ಧನಲಕ್ಷ್ಮಿ ಸ್ವೀಟ್ಸ್ ಹಾಗೂ ರಾಮದೇವ ಎಜನ್ಸಿ ಮಾಲಕರ ನಡುವೆ ವೈಮನಸ್ಸು ಉಂಟಾಗಿದ್ದು, ಅದು ಹೊಡೆದಾಟದ ಸ್ವರೂಪಪಡೆದಿದೆ. ತಮಗಾದ ಅನ್ಯಾಯದ ವಿರುದ್ಧ ಎರಡೂ ಕಡೆಯವರು ಪೊಲೀಸರ ಮೊರೆ ಹೋಗಿದ್ದಾರೆ.
ಕಾರವಾರದ ಹೆಂಜಾ ನಾಯ್ಕ ಸರ್ಕಲ್ ಬಳಿಯ ಧನಲಕ್ಷ್ಮಿ ಸ್ವೀಟ್ಸ್ ಮಳಿಗೆ ಇದೆ. ಅಲ್ಲಿಯೇ ಪಕ್ಕದಲ್ಲಿ ರಾಮದೇವ ಎಜನ್ಸಿಯೂ ಇದೆ. ಕೆ ಎಚ್ ಬಿ ಕಾಲೋನಿಯ ರಾಜು ಫುಖರಾಜ ಬಾಟಿ ಅವರು ಧನಲಕ್ಷ್ಮಿ ಸ್ವೀಟ್ಸ್ ಮಳಿಗೆ ನಡೆಸುತ್ತಿದ್ದಾರೆ. ಸಂಕ್ರಿವಾಡದ ರಣಚೋರ ರಾಮಾ ಚೌದರಿ ಅವರು ರಾಮದೇವ ಎಜನ್ಸಿ ನಡೆಸುತ್ತಿದ್ದಾರೆ.
ಈ ಎರಡು ಮಳಿಗೆಯವರ ನಡುವೆ ಡಿಸೆಂಬರ್ 12ರಂದು ರಾತ್ರಿ ಹೊಡೆದಾಟ ನಡೆದಿದೆ. ಮಾಹಿತಿಗಳ ಪ್ರಕಾರ, ಧನಲಕ್ಷ್ಮಿ ಸ್ವೀಟ್ಸ್ ಅಂಗಡಿಯಲ್ಲಿ ರಾಜು ಅವರು ವ್ಯಾಪಾರ ನಡೆಸುತ್ತಿದ್ದಾಗ ರಣಚೋರ ಚೌದರಿ ಕಡೆಯವರು ಅವರ ಅಂಗಡಿ ಮುಂದೆ ಚಪ್ಪಲಿ ಎಸೆದಿದ್ದಾರೆ. ಈ ವಿಷಯವಾಗಿ ಪ್ರಶ್ನಿಸಿದಾಗ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಅದೇ ಹೊಡೆದಾಟಕ್ಕೆ ಕಾರಣವಾಗಿದೆ.
`ರಣಚೋರ ರಾಮಾ ಚೌದರಿ ಅವರ ಜೊತೆ ಸಂತೋಷ, ಪದ್ಮರಾಜ ಹಾಗೂ ಪ್ರಕಾಶ ಸೇರಿ ಅಂಗಡಿ ಮುಂದೆ ಚಪ್ಪಲಿ ಅಂಗಡಿ ಹಾಕಿದ್ದು ಇದನ್ನು ಪ್ರಶ್ನಿಸಿದಕ್ಕಾಗಿ ತಂದೆ-ತಾಯಿ ಕೈ ತಿರುಪಿ ಹಲ್ಲೆ ಮಾಡಿದ್ದಾರೆ’ ಎಂದು ರಾಜು ಬಾಟಿ ಅವರು ಪೊಲೀಸ್ ದೂರು ನೀಡಿದ್ದಾರೆ. `ರಾಮದೇವ ಎಜನ್ಸಿಯಲ್ಲಿ ತಾನೂ ವ್ಯಾಪಾರ ಮಾಡುವಾಗ ಫುಖರಾಜ ಬಾಟಿ, ಹಿರಾರಮಾ, ರಾಜು, ಉಷಾ, ಡಿಂಪಲ್ ಸೇರಿ ಹಲ್ಲೆ ಮಾಡಿದ್ದಾರೆ’ ಎಂದು ರಣಚೋರ ಚೌದರಿ ದೂರಿದ್ದಾರೆ.
`ಈ ವೇಳೆ ರಾಜು ಅವರು ಕತ್ತರಿಯಿಂದ ಚುಚ್ಚಿದ್ದಾರೆ’ ಎಂದು ರಣಚೋರ ಚೌದರಿ ಹೇಳಿದ್ದಾರೆ. ಕಾರವಾರ ನಗರ ಠಾಣೆ ಪೊಲೀಸರು ಎರಡು ಕಡೆಯವರ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.