ಕಾರವಾರದಲ್ಲಿ ನಡೆಯುತ್ತಿರುವ ಕರಾವಳಿ ಉತ್ಸವ ದಿನದಿಂದ ದಿನಕ್ಕೆ ಮೆರಗುಪಡೆಯುತ್ತಿದ್ದು, ಈ ದಿನ ನಡೆದ ರಂಗೋಲಿ ಹಾಗೂ ಅಡುಗೆ ಸ್ಪರ್ಧೆಯಲ್ಲಿ ಅನೇಕರು ಭಾಗವಹಿಸಿದ್ದಾರೆ. ಜಿಲ್ಲೆಯ ಬೇರೆ ಬೇರೆ ತಾಲೂಕುಗಳಿಂದ ಜನ ಆಗಮಿಸಿ ತಮ್ಮ ಪ್ರತಿಭೆ ಪ್ರದರ್ಶಿಸಿದ್ದಾರೆ.
ಉತ್ಸವದ ಅಂಗವಾಗಿ ನಡೆದ ಸ್ಪರ್ಧೆಯಲ್ಲಿ ಕಾಣಿಸಿದ ರಂಗೋಲಿಗಳು ನೋಡುಗರ ಕಣ್ಮನ ಸೆಳೆದವು. ಕರಾವಳಿ ಶೈಲಿಯ ಅಡುಗೆಗಳು ಬಾಯಿ ಚಪ್ಪರಿಸುವಂತೆ ಮಾಡಿದವು. ಜಿಲ್ಲಾಧಿಕಾರಿಗಳ ನೂತನ ಕಚೇರಿಯಲ್ಲಿ ಆಯೋಜಿಸಲಾದ ರಂಗೋಲಿ ಸ್ಪರ್ಧೆಗೆ ಮಹಿಳೆಯರು ಉತ್ಸಾಹದಿಂದ ಆಗಮಿಸಿದ್ದರು. ತಮ್ಮ ನಿಯೋಜಿತ ಸ್ಥಳದಲ್ಲಿ ಬಗೆ ಬಗೆಯ ರಂಗೋಲಿ ಹಾಕಿದ್ದರು. ಹೂವಿನ ದಳಗಳಲ್ಲಿ ಹಾಕಿದ ಬಣ್ಣ ಬಣ್ಣದ ರಂಗೋಲಿ ಜೊತೆ ಧಾನ್ಯಗಳಿಂದ ಶೃಂಗರಿಸಿದ ರಂಗೋಲಿಗಳು ಜನರ ಮನ ಗೆದ್ದವು.
14-18 ವರ್ಷದ ಮಕ್ಕಳಿಗೆ ಆಯೋಜಿಸಿದ್ದ ಪ್ರೀ ಹ್ಯಾಂಡ್ ರಂಗೋಲಿ ಸ್ಪರ್ಧೆಯಲ್ಲಿ ಸದಾಶಿವಗಡದ ಕಣಸಗಿರಿಯ ಧನಶ್ರೀ ರತ್ನಾಕರ ಮಾಳ್ವೇಕರ ಪ್ರಥಮ, ಹಬ್ಬುವಾಡದ ಆರ್ಯಶ್ರೀ ಎ ದುರ್ಗೇಕರ ದ್ವಿತೀಯ, ಹಬ್ಬುವಾಡದ ಸ್ಮೃತಿ ಸಂಜೀವ ವರ್ಣೇಕರ ತೃತೀಯ ಬಹಮಾನಪಡೆದರು. 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಪ್ರೀ ಹ್ಯಾಂಡ್ ರಂಗೋಲಿ ಸ್ಪರ್ಧೆಯಲ್ಲಿ ಕದ್ರಾದ ಸುಮಾ ಸುರೇಂದ್ರ ಪೆಡ್ನೇಕರ ಪ್ರಥಮ, ಬಾಡದ ಸಂಕ್ರಿವಾಡಾದ ಭಾರತಿ ಅರುಣ ನಾಯ್ಕ ದ್ವಿತೀಯ, ಗುರುಮಠದ ಕೊಮಲ್ ಮಂಜುನಾಥ ಪಾಳಂಕರ ತೃತೀಯ ಬಹುಮಾನಪಡೆದರು. 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಹೂವಿನ ರಂಗೋಲಿ ಸ್ಪರ್ಧೆಯಲ್ಲಿ ಕೋಡಿಭಾಗದ ರಾಸಿಕಾ ಕೆ ಗೋಕರ್ಣ ಪ್ರಥಮ, ಬಿಣಗಾದ ಅರ್ಪಿತಾ ಅಶೋಕ ಗೌಡ ದ್ವಿತೀಯ, ಅಂಕೋಲಾದ ಪ್ರೇಮಾ ಆರ್ ಗಾಂವಕರ ತೃತೀಯ ಬಹಮಾನ ಪಡೆದರು.
ನಗರದ ಮಾಲಾದೇವಿ ಮೈದಾನದಲ್ಲಿ ಕರಾವಳಿ ಶೈಲಿಯ ತರಹೇವಾರು ಅಡುಗೆಗಳು ಗಮನ ಸೆಳೆದವು. ಮಹಿಳೆಯರ ಜೊತೆ ಪುರುಷರು ಸ್ಪರ್ಧೆಗೆ ಬಂದು ಪೈಪೋಟಿ ನೀಡಿದ್ದು, ಬಗೆ ಬಗೆ ಖಾದ್ಯಗಳು ಬಾಯಲ್ಲಿ ನೀರುಣಿಸಿದವು. ಕರಾವಳಿ ಶೈಲಿಯ ಮೀನಿನ ಸಾರು, ಫ್ರೆöÊ, ಮಸಾಲಾ ಬಂಗಡೆ ಹಾಗೂ ಸಸ್ಯಹಾರಿ ಅಡುಗೆಗಳನ್ನು ಸವಿಯಲು ಪ್ರೇಕ್ಷಕರು ಮುಗಿಬಿದ್ದರು. ತಟ್ಟೆಯಲ್ಲಿ ವಿಶೇಷವಾಗಿ ಪ್ರಸ್ತುತ ಪಡಿಸಿದ ಎಲ್ಲಾ ಅಡುಗೆಗಳ ರುಚಿ ನೋಡಿದ ನಿರ್ಣಾಯಕರು ತೀರ್ಪು ನೀಡಿದರು. ಮಾಂಸಹಾರಿ ಅಡುಗೆ ಸ್ಪರ್ಧೆಯಲ್ಲಿ ಅಸ್ನೋಟಿ ಪ್ರಸಾದ ವಿ ಸಾಳುಂಕೆ ಪ್ರಥಮ, ಕಾರವಾರದ ಹೊಸಳಿ ನಜರಿನ ಶೇಖ್ ದ್ವಿತೀಯ, ಶುಭಾಂಗಿ ಮಂಜುನಾಥ ಶಿರೋಡಕರ ತೃತೀಯ ಬಹಮಾನ ಪಡೆದದರು. ಶಾಖಾಹಾರಿ ಅಡುಗೆ ಸ್ಪರ್ಧೆಯಲ್ಲಿ ಕ್ರೀಮ್ಸ್ ಕ್ಯಾಂಪಸ್ನ ಶ್ವೇತಾ ಕೆ ಎಸ್ ಪ್ರಥಮ, ಮಾಜಾಳಿಯ ಅಶ್ವಿನಿ ಅಶೋಕ ಕುಲಕರ್ಣಿ ದ್ವಿತೀಯ, ಯಲ್ಲಾಪುರ ಅಂಬೇಡ್ಕರ್ ನಗರದ ರೂಪಾ ಪಟನಕರ ತೃತೀಯ ಬಹಮಾನಪಡೆದರು. ಜಿಲ್ಲಾಧಿಕಾರಿ ಕೆ ಲಕ್ಷಿಪ್ರಿಯಾ ಅವರು ಮಾಲಾದೇವಿ ಕ್ರೀಡಾಂಗಣದಲ್ಲಿ ನಡೆದ ಅಡುಗೆ ಸ್ಪರ್ಧೆಯಯಲ್ಲಿ ಆಹಾರ ಸವಿದರು.