ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಉಪನಿರ್ದೇಶಕರಾಗಿದ್ದ ಜಯಂತ ಅವರ ಅಮಾನತಿಗೆ ಕಾರಣವಾಗಿದ್ದ `ಮಂಚದ ರಹಸ್ಯ’ ಬಯಲಾಗಿದೆ. `ಆ ಮಂಚಕ್ಕೆ ಹಾಗೂ ಅಧಿಕಾರಿ ಜಯಂತ ಅವರಿಗೆ ಯಾವುದೇ ಸಂಬoಧ ಇಲ್ಲ’ ಎಂಬುದು ಮಾಹಿತಿ ಹಕ್ಕು ಕಾಯ್ದೆ ಅಡಿ ದೊರೆತ ದಾಖಲೆಗಳಿಂದ ದೃಢವಾಗಿದೆ.
ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಉಪನಿರ್ದೇಶಕರಾಗಿದ್ದ ಜಯಂತ ಅವರು ಅಸಮಧಾನವ್ಯಕ್ತಪಡಿಸಿ ಬರೆದ ಪತ್ರವೂ ದಾಖಲೆಗಳಲ್ಲಿ ಸಿಕ್ಕಿದೆ. ತಮ್ಮ ವಿರುದ್ಧ ಕೇಳಿಬಂದ ಆರೋಪಕ್ಕೆ ಸ್ಪಷ್ಟನೆ ನೀಡಲು ಅವಕಾಶ ಕೊಡದ ಬಗ್ಗೆ ಜಯಂತ ಅವರು ಪತ್ರದ ಮೂಲಕ ಅಧಿಕೃತವಾಗಿಯೇ ಅಸಮಧಾನವ್ಯಕ್ತಪಡಿಸಿದ್ದಾರೆ. `ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಕೋರಿದರೂ ಕ್ರಮ ಜರುಗಿಸಿಲ್ಲ’ ಜಯಂತ ಅವರು ಸರ್ಕಾರಿ ಪತ್ರದಲ್ಲಿ ಬರೆದಿದ್ದು, ಅದು ಕಡತ ಸೇರಿದೆ.
ಕಾರವಾರದ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಜಯಂತ ಅವರು ಜಂಟಿ ನಿರ್ದೇಶಕರಾಗಿದ್ದರು. ಅಲ್ಲಿಯೂ ಪ್ರಭಾರಿ ಹೊಣೆಯಲ್ಲಿದ್ದ ಜಯಂತ ಅರ್ನು ಪ್ರವಾಸೋದ್ಯಮ ಇಲಾಖೆಗೂ ಪ್ರಭಾರಿ ಉಪನಿರ್ದೇಶಕರಾಗಿ ನೇಮಿಸಲಾಗಿತ್ತು. 2025ರ ಫೆಬ್ರವರಿ ಅವಧಿಯಲ್ಲಿ ಜಯಂತ ಅವರನ್ನು ರಾಜ್ಯ ಸರ್ಕಾರದ ಕಾರ್ಯಕ್ರಮವೊಂದಕ್ಕೆ ಸಂಪರ್ಕಾಧಿಕಾರಿಯಾಗಿ ನಿಯೋಜಿಸಲಾಗಿತ್ತು. ಆ ವೇಳೆ, ಕಾರವಾರ ಸಹಾಯಕ ಆಯುಕ್ತರು ಪ್ರವಾಸೋದ್ಯಮ ಇಲಾಖೆಯ ಪ್ರಭಾರಿ ಹೊಣೆ ಹೊತ್ತಿದ್ದರು. ಆಗ, ಸಹಾಯಕ ಆಯುಕ್ತರಿಗೆ ಸರ್ಕಾರಿ ಕಚೇರಿಯಲ್ಲಿ ಮಂಚ ಕಾಣಿಸಿದ್ದು, ಕಿಡಿಕಾರಿದ್ದರು. ಮಂಚ ಸಿಕ್ಕ ವಿಡಿಯೋ ವೈರಲ್ ಆಗಿ, ಮಾಧ್ಯಮಗಳಲ್ಲಿಯೂ ವರದಿ ಪ್ರಸಾರವಾಗಿತ್ತು.
ಬೆಂಗಳೂರಿಗೆ ಹೋಗಿದ್ದ ಜಯಂತ್ ಅವರು ದಿಢೀರ್ ಆಗಿ ಕಾರವಾರಕ್ಕೆ ಮರಳಿ ಕಡತಗಳ ಪರಿಶೀಲನೆ ಮಾಡಿದ್ದರು. ಆಗ, 2018ರ ಅವಧಿಯಲ್ಲಿ ಹುಬ್ಬಳ್ಳಿಯ ಸಾಯಿ ಇನಸ್ಟçಕ್ಷನ್ ಅವರಿಗೆ ಜೊಯಿಡಾದ ರಾಮನಗರದಲ್ಲಿ ಗುತ್ತಿಗೆ ಆಧಾರದಲ್ಲಿ ನೀಡಲಾಗಿದ್ದ ಕಟ್ಟಡದಲ್ಲಿ ಅಧಿಕಾರಿಗಳು ದಾಳಿ ನಡೆಸಿದ್ದು, ಆ ಅವಧಿಯಲ್ಲಿ ಸಿಕ್ಕ ಪೀಠೋಪಕರಣಗಳ ಜೊತೆ ಮಂಚವನ್ನು ಪ್ರವಾಸೋಧ್ಯಮ ಇಲಾಖೆ ಕಚೇರಿಯಲ್ಲಿರಿಸಿರುವುದು ಗೊತ್ತಾಗಿತ್ತು. ಆ ಬಗ್ಗೆ ಅವರು ಪತ್ರಿಕಾಗೋಷ್ಠಿ ನಡೆಸಿ ಮಾಹಿತಿ ನೀಡಲು ಅನುಮತಿ ಕೋರಿದ್ದರು. ಆದರೆ, ಅವರಿಗೆ ಪತ್ರಿಕಾಗೋಷ್ಠಿ ನಡೆಸಲು ಅನುಮತಿ ಸಿಕ್ಕಿರಲಿಲ್ಲ.
`ದಾಳಿಯ ವೇಳೆ ಮಂಚದ ಜೊತೆ ಸಿಕ್ಕ ಪ್ರಿಡ್ಜ್, ಫ್ಯಾನ್ ಸೇರಿ ಅನೇಕ ವಸ್ತುಗಳನ್ನು ಪ್ರವಾಸೋದ್ಯಮ ಕಚೇರಿಯಲ್ಲಿರಿಸಲಾಗಿದೆ. ಆದರೆ, ಅದೆಲ್ಲವನ್ನು ಬಿಟ್ಟು ಮಂಚದ ವಿಡಿಯೋ ಮಾತ್ರ ಹರಿಬಿಟ್ಟು ಹೆಸರು ಕೆಡಿಸುವ ಕಾರ್ಯ ನಡೆದಿದೆ. ತಮಗೆ ನ್ಯಾಯ ಒದಗಿಸಬೇಕು’ ಎಂದು ಜಯಂತ ಅವರು ಮನವಿ ಮಾಡಿದ್ದರು. ಆದರೆ, ಅವರು ನೀಡಿದ ಆ ಪತ್ರಕ್ಕೆ ಯಾವುದೇ ಕ್ರಮ ಆಗಿಲ್ಲ. ಈ ಬಗ್ಗೆಯೂ ಜಯಂತ ಅವರು ಅಸಮಧಾನವ್ಯಕ್ತಪಡಿಸಿ ಪತ್ರ ಬರೆದಿದ್ದು, `ಆ ಪ್ರಭಾರಿ ಹುದ್ದೆಯಿಂದ ತಮ್ಮನ್ನು ಬಿಡುಗಡೆ ಮಾಡಿ’ ಎಂದು ಮನವಿ ಮಾಡಿರುವುದು ಉಲ್ಲೇಖವಾಗಿದೆ.
`ಪ್ರವಾಸೋದ್ಯಮ ಹೆಸರಿನಲ್ಲಿ ನಡೆಯುತ್ತಿದ್ದ ಕೆಲ ಅಕ್ರಮ ದಂಧೆಗಳಿಗೆ ಜಯಂತ ಅವರು ಕಡಿವಾಣ ಹಾಕಿದ್ದರು. ಈ ಕಾರಣದಿಂದ ಅಸಮಧಾನಗೊಂಡ ಗುಂಪು ಅವರ ವಿರುದ್ಧ ಕುತಂತ್ರ ರೂಪಿಸಿ ಮಂಚದ ವಿಡಿಯೋ ವೈರಲ್ ಮಾಡಿತ್ತು. ಇದರಿಂದ ಮಾನಸಿಕ ಕಿರುಕುಳಕ್ಕೆ ಒಳಗಾದ ಅವರು ಆ ಇಲಾಖೆಯ ಹುದ್ದೆಯಿಂದ ತಮ್ಮನ್ನು ಬಿಡುಗಡೆ ಮಾಡುವಂತೆ ಕೋರಿದ್ದರು. ವಿವಾದ ಮುಗಿದ ನಂತರ ಪ್ರವಾಸೋದ್ಯಮ ಇಲಾಖೆಯನ್ನು ಮತ್ತೆ ಹಳೆ ಜಾಗಕ್ಕೆ ಸ್ಥಳಾಂತರಿಸಲಾಗಿದೆ. ಅನಗತ್ಯವಾಗಿ ಅಧಿಕಾರಿಗಳ ವಿರುದ್ಧ ಆರೋಪ ಮಾಡುವವರಿಗೂ ಶಿಕ್ಷೆಯಾಗಬೇಕಿದೆ’ ಮಾಹಿತಿ ಹಕ್ಕು ಕಾರ್ಯಕರ್ತ ಸಂತೋಷ ವಿ ನಾಯ್ಕ ಹೇಳಿದ್ದಾರೆ.