ಹುಬ್ಬಳ್ಳಿ ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಮೇಲೆ ಚಲಿಸುತ್ತಿದ್ದ ಸಿಮೆಂಟ್ ತುಂಬಿದ ಲಾರಿ ಯಲ್ಲಾಪುರದಲ್ಲಿ ಪಲ್ಟಿಯಾಗಿದೆ. ಪರಿಣಾಮ ಹೆದ್ದಾರಿ ಪೂರ್ತಿ ಸಿಮೆಂಟ್ ಚೀಲಗಳು ಬಿದ್ದಿವೆ.
ಯಲ್ಲಾಪುರದ ಕೆ ಮಿಲಿನ್ ಹೊಟೇಲ್ ಬಳಿ ಭಾನುವಾರ ಸಿಮೆಂಟ್ ಲಾರಿ ಪಲ್ಟಿಯಾಯಿತು. ಪರಿಣಾಮ ತಾಸುಗಳ ಕಾಲ ಸಂಚಾರ ದಟ್ಟಣೆ ಉಂಟಾಗಿದ್ದು, ಇನ್ನಿತರ ವಾಹನ ಸವಾರರು ಸಮಸ್ಯೆ ಅನುಭವಿಸಿದರು. ವಿಷಯ ಅರಿತ ಪೊಲೀಸರು ಸ್ಥಳಕ್ಕೆ ಧಾವಿಸಿ ವಾಹನ ಸವಾರರ ಸಮಸ್ಯೆ ಆಲಿಸಿದರು. ನಂತರ ಒಂದು ಬದಿಯಿಂದ ಇನ್ನಿತರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟರು.
ಬಳ್ಳಾರಿಯಿಂದ ಎಸಿಸಿ ಸಿಮೆಂಟ್ ಚೀಲಗಳನ್ನು ಹೊತ್ತ ಲಾರಿ ಕೇರಳಕ್ಕೆ ಹೋಗಬೇಕಿತ್ತು. ಯಲ್ಲಾಪುರ ಬಳಿಯ ಹೆದ್ದಾರಿ ಹೊಂಡಕ್ಕೆ ಲಾರಿಯ ನಿಯಂತ್ರಣ ತಪ್ಪಿದ್ದು, ಚಾಲಕನ ನಿರ್ಲಕ್ಷದ ಕಾರಣ ಲಾರಿ ಪಲ್ಟಿಯಾಯಿತು. ಅಪಘಾತದ ರಭಸಕ್ಕೆ ಲಾರಿಯೊಳಗಿದ್ದ ಸಿಮೆಂಟ್ ಚೀಲಗಳೆಲ್ಲವೂ ಹೆದ್ದಾರಿ ಮೇಲೆ ಬಿದ್ದವು. ಸ್ಥಳದಲ್ಲಿ ಸಾಕಷ್ಟು ಧೂಳು ಕಾಣಿಸಿದ್ದು, ಸಿಮೆಂಟ್ ಧೂಳು ಸೇವಿಸಿದ ಜನ ಕೆಮ್ಮಿನ ಸಮಸ್ಯೆಯನ್ನು ಅನುಭವಿಸಿದರು.
ನಂತರ ಕ್ರೇನ್ ಮೂಲಕ ಲಾರಿಯನ್ನು ಮೇಲೆತ್ತಲಾಗಿದೆ. ಅಪಘಾತದಲ್ಲಿ ಲಾರಿ ಚಾಲಕನ ಕೈಗೆ ಪೆಟ್ಟಾಗಿದೆ. ಪಿಸೈ ಸಿದ್ದಪ್ಪ ಗುಡಿ ತಂಡದ ಪೊಲೀಸರು ಸ್ಥಳದಲ್ಲಿದ್ದು ವಾಹನ ಸಂಚಾರ ಸುಗಮಗೊಳಿಸಿದರು.