ಭಾಸ್ಕರ ಮರಾಠಿ ಅವರ ತೋಟದಿಂದ ಗೋಪಾಲ ಸಿದ್ದಿ ಅವರ ಮನೆ ಸಮೀಪದವರೆಗೆ ಹಾದುಹೋಗಿದ್ದ ವಿದ್ಯುತ್ ತಂತಿಯನ್ನು ಕಳ್ಳರು ಕೊಂಡೊಯ್ದಿದ್ದಾರೆ. ಹೆಸ್ಕಾಂ ಸಿಬ್ಬಂದಿ ಎರಡು ದಿನ ಕಳ್ಳರ ಹುಡುಕಾಟ ನಡೆಸಿದರೂ ಅವರು ಸಿಗದ ಕಾರಣ ಪೊಲೀಸರ ಮೊರೆ ಹೋಗಿದ್ದಾರೆ.
ಯಲ್ಲಾಪುರದ ಕಿರವತ್ತಿ ವ್ಯಾಪ್ತಿಯಲ್ಲಿ ಈ ವಿದ್ಯುತ್ ತಂತಿ ಕಳ್ಳತನ ನಡೆದಿದೆ. ಜನಶೆಟ್ಟಿಕೊಪ್ಪದ ಭಾಸ್ಕರ ಮರಾಠಿ ಅವರ ತೋಟದಿಂದ ಕೈರಗಾಳಿ ಗ್ರಾಮದ ಟಿಸಿವರೆಗೆ ಹಾದು ಹೋಗಿದ್ದ 3 ಲೈನ್ ವಿದ್ಯುತ್ ತಂತಿಯನ್ನು ಕಳ್ಳರು ಕದ್ದಿದ್ದಾರೆ. ಇಲ್ಲಿ 484ಮೀಟರ್ ಉದ್ದದ ವಿದ್ಯುತ್ ಮಾರ್ಗ ಕಳ್ಳತನವಾಗಿದೆ. ಇದರೊಂದಿಗೆ ಕೈರಗಾಳಿ ಟಿಸಿಯಿಂದ ಅದೇ ಊರಿನ ಗೋಪಾಲ ಸಿದ್ದಿ ಅವರ ಮನೆಯವರೆಗಿನ ಎರಡು ಲೈನ್ ವಿದ್ಯುತ್ ತಂತಿಯನ್ನು ಕಳ್ಳರು ಕೊಂಡೊಯ್ದಿದ್ದಾರೆ. ಇಲ್ಲಿಯೂ 210 ಮೀಟರ್ ವಿದ್ಯುತ್ ತಂತಿ ಮಾಯವಾಗಿದೆ.
ಒಂದು ಕಡೆಯಿಂದ ವಿದ್ಯುತ್ ಪ್ರಸಾರ ಸಮಸ್ಯೆ ಆದರೆ ಇನ್ನೊಂದು ಕಡೆಯಿಂದ ವಿದ್ಯುತ್ ಪೂರೈಸಲು ಈ ಭಾಗದಲ್ಲಿ ಪ್ರತ್ಯೇಕ ತಂತಿ ಅಳವಡಿಸಲಾಗಿತ್ತು. ಸದ್ಯ ಆ ಪ್ರತ್ಯೇಕ ಲೈನಿನ ತಂತಿ ಕಳ್ಳರ ಪಾಲಾಗಿದೆ. ಅಪಾಯಕಾರಿಯಾದ ವಿದ್ಯುತ್ ಕಂಬ ಏರಿ ಕಳ್ಳರು ಅಲ್ಲಿದ್ದ ತಂತಿ ಕದ್ದಿದ್ದಾರೆ. ಕಳ್ಳತನಕ್ಕಾಗಿ ಅವರು ವಿದ್ಯುತ್ ತಂತಿ ತುಂಡು ಮಾಡಿದ್ದು, ಈ ಅವಧಿಯಲ್ಲಿ ವಿದ್ಯುತ್ ಕಂಬವೊAದು ಮುರಿದಿದೆ. ಡಿಸೆಂಬರ್ 12ರಿಂದ 15ರವರೆಗಿನ ಅವಧಿಯಲ್ಲಿ ಈ ಕಳ್ಳತನ ನಡೆದಿರುವ ಅನುಮಾನಗಳಿವೆ. ಒಂದೇ ಮಾರ್ಗದ ಎರಡು ಕಡೆ ಸೇರಿ ಒಟ್ಟು 1872 ಮೀಟರ್ ವಿದ್ಯುತ್ ತಂತಿ ಕಳ್ಳರಿಗೆ ಸಿಕ್ಕಿದ್ದು, ಈ ಕಳ್ಳತನದಿಂದ ಹೆಸ್ಕಾಂ’ಗೆ 98 ಸಾವಿರ ರೂ ನಷ್ಟವಾಗಿದೆ.
ವಿದ್ಯುತ್ ತಂತಿ ಕಳ್ಳತನದ ಬಗ್ಗೆ ಅರಿತ ಕಿರವತ್ತಿಯ ಹೆಸ್ಕಾಂ ಅಧಿಕಾರಿ ವಿಶಾಲ ಹೈಗಾರ್ ಅವರು ಮೊದಲು ಕಳ್ಳರ ಹುಡುಕಾಟ ಮಾಡಿದ್ದಾರೆ. ಅದಾದ ನಂತರ ಸಹಾಯಕ ಕಾರ್ಯನಿವಾಹಕ ಇಂಜೀನಿಯರ್ ಅವರಿಗೆ ವಿಷಯ ಮುಟ್ಟಿಸಿದ್ದಾರೆ. ಕಳ್ಳರು ಸಿಗದೇ ಇದ್ದಾಗ ಪೊಲೀಸರ ಮೊರೆ ಹೋಗಿದ್ದು, ಪ್ರಕರಣ ದಾಖಲಿಸಿದ ಯಲ್ಲಾಪುರ ಪೊಲೀಸರು ತನಿಖೆ ಶುರು ಮಾಡಿದ್ದಾರೆ.