ ಯಾತ್ರಿ ನಿವಾಸದ ಮಾಲಕ ವೆಂಕಟದಾಸ್ ಕಾಮತ್ ಅವರ ಮಾಲಕತ್ವದ ಕಟ್ಟಡದಲ್ಲಿ ಲಿಪ್ಟ್ ಹಾಳಾದ ಪರಿಣಾಮ ಅದರ ಅಡಿ ಸಿಲುಕಿ ಇಬ್ಬರು ಸಾವನಪ್ಪಿದ್ದಾರೆ. ಲಿಪ್ಟ್ ದುರಸ್ಥಿಗೆ ಬಂದಿದ್ದ ಪ್ರಭಾಕರ ಶೆಟ್ಟಿ ಹಾಗೂ ಅವರ ಸಹಾಯಕ ಬಾಬು ಪೂಜಾರಿ ಅದೇ ಲಿಪ್ಟಿನ ಅಡಿಗೆ ಬಿದ್ದು ಕೊನೆಯುಸಿರೆಳೆದಿದ್ದಾರೆ.
ಮುರುಡೇಶ್ವರ ಕಾಮತ್ ಯಾತ್ರಿ ನಿವಾಸದ ಮಾಲಕ ವೆಂಕಟದಾಸ್ ಕಾಮತ್ ಅವರು ತಮ್ಮ ಒಡೆತನದಲ್ಲಿರುವ ಭೂಮಿಯಲ್ಲಿ ಇನ್ನೊಂದು ಕಟ್ಟಡ ನಿರ್ಮಿಸುತ್ತಿದ್ದರು. ಆ ಕಟ್ಟಡದ ಲಿಪ್ಟ್ ಮೋಟಾರ್ ಹಾಳಾಗಿದ್ದ ಕಾರಣ ಅದನ್ನು ಸರಿಪಡಿಸಲು ಎಲೆಕ್ಟಿಶಿಯನ್ ಕರೆದಿದ್ದರು. ಅದರ ಪ್ರಕಾರ ಅಕ್ಟೊಬರ್ 6ರಂದು ಭಟ್ಕಳ ಕಾಯ್ಕಿಣಿಯ ಬೆಕ್ಕಿನಕೆರೆ ದೇವಿಕಾನ್ ಬಳಿಯ ಪ್ರಭಾಕರ ಮುತ್ತಯ್ಯ ಶೆಟ್ಟಿ ಅವರು ಅಲ್ಲಿಗೆ ಹೋಗಿದ್ದರು. ದುರಸ್ಥಿ ಕೆಲಸದ ಸಹಾಯಕ್ಕಾಗಿ ಅವರು ಕುಂದಾಪುರದ ಬಾಬು ಮಡೂರ ಪೂಜಾರಿ ಅವರನ್ನು ಕರೆದೊಯ್ದಿದ್ದರು.
ಪ್ರಭಾಕರ ಶೆಟ್ಟಿ ಹಾಗೂ ಬಾಬು ಪೂಜಾರಿ ಸೇರಿ Construction Mini Lift ಮೋಟಾರ್ ಸರಿಪಡಿಸಿದರು. ಆದರೆ, ಆ ಲಿಪ್ಟಿನ ಸೇಪ್ಟಿ ಲಾಕರ್ ಸಹ ಹಾಳಾಗಿದ್ದು, ಆ ವಿಷಯವನ್ನು ಕಟ್ಟಡ ಮಾಲಕ ವೆಂಕಟದಾಸ್ ಕಾಮತ್ ಅವರು ಯಾರಲ್ಲಿಯೂ ಹೇಳಿರಲಿಲ್ಲ. ಹೀಗಾಗಿ ಲಿಪ್ಟ್ ಮೋಟಾರ್ ಸರಿಪಡಿಸಿದ ಪ್ರಭಾಕರ ಶೆಟ್ಟಿ ಅವರು ಬಾಬು ಪೂಜಾರಿ ಅವರ ಜೊತೆ ಅದೇ ಲಿಪ್ಟಿನಲ್ಲಿ ಮೇಲ್ಮಹಡಿಯಿಂದ ಕೆಳಮಹಡಿಗೆ ಬರುತ್ತಿದ್ದರು. ಆಗ, ಆ ಲಿಪ್ಟ್ ತಿರುಚಿ ಬಿದ್ದಿದ್ದು ಆ ರಭಸಕ್ಕೆ ಅವರಿಬ್ಬರು ನೆಲಕ್ಕೆ ಅಪ್ಪಳಿಸಿದರು. ಲಿಪ್ಟ್ ಸಹ ಕಳಚಿ ಬಿದ್ದಿತು.
ಈ ಅವಘಡದಲ್ಲಿ ಪ್ರಭಾಕರ ಶೆಟ್ಟಿ ಹಾಗೂ ಬಾಬು ಪೂಜಾರಿ ಅವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡರು. ಅವರನ್ನು ಮಣಿಪಾಲ ಕಸ್ತೂರಿಬಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅದರಿಂದ ಯಾವುದೇ ಪ್ರಯೋಜನ ಆಗಲಿಲ್ಲ. Construction Mini Lift ಕಂಪನಿಯ ದೋಷಯುಕ್ತ ಲಿಪ್ಟ್ ಹಾಗೂ ವೆಂಕಟದಾಸ್ ಕಾಮತ್ ಅವರು ಸುರಕ್ಷಿತ ಉಪಕರಣ ಒದಗಿಸಿದೇ ಕೆಲಸ ಮಾಡಿಸಿದ ಪರಿಣಾಮ ಅವರಿಬ್ಬರ ಜೀವ ಹೋಯಿತು. ಈ ಎಲ್ಲಾ ವಿಷಯಗಳ ಬಗ್ಗೆ ಪ್ರಭಾಕರ ಶೆಟ್ಟಿ ಅವರ ಪುತ್ರ ಶ್ರವಣ ಶೆಟ್ಟಿ ಅವರು ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ ವಿವರಿಸಿದರು. ಪೊಲೀಸರು Construction Mini Lift ಕಂಪನಿ ಹಾಗೂ ವೆಂಕಟದಾಸ್ ಕಾಮತ್ ಅವರ ವಿರುದ್ಧ ಪ್ರಕರಣ ದಾಖಲಿಸಿದರು.
`ಅವಘಡ ತಪ್ಪಿಸಲು ಸುರಕ್ಷತೆಗೆ ಒತ್ತು ಕೊಡಿ’