ಗೋಕರ್ಣಕ್ಕೆ ಬರುತ್ತಿದ್ದ ಸೀಬರ್ಡ ಬಸ್ ದುರಂತದಲ್ಲಿನ ಸಾವಿನ ಸಂಖ್ಯೆಯ ಬಗ್ಗೆ ಸಾಕಷ್ಟು ಗೊಂದಲವಿದೆ.
ದುರ್ಘಟನೆ ನಡೆದಾಗ 17 ಜನರ ಸಜೀವ ದಹನ ಎನ್ನಲಾಗಿದ್ದು, ಆ ನಂತರ 9 ಜನ ಸಾವನಪ್ಪಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಕೆಲ ಮಾಧ್ಯಮಗಳು 12 ಜನರ ಸಜೀವ ದಹನ ಎಂದು ವರದಿ ಪ್ರಕಟಿಸಿವೆ. ಆದರೆ, ಸಾರಿಗೆ ಸಚಿವರು ಐವರು ಸಾವನಪ್ಪಿದ ಬಗ್ಗೆ ಮಾಹಿತಿ ನೀಡಿದ್ದು, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು `9ಕ್ಕೂ ಅಧಿಕ ಜೀವ ಹಾನಿ ನಡೆದಿದೆ’ ಎಂದಿದ್ದಾರೆ. ಕುಮಟಾ ಶಾಸಕ ದಿನಕರ ಶೆಟ್ಟಿ ಅವರು 20ಕ್ಕೂ ಅಧಿಕ ಜನ ಸಾವನಪ್ಪಿರುವ ಬಗ್ಗೆ ಬರೆದುಕೊಂಡಿದ್ದಾರೆ. ಬಸ್ಸಿನಲ್ಲಿ ಕುಮಟಾದ ಪ್ರಯಾಣಿಕರು ಸಹ ಇದ್ದಿದ್ದರಿಂದ ಜನರಲ್ಲಿ ಗೊಂದಲ ಮುಂದುವರೆದಿದೆ.
ಈ ನಡುವೆ ನಾಪತ್ತೆ ಆದವರ ಶೋಧ ಮುಂದುವರೆದಿದೆ. ಸ್ಥಳದಲ್ಲಿ ಸಿಕ್ಕ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. `ಇನ್ನೂ ಮೂವರ ಶವ ಸಿಕ್ಕಿದ್ದು, ಅವರು ಅದೇ ಬಸ್ಸಿನಲ್ಲಿದ್ದವರಾ? ಎನ್ನುವುದರ ಬಗ್ಗೆ ಖಚಿತವಿಲ್ಲ’ ಎಂದು ಸಾರಿಗೆ ಸಚಿವರು ಹೇಳಿದ್ದಾರೆ. ಸಾವನಪ್ಪಿದವರ ಸಂಖ್ಯೆ 9 ಎಂದು ದೃಢವಾಗಿದ್ದರೂ ಅದರಲ್ಲಿ ಮೂವರು ಅದೇ ಬಸ್ಸಿನ ಪ್ರಯಾಣಿಕರಾ? ಅಥವಾ ಬೇರೆ ವಾಹನದಲ್ಲಿದ್ದವರಾ? ಎಂದು ಗೊತ್ತಾಗದ ಕಾರಣ ಸಚಿವರು ಹಾಗೂ ಅಧಿಕಾರಿಗಳಲ್ಲಿ ಗೊಂದಲ ಉಂಟಾಗಿದೆ.
ಪ್ರಯಾಣಿಕರ ಹಾಗೂ ಕುಟುಂಬದವರ ಆತಂಕ ದೂರ ಮಾಡಲು ಸರ್ಕಾರ ಸಹಾಯವಾಣಿ ಸ್ಥಾಪಿಸಿದೆ. 9480803100 ಹಾಗೂ 9480803170 ಸಹಾಯವಾಣಿಗಳು ಗೊಂದಲ ನಿವಾರಿಸುವ ಪ್ರಯತ್ನ ಮಾಡುತ್ತಿದೆ.