ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ ಅವರು ಶುಕ್ರವಾರ ಉತ್ತರ ಕನ್ನಡ ಜಿಲ್ಲೆಗೆ ಬರುತ್ತಿದ್ದಾರೆ. ಯಾರೂ ಅವರಿಗೆ ಸುಗಂಧರಾಜ ಹೂವಿನ ಹಾರ ಹಾಕದಂತೆ ಸರ್ಕಾರ ಸೂಚನೆ ನೀಡಿದೆ!
ಸಾಮಾನ್ಯವಾಗಿ ಜಿಲ್ಲೆಗೆ ಯಾರೇ ಗಣ್ಯರು ಭೇಟಿ ನೀಡಿದರೂ ಅಭಿಮಾನಿಗಳು ಅವರಿಗೆ ಹೂಮಾಲೆ ಹಾಕಿ ಸ್ವಾಗತಿಸುತ್ತಾರೆ. ಜೊತೆಗೆ ಶಾಲು ಹೊದೆಸಿ ಗೌರವಿಸುತ್ತಾರೆ. ಆದರೆ, ಡಿ ಕೆ ಶಿವಕುಮಾರ ಅವರು ಈ ಶಾಲು-ಸನ್ಮಾನದಿಂದ ಕೊಂಚ ದೂರ ಉಳಿದಿದ್ದಾರೆ. ಅದಾಗಿಯೂ, ಅವರ ಬೆಂಬಲಿಗರು ಹೂವಿನ ಮಾಲೆ ಹಾಕಿ ಸಂಭ್ರಮಿಸುತ್ತಾರೆ. ಬೇರೆ ಬೇರೆ ಹೂವಿನ ಮಾಲೆ ಹಾಕಿದರೆ ಸುಮ್ಮನಿರುವ ಅವರು ಸುಗಂಧ ರಾಜ ಹೂವು ಕಂಡರೆ ಸಿಡಿಮಿಡಿಯಾಗುತ್ತಾರೆ!
ಸುಗಂಧ ರಾಜ ಹೂವಿನ ಸುವಾಸನೆ ಎಂದರೆ ಡಿಕೆ ಶಿವಕುಮಾರ ಅವರಿಗೆ ಅಲರ್ಜಿ. ಹೀಗಾಗಿ ಅವರ ಪ್ರವಾಸದ ಪಟ್ಟಿಯಲ್ಲಿಯೇ ಆ ಹೂವಿನ ಮಾಲೆ ಹಾಕದಂತೆ ಸರ್ಕಾರವೇ ಸೂಚಿಸಿದೆ. ಅದಾಗಿಯೂ, ಭದ್ರತಾ ಪಡೆಯವರು ಆ ಹೂವಿನ ಮಾಲೆ ಬರದಂತೆ ಎಚ್ಚರಿಕೆವಹಿಸಲಿದ್ದು, ಡಿ ಕೆ ಶಿವಕುಮಾರ ಅವರ ಪ್ರವಾಸದ ವೇಳೆ ಅವರ ಅಭಿಮಾನಿಗಳು ಸುಗಂಧ ರಾಜ ಹೂವಿನಿಂದ ದೂರವಿರುವುದು ಒಳಿತು.
ಡಿಕೆ ಶಿವಕುಮಾರ ಅವರು ಹೆಲಿಕಾಪ್ಟರ್ ಮೂಲಕ ಉತ್ತರ ಕನ್ನಡ ಜಿಲ್ಲೆಗೆ ಬರಲಿದ್ದಾರೆ. ಕುಮಟಾ ತಾಲೂಕು ಆಡಳಿತ ಅವರ ಆಗಮನಕ್ಕೆ ಸಿದ್ಧತೆ ನಡೆಸಿದೆ. ಗೋಕರ್ಣದ ಗೋಗರ್ಭ ಕ್ರೀಡಾಂಗಣದಲ್ಲಿ ಹೆಲಿಕಾಪ್ಟರ್ ನಿಲ್ಲಲಿದ್ದು, ಬುಧವಾರ ಕುಮಟಾ ತಹಶೀಲ್ದಾರ ಶ್ರೀಕೃಷ್ಣ ಕಾಮಕರ್ ಅಲ್ಲಿ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಗೋಕರ್ಣ ನಂತರ ಅವರು ಅಂಕೋಲಾ ಭೇಟಿ ಮಾಡಲಿದ್ದು, ತಮ್ಮ ಪೂರ್ವ ನಿಗಧಿತ ಕಾರ್ಯಕ್ರಮ ಮುಕ್ತಾಯದ ನಂತರ ಬೆಳಗಾವಿಗೆ ಮರಳಲಿದ್ದಾರೆ.